ಕಾಲೇಜು ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ, ಹಾಗೂ ಅತ್ಯಾಚಾರಗಳನ್ನು ಖಂಡಿಸಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಎಸ್ಎಫ್ಐ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಕಾಲೇಜಿನ ಇಬ್ಬರು ಉಪನ್ಯಾಸಕರು ವಿದ್ಯಾರ್ಥಿನಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವುದನ್ನ ವಿರೋಧಿಸಿ ತಾಲೂಕಾ ಉಪ ತಹಸೀಲ್ದಾರ್ ವೆಂಕಟೇಶ್ ಅವರ ಮುಖಾಂತರ ರಾಷ್ಟ್ರಪತಿರವರಿಗೆ ಎಸ್ಎಫ್ಐ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರೆಡ್ಡಿ ಮಾತನಾಡಿ, “ಕ್ಯಾಂಪಸ್ನಲ್ಲಿ ನಾವು ಸುರಕ್ಷಿತವಾಗಿಲ್ಲದಿದ್ದರೆ, ಇನ್ನೆಲ್ಲಿ ನಾವು ಸುರಕ್ಷಿತ ಎಂಬ ಪ್ರಶ್ನೆ ಕಾಡುತ್ತಿದೆ. ಮೋದಿ ಸರ್ಕಾರದ ಪ್ರಸ್ತುತ ಆಡಳಿತದಲ್ಲಿ ದೇಶಾದ್ಯಂತ ಕ್ಯಾಂಪಸ್ಗಳಲ್ಲಿ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಗಳು ಸಾಮಾನ್ಯ ಸಂಗತಿಗಳಾಗಿವೆ. ಮೂಡುಬಿದಿರೆ ಕಾಲೇಜಿನ ಇಬ್ಬರು ಉಪನ್ಯಾಸಕರು ವಿದ್ಯಾರ್ಥಿನಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಸರಿಯಾದ ತನಿಖೆಯನ್ನು ನಡೆಸಬೇಕು. ಉನ್ನತ ಮಟ್ಟದ ತನಿಖೆಯಾಗದಿದ್ದರೆ ಆರೋಪಿಗಳು ತಪ್ಪಿಸಿ ಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ ತಪ್ಪಿತಸ್ಥರಿಗೆ ಉಗ್ತ ಶಿಕ್ಷೆಯಾಗಬೇಕು” ಎಂದು ಒತ್ತಾಯಿಸಿದರು.

ಎಸ್ಎಫ್ಐನ ಜಿಲ್ಲಾ ಸಹಕಾರ್ಯದರ್ಶಿ ಕೆ. ಎ ಪವನ್ ಕುಮಾರ್ ಮಾತನಾಡಿ, “ರಾಜ್ಯದಲ್ಲಿ ಶಾಲಾ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣ ಹೆಚ್ಚಾಗುತ್ತಿವೆ. ಎಲ್ಲಾ ಶಾಲೆ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಯನ್ನು ರಚಿಸಬೇಕು. ಒಡಿಶಾದ ಫಕೀರ್ ಮೋಹನ್ ಕಾಲೇಜಿನಲ್ಲಿ ಇತ್ತೀಚೆಗೆ ಕ್ಯಾಂಪಸ್ನೊಳಗೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಕ್ಯಾಂಪಸ್ಗಳಲ್ಲಿನ ಸುರಕ್ಷತೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ ಎಂದರು.
ಪಶ್ಚಿಮ ಬಂಗಾಳದ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಕಾಲೇಜಿನ ಯೂನಿಯನ್ ಕಚೇರಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಮಾಡಲಾಗಿದೆ. ಮಹಾರಾಷ್ಟ್ರದ ಥಾಣೆಯಲ್ಲಿರುವ ಶಾಲೆಯೊಳಗೆ, ಬೆರಳಚ್ಚುಗಳ ರೂಪದಲ್ಲಿ ಒಪ್ಪಿಗೆ ಪಡೆದ ನಂತರ, ಮುಟ್ಟಿನ ತಪಾಸಣೆಗಾಗಿ ವಿದ್ಯಾರ್ಥಿನಿಯರನ್ನು ಬಲವಂತವಾಗಿ ವಿವಸ್ತ್ರಗೊಳಿಸಲಾಯಿತು. ಈ ಘಟನೆಗಳ ತೀವ್ರವಾಗಿ ವಿರೋಧ ವ್ಯಕ್ತವಾದರೂ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತವಾಗಿ ಕ್ರಮ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡಿವೈಎಫ್ಐ ವಿಜಯನಗರ ಜಿಲ್ಲಾಧ್ಯಕ್ಷ ವಿ ಸ್ವಾಮಿ ಮಾತನಾಡಿ, “ಅಪರಾಧಿಗಳ ವಿರುದ್ಧ ದೂರು ದಾಖಲಿಸಿದ ನಂತರವೂ ಫಕೀರ್ ಮೋಹನ್ ಕಾಲೇಜಿನಲ್ಲಿ ಬಲಿಪಶು ತೀವ್ರವಾದ ಸುಟ್ಟಗಾಯಗಳಿಗೆ ಒಳಗಾಗಿ ಆಕೆಯ ಜೀವವನ್ನು ಬಲಿ ತೆಗೆದುಕೊಂಡಿದ್ದರೂ ಅಪರಾಧಿಗಳ ವಿರುದ್ಧ ದೂರು ದಾಖಲಿಸಿದ ನಂತರವೂ ಆರೋಪಿಯನ್ನು ರಕ್ಷಿಸುವ ಮೂಲಕ ಸರ್ಕಾರ ಆರೋಪಿಯ ಪರವಾಗಿ ನಿಂತಿದೆ” ಎಂದು ಖಂಡಿಸಿದರು.
ಇದನ್ನೂ ಓದಿ: ‘ಮನೆ-ಮನೆಗೆ ಪೊಲೀಸ್’ ಯೋಜನೆಗೆ ಗೃಹ ಸಚಿವರಿಂದ ಚಾಲನೆ: ಏನಿದು ಯೋಜನೆ?
ಎಸ್ಎಫ್ಐ ತಾಲೂಕು ಮುಖಂಡರಾದ ಲೋಕೇಶ್, ರುದ್ರಮ್ಮ, ನಂದಿನಿ, ಶ್ವೇತ , ಮೀನಾಕ್ಷಿ, ವಿನಾಯಕ್ ಹಾಗೂ ನೂರಾರು ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಕೂಡ ಸಾಥ್ ನೀಡಿದವು.
