ಪ್ರಾರಂಭಿಕ ಹಂತದಲ್ಲೇ ಪ್ರಶ್ನೆಗೆ ಒಳಪಟ್ಟು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದ ಆಸಹಜ ಸಾವುಗಳ ಪ್ರಕರಣದ ತನಿಖೆಗೆ ಎಸ್.ಐ.ಟಿ ರಚಿಸಿರುವ ರಾಜ್ಯ ಸರಕಾರದ ಕ್ರಮವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿ ಸ್ವಾಗತಿಸುತ್ತದೆ.
80ರ ದಶಕದಲ್ಲಿ ನಡೆದ ಪದ್ಮಲತಾ ಪ್ರಕರಣದ ಸಂದರ್ಭದಿಂದಲೇ ಡಿವೈಎಫ್ಐ ಅಲ್ಲಿನ ವಿದ್ಯಮಾನಗಳಿಗೆ ವಿರೋಧ ವ್ಯಕ್ತಪಡಿಸಿದೆ. ಹಲವು ಹಂತಗಳಲ್ಲಿ ನಡೆದ ಹೋರಾಟಗಳಲ್ಲಿ ಪಾಲ್ಗೊಂಡಿದೆ. ಆ ಹೋರಾಟಗಳ ನಂತರವಷ್ಟೇ ಸಿ.ಬಿ.ಐ. ತನಿಖೆಗೆ ಒಪ್ಪಿಸಲಾಗಿತ್ತು.
ಹಲವು ವರ್ಷಗಳ ಹಿಂದೆ ಪ್ರಕರಣಗಳು ನಡೆದು ಉದ್ದೇಶಪೂರ್ವಕವಾಗಿ ಸಾಕ್ಷಿನಾಶ ಮಾಡಲಾಗಿದೆ ಎಂದೂ ಕುಖ್ಯಾತವಾಗಿದ್ದ ಪ್ರಕರಣಗಳು ಇರುವುದರಿಂದ ಕೂಲಂಕಷವಾದ ತನಿಖೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಪ್ರಾರಂಭದ ದಿನಗಳಿಂದ ಪ್ರಕರಣಗಳ ಬೆನ್ನು ಹತ್ತಿ ಹೋರಾಟ ಪ್ರತಿಭಟನೆ ಮಾಡಿದ ಸಂಘ, ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಸ್.ಐ.ಟಿ ಯು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಕಾಲವಿಳಂಬ ಮಾಡದೇ ನಿರ್ದಿಷ್ಟ ಕಾಲಮಿತಿಯಲ್ಲಿ ತನಿಖೆ ನಡೆದು ಸತ್ಯವನ್ನು ಹೊರಗೆಳೆಯಬೇಕು. ಸಿ.ಬಿ.ಐ.ನ್ಯಾಯಾಲಯದ ತೀರ್ಪು ಸೂಚಿಸಿರುವಂತೆ ಸೌಜನ್ಯ ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ತನಿಖೆಯ ದಾರಿ ತಪ್ಪಿಸಲು, ಸಾಕ್ಷಿ ನಾಶ ಮಾಡಿದ ತನಿಖಾಧಿಕಾರಿಗಳನ್ನು ತೀವ್ರ ತನಿಖೆಗೆ ಒಳಪಡಿಸಬೇಕು.
ಇದನ್ನೂ ಓದಿ: ಉತ್ತರ ಕನ್ನಡ | ಭಾರೀ ಮಳೆ ಮುನ್ಸೂಚನೆ; ಎಚ್ಚರ ವಹಿಸುವಂತೆ ಡಿಸಿ ಸೂಚನೆ
ನ್ಯಾಯದ ಪರ ನಿಂತು ಸತ್ಯವನ್ನು ಹೊರಗೆಳೆದು ನಿಜವಾದ ಆರೋಪಿಗಳನ್ನು ಮತ್ತು ಅವರ ರಕ್ಷಣೆಗೆ ನಿಂತವರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷ ಪೃಥ್ವಿ ಎಂ.ಜಿ. ಒತ್ತಾಯಿಸಿದ್ದಾರೆ.