ಫೋಟೊ ತೆಗೆಯುವ ನೆಪದಲ್ಲಿ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಸೇತುವೆ ಮೇಲಿಂದ ಪತಿಯನ್ನು ಪತ್ನಿ ನದಿಗೆ ತಳ್ಳಿದ ಆರೋಪ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ನದಿಗೆ ತಳ್ಳಿದ ಪತ್ನಿ ಅಪ್ರಾಪ್ತೆಯಾಗಿದ್ದು ಬಾಲ್ಯ ವಿವಾಹ ನಡೆದ ಗಂಭೀರ ಆರೋಪ ಕೇಳಿ ಬಂದಿದೆ.
ರಾಯಚೂರು ತಾಲೂಕಿನ ದೇವಸುಗೂರು ಗ್ರಾಮದ ನಿವಾಸಿಯಾಗಿರುವ ತಾತಪ್ಪ ಹಾಗೂ ಪತ್ನಿ ಗದ್ದೆಮ್ಮ ಕೃಷ್ಣಾ ನದಿ ಬ್ರಿಡ್ಜ್ ಬಳಿ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಪತ್ನಿ ನೀರಿಗೆ ತಳ್ಳಿದ್ದಾಳೆ ಎಂದು ಆರೋಪಿಸಲಾಗಿತ್ತು. ಪ್ರಕರಣದ ಬೆನ್ನಲ್ಲೇ ತಾತಪ್ಪ, ಪತ್ನಿ ಗದ್ದೆಮ್ಮಳಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ ಎನ್ನಲಾಗಿದೆ.
ಈ ಮಧ್ಯೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಪತ್ನಿಯೇ ನದಿಗೆ ತಳ್ಳಿ ಹತ್ಯೆಗೆ ಯತ್ನಿಸಿದ್ದಾಳೆಂದು ಆರೋಪಿಸಿರುವ ತಾತಪ್ಪ ವಿರುದ್ಧ ಬಾಲ್ಯವಿವಾಹ ಆರೋಪ ಕೇಳಿ ಬಂದಿದೆ. ತಾತಪ್ಪ, ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪತ್ನಿ ಗದ್ದೆಮ್ಮಳ ವಯಸ್ಸಿನ ದಾಖಲಾತಿ ನೀಡುವಂತೆ ಪತಿ ತಾತಪ್ಪನಿಗೆ ಡೆಡ್ಲೈನ್ ನೀಡಲಾಗಿದೆ.
ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಪತ್ರ ತಲುಪುತ್ತಿದ್ದಂತೆಯೇ ಎಚ್ಚೆತ್ತ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ತಾತಪ್ಪನ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಸಿಡಿಪಿಒ ಮತ್ತು ಗ್ರಾಮ ಪಂಚಾಯಿ್ತಿ ಸಿಬ್ಬಂದಿ ಭೇಟಿ ನೀಡಿ ವಿವಾಹದ ಕುರಿತು ತಾತಪ್ಪನ ಕುಟುಂಬದ ಪ್ರಮುಖರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆದ್ರೆ, ತಾತಪ್ಪ, ಪತ್ನಿ ಗದ್ದೆಮ್ಮಗಳ ಬಗ್ಗೆ ಯಾವುದೇ ದಾಖಲೆಗಳನ್ನು ನೀಡದೇ ಕೇವಲ ಮೌಖಿಕವಾಗಿ ಮಾಹಿತಿ ನೀಡಿದ್ದಾನೆ.
ಇನ್ನು ಪತ್ನಿ ಗದ್ದೆಮ್ಮಗಳ ಅಧಿಕೃತ ದಾಖಲಾತಿಗಳನ್ನು ನೀಡುವಂತೆ ತಾತಪ್ಪನಿಗೆ ಕೇಳಿದ್ದಾರೆ. ಇದಕ್ಕೆ ತಾತಪ್ಪ ಕುಟುಂಬಸ್ಥರು, ದಾಖಲೆ ನೀಡಲು 2 ದಿನ ಕಾಲಾವಕಾಶ ಕೇಳಿದ್ದಾರೆ. ನಾಳೆ (ಜುಲೈ 21) ದಾಖಲಾತಿಗಳನ್ನು ಒದಗಿಸಬೇಕಿದೆ. ಒಂದು ವೇಳೆ ದಾಖಲೆಗಳನ್ನು ನೀಡದಿದ್ದರೆ ಪತಿ ತಾತಪ್ಪ ಹಾಗೂ ಕುಟುಂಬಸ್ಥರ ವಿರುದ್ಧ ಬಾಲ್ಯವಿವಾಹ ಅಡಿಯಲ್ಲಿ ಎಫ್ಐಆರ್ ದಾಖಲು ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಸಗೊಬ್ಬರ ಪೂರೈಕೆ ಮಾಡುವಂತೆ ರೈತ ಸಂಘಟನೆ ಒತ್ತಾಯ
ತಾತೆಪ್ಪ 15 ವರ್ಷ 8 ತಿಂಗಳ ವಯಸ್ಸಿನ ಅಪ್ರಾಪ್ತ ಬಾಲಕಿ ಗದ್ದೆಮ್ಮಳನನ್ನು ತಾತಪ್ಪ ಮದುವೆ ಮಾಡಿಕೊಂಡಿರುವ ಬಗ್ಗೆ ಯಾದಗಿರಿ ಜಿಲ್ಲಾ ಮಹಿಳಾ ರಕ್ಷಣಾಧಿಕಾರಿಗಳ ತಂಡ ಪತ್ತೆ ಮಾಡಿದ್ದು, ಶಾಲಾ ದಾಖಲಾತಿ ಪ್ರಕಾರ ತಾತಪ್ಪನ ಪತ್ನಿ ಗದ್ದೆಮ್ಮ ಅಪ್ರಾಪ್ತೆ ಎನ್ನುವುದು ದೃಢವಾಗಿದೆ. ಈ ಸಂಬಂಧ ರಾಯಚೂರು ತಾಲೂಕಿನ ದೇವಸುಗೂರು ನಿವಾಸಿಯಾಗಿರುವ ಪತಿ ತಾತಪ್ಪನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಪತ್ರ ಬರೆದಿದೆ.