ಎಸ್‌ಐಟಿಯಿಂದ ನಿಷ್ಪಕ್ಷ ತನಿಖೆ ಹೊರಬರಲಿ: ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಒತ್ತಾಯ

Date:

Advertisements

ಧರ್ಮಸ್ಥಳದಲ್ಲಿ ನಡೆದಿರುವ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆಯನ್ನು ಮಹಿಳಾ ಸಂಘಟನೆಗಳು, ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಗಳು, ಕಾರ್ಮಿಕ ಮತ್ತು ಅಂಚಿಗೊತ್ತಲ್ಪಟ್ಟ ಮಹಿಳೆಯರ ಸಂಘಟನೆಗಳನ್ನೊಳಗೊಂಡ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸ್ವಾಗತಿಸಿದ್ದು, ತನಿಖಾ ತಂಡವು ಅತ್ಯಂತ ನಿಷ್ಪಕ್ಷಪಾತವಾಗಿ, ಯಾವುದೇ ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸಿದೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸದಸ್ಯರು, ಧರ್ಮಸ್ಥಳದಲ್ಲಿ ನಡೆದ ಆಘಾತಕಾರಿ ಪ್ರಕರಣಗಳ ಬಗ್ಗೆ ಸಾಕ್ಷ್ಯಾಧಾರದೊಂದಿಗೆ ಮುಂದೆ ಬಂದಿರುವ ದೇವಾಲಯದ ಮಾಜಿ ಉದ್ಯೋಗಿಯ ಧೈರ್ಯವನ್ನು ನಾವು ಶ್ಲಾಘಿಸುತ್ತೇವೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಜನರ ಮತ್ತು ಸಂಘಟನೆಗಳ ಒತ್ತಾಯಕ್ಕೆ ಮಣಿದು ವಿಶೇಷ ತನಿಖಾ ದಳ (SIT) ರಚಿಸಿರುವುದನ್ನು ‘ನಾವೆದ್ದು ನಿಲ್ಲದಿದ್ದರೆ- ಕರ್ನಾಟಕ’ವು ಸ್ವಾಗತಿಸುತ್ತದೆ.

ಕರ್ನಾಟಕ ಸರ್ಕಾರವು ಧರ್ಮಸ್ಥಳದಲ್ಲಿ ಆರೋಪಿತ ಭೀಕರ ಅಪರಾಧಗಳ ತನಿಖೆಗಾಗಿ ವಿಶೇಷ ತನಿಖಾ ದಳ (SIT) ರಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಈ ತನಿಖಾ ದಳವು ಅತ್ಯಂತ ನಿಷ್ಪಕ್ಷಪಾತವಾಗಿ, ಯಾವುದೇ ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸುತ್ತೇವೆ. ಈ ಪ್ರಕರಣವನ್ನು ಇಡೀ ರಾಜ್ಯ ಮಾತ್ರವಲ್ಲ, ದೇಶವೇ ಇಂದು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿದೆ. ದಶಕಗಳ ಕಾಲ ಹೊರಜಗತ್ತಿಗೆ ತಿಳಿಯದೆ ವ್ಯವಸ್ಥಿತವಾಗಿ ಬಾಲಕಿಯರು, ಯುವತಿಯರು ಮತ್ತು ಮಹಿಳೆಯರು, ನಾಪತ್ತೆಯಾದ, ಆ ನಂತರ ಅತ್ಯಾಚಾರ ಮತ್ತು ಕೊಲೆಗೊಳಗಾಗಿದ್ದಾರೆ ಎಂಬ ಗಾಢ ಅನುಮಾನಗಳನ್ನು ಹುಟ್ಟಿಸಿರುವ ಈ ವ್ಯವಸ್ಥಿತ ಅಪರಾಧ ಸರಣಿಯಲ್ಲಿ, ಅಪರಾಧಿಗಳು ಯಾರೇ ಆಗಿರಲಿ, ಅವರು ಎಷ್ಟೇ ಬಲಾಢ್ಯರಾದರೂ ಅವರನ್ನು ತನಿಖಾ ತಂಡ ಕಾನೂನಿನ ಕಟಕಟೆಗೆ ತರಬೇಕು. ಇದರಿಂದ ಇನ್ನಿತರ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಒಂದು ಬಲವಾದ ಸಂದೇಶವನ್ನು ಸಮಾಜಕ್ಕೆ ನೀಡಿದಂತಾಗುತ್ತದೆ.

Advertisements

ಈಗ ಸಾಕ್ಷ್ಯ ಒದಗಿಸಲು ಮುಂದೆ ಬಂದಿರುವ ದೇವಾಲಯದ ಮಾಜಿ ಉದ್ಯೋಗಿ ಮತ್ತು ಇವರ ಕುಟುಂಬಕ್ಕೆ, ಜೊತೆಗೆ ಭವಿಷ್ಯದಲ್ಲಿ ದೂರು ದಾಖಲಿಸಲು ಮುಂದೆ ಬರಬಹುದಾದ ಇತರರಿಗೆ ಹಾಗೂ ಕಾಣೆಯಾದ ಅಥವಾ ಕೊಲೆಯಾದ ಹೆಣ್ಣುಮಕ್ಕಳ ಕುಟುಂಬಸ್ಥರಿಗೆ ಸಂಪೂರ್ಣ ರಕ್ಷಣೆಯನ್ನು ಸರ್ಕಾರ ಒದಗಿಸಬೇಕು. ಈ ಸಾಕ್ಷಿಯು 1995 ರಿಂದ 2014ರವರೆಗೆ ಧರ್ಮಸ್ಥಳದಲ್ಲಿ ನಡೆದ ಭೀಕರ ಅಪರಾಧಗಳಿಗೆ ಸಾಕ್ಷಿಯಾಗಿದ್ದಾರೆ ಎಂದು ಹೇಳಲಾಗಿದೆ. ಇವರ ಸುರಕ್ಷತೆಯನ್ನು ಖಾತರಿಪಡಿಸಲು 2018ರ ಸಾಕ್ಷಿಗಳ ರಕ್ಷಣಾ ಯೋಜನೆಯಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇದರ ಜೊತೆಗೆ, ಅನನ್ಯ ಭಟ್ (2003ರಲ್ಲಿ ಕಾಣೆಯಾದ ವೈದ್ಯಕೀಯ ವಿದ್ಯಾರ್ಥಿನಿ) ಮತ್ತು ಸೌಜನ್ಯ ಪ್ರಕರಣದಂತಹ ಸಂತ್ರಸ್ತರ ಕುಟುಂಬಗಳಿಗೆ ಸಂಪೂರ್ಣ ರಕ್ಷಣೆ ಮತ್ತು ಬೆಂಬಲವನ್ನು ಒದಗಿಸಬೇಕು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ: ಪೊಲೀಸ್ ಇಲಾಖೆಯ ಮಾದರಿ ಹೆಜ್ಜೆ

ಈಗಾಗಲೇ ದಾಖಲಾಗಿರುವ ಪ್ರಕರಣಗಳ ಹೊರತಾಗಿಯೂ ಯಾವುದಾದರೂ ಕುಟುಂಬ ದೌರ್ಜನ್ಯ ಅಥವಾ ಅನ್ಯಾಯಕ್ಕೊಳಗಾಗಿದ್ದು ದೂರು ದಾಖಲಿಸಲು ಬಯಸುವುದಾದರೆ, ಅವರ ಮಾಹಿತಿ ಗೋಪ್ಯವಾಗಿಟ್ಟು, ಸಂಪೂರ್ಣ ರಕ್ಷಣೆ ಒದಗಿಸುವ ಕುರಿತು ವಿಶ್ವಾಸ ಮೂಡಿಸುವಂತೆ, ವಿಶೇಷ ತನಿಖಾ ದಳವು ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಕಳೆದ ಕೆಲವು ದಶಕಗಳಿಂದ ಧರ್ಮಸ್ಥಳದಲ್ಲಿ ಆಗಾಗ್ಗೆ ಹೊರಬಂದಿರುವ ಇಂತಹ ಆರೋಪಗಳ ಬಗ್ಗೆ ನಾಡಿನ ಚಳವಳಿಗಳು ಸುದೀರ್ಘ ಹೋರಾಟಗಳನ್ನು ನಡೆಸಿವೆ. ಆದರೆ ಸುಮಾರು ಮೂರು ದಶಕಗಳ ಹಿಂದೆ ನಡೆದ ಪದ್ಮಲತಾ ಪ್ರಕರಣದಿಂದ ಹಿಡಿದು, ಆನೆ ಮಾವುತನ ಪ್ರಕರಣ, ಸೌಜನ್ಯ ಪ್ರಕರಣ ಮುಂತಾದ ಯಾವುದೇ ಘಟನೆಗಳಲ್ಲಿ ಆಡಳಿತದಲ್ಲಿದ್ದ ಸರ್ಕಾರಗಳು ಸಮರ್ಪಕ ಕ್ರಮ ಕೈಗೊಳ್ಳದಿರುವುದೇ ಈ ದೊಡ್ಡ ಸಂಖ್ಯೆಯ ಅಮಾಯಕ ಹೆಣ್ಣುಮಕ್ಕಳ ದುರಂತ ಸಾವಿಗೆ ಕಾರಣವಾಗಿದೆ. ಈ ತಪ್ಪಿನ ಸಂಪೂರ್ಣ ಹೊಣೆಯನ್ನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಹೊರಬೇಕಾಗಿದೆ. ಈಗಲಾದರೂ ಈ ತಪ್ಪಿಗೆ ಪ್ರಾಯಶ್ಚಿತ್ತವೆಂದು ಭಾವಿಸಿ, ಸತ್ಯವನ್ನು ಬೆಳಕಿಗೆ ತರುವ ಪ್ರಾಮಾಣಿಕ ಕೆಲಸವು ಸರ್ಕಾರದ ಎಲ್ಲ ಯಂತ್ರಾಂಗಗಳಿಂದಲೂ ಆಗಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಧರ್ಮಸ್ಥಳದಂತಹ ಧಾರ್ಮಿಕ ಸಂಸ್ಥಾನಗಳನ್ನು ಕಟ್ಟಿಕೊಂಡು, ಮುಗ್ಧ ಜನರ ದೇವರ ಮೇಲಿನ ಆಸ್ಥೆ, ಭಕ್ತಿ ಮತ್ತು ಭಯವನ್ನು ದುರ್ಬಳಕೆ ಮಾಡಿಕೊಂಡು ಅನಾಚಾರ ಮತ್ತು ಅತ್ಯಾಚಾರಗಳನ್ನು ನಡೆಸುವ ಬಲಾಢ್ಯ ದುರುಳರನ್ನು ನಿಯಂತ್ರಣದಲ್ಲಿಡುವ ಕೆಲಸ ಸರ್ಕಾರದಿಂದ ಆಗಬೇಕು. ಇಂತಹ ದೂರುಗಳು ಬಂದಾಗ ಪ್ರಾಮಾಣಿಕ ತನಿಖೆ ನಡೆಸಿ, ಆರೋಪಿಗಳನ್ನು ಕಾನೂನಿನ ಪ್ರಕಾರ ಶಿಕ್ಷಿಸುವ ಕೆಲಸವನ್ನು ಸರ್ಕಾರವು ಕೈಗೊಳ್ಳಬೇಕು. ಧಾರ್ಮಿಕ ಕ್ಷೇತ್ರಗಳು ಶಾಂತಿ ಮತ್ತು ನಂಬಿಕೆಯ ಕೇಂದ್ರಗಳಾಗಿರಬೇಕೇ ಹೊರತು, ಅಪರಾಧಗಳ ತಾಣವಾಗಿರಬಾರದು. ಮಹಿಳೆಯರು ಮತ್ತು ಲಿಂಗತ್ವದ (ಜೆಂಡರ್) ಬಗ್ಗೆ ಪ್ರತಿಗಾಮಿ ಮತ್ತು ಪಿತೃಪ್ರಧಾನ ಮನೋಭಾವದಿಂದಾಗಿ ಸಾಮಾಜಿಕ ಮತ್ತು ಧಾರ್ಮಿಕ ಅನುಮೋದನೆಯನ್ನು ಪಡೆಯುವ ಲಿಂಗಾಧಾರಿತ ಅಪರಾಧಗಳನ್ನು ತಡೆಯಲು ಇದು ಏಕೈಕ ಮಾರ್ಗವಾಗಿದೆ ಎಂದು ಸಂಘಟನೆಗಳ ಸದಸ್ಯರು ಒತ್ತಾಯಿಸಿದ್ದಾರೆ.

ಧರ್ಮಸ್ಥಳದಂತಹ ಕ್ಷೇತ್ರಗಳನ್ನು ಕಟ್ಟಿಕೊಂಡ ಧಾರ್ಮಿಕ ವ್ಯಕ್ತಿಗಳ ಮೇಲೆ ಮಹಿಳೆಯರ ಮೇಲಿನ ಅಮಾನುಷವಾದ ದೌರ್ಜನ್ಯಗಳ ಆರೋಪ ಬರುತ್ತಿರುವುದು ಮೊದಲ ಸಲವೇನೂ ಅಲ್ಲ. ಆದರೆ ಅವರುಗಳನ್ನು ನಮ್ಮ ವ್ಯವಸ್ಥೆಯು ಶಿಕ್ಷೆಗೆ ಅತೀತರನ್ನಾಗಿಸಿ ಕಾಪಾಡುವುದರಿಂದ ಎಗ್ಗಿಲ್ಲದಂತೆ ಇವು ಮುಂದುವರೆಯುತ್ತಿವೆ. ಇಂತಹ ಪ್ರವೃತ್ತಿ ಇನ್ನು ಮೇಲಾದರೂ ನಿಲ್ಲಬೇಕು. ಅಪರಾಧಿಗಳು ಯಾರೇ ಆದರೂ ಶಿಕ್ಷೆಗೆ ಅತೀತರಾಗಬಾರದು. ಇಂತಹ ಪ್ರಕರಣಗಳಲ್ಲಿ ಸತ್ಯಾಂಶಗಳನ್ನು ವರದಿ ಮಾಡುವ ಮಾಧ್ಯಮ ಸಂಸ್ಥೆಗಳ ಮೇಲೆ ನ್ಯಾಯಾಲಯಗಳಿಂದ ತಡೆಯಾಜ್ಞೆಗಳನ್ನು ತರುವ ಕ್ರಮವನ್ನೂ ಕೂಡ ನ್ಯಾಯಾಂಗವು ಪರಿಶೀಲನೆಗೊಳಪಡಿಸಬೇಕು. ಕರ್ನಾಟಕದ ನ್ಯಾಯಾಲಯಗಳು, ಧರ್ಮಸ್ಥಳದ ವಿಚಾರಕ್ಕೆ ಸಂಬಂಧಿಸಿ ನೀಡಿದ ಅಸಂಖ್ಯಾತ ತಡೆಯಾಜ್ಞೆಗಳಿಂದಾಗಿ ಸತ್ಯ ಹೂತು ಹೋಗುವ ಅಪಾಯವಿತ್ತು ಎಂಬುದನ್ನು ಈಗಲಾದರೂ ಮನವರಿಕೆ ಮಾಡಿಕೊಳ್ಳುವ ತುರ್ತು ಅಗತ್ಯವಿದೆ.

ಧರ್ಮಸ್ಥಳದ್ದೊಂದೇ ಅಲ್ಲ, ರಾಜ್ಯದಾದ್ಯಂತ ಮಹಿಳೆಯರಿಂದು ಹತ್ತಾರು ಬಗೆಯ ದೌರ್ಜನ್ಯಗಳಿಗೆ ಸಿಲುಕಿ ನಲುಗಿ ಹೋಗಿದ್ದಾರೆ. ಸರ್ಕಾರವು ಮಹಿಳೆಯರಿಗಾಗಿ ಜಾರಿ ಮಾಡಿರುವ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಯಂತಹವುಗಳನ್ನು ನಾವು ಬೆಂಬಲಿಸುತ್ತೇವೆ. ಅದಕ್ಕಾಗಿ ಸರ್ಕಾರವನ್ನು ಶ್ಲಾಘಿಸುತ್ತೇವೆ, ಆದರೆ, ಅದರಾಚೆಗೆ ಈ ನಾಡಿನ ನಾಗರಿಕರಾಗಿ ಮಹಿಳೆಯರಿಗೆ ಭದ್ರತೆ ಮತ್ತು ಘನತೆಯನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯವಲ್ಲವೇ? ಹೀಗಾಗಿ, ಮಹಿಳೆಯರನ್ನು ಫಲಾನುಭವಿಗಳಂತೆ ಅಥವಾ ಕೇವಲ ಮತದಾರರಂತೆ ಪರಿಗಣಿಸುವ ಮನಸ್ಥಿತಿಯನ್ನು ರಾಜಕೀಯ ಪಕ್ಷಗಳು ಬದಲಿಸಿಕೊಳ್ಳಬೇಕು. ಮಹಿಳೆಯರ ಮೇಲೆ- ಅದರಲ್ಲೂ ಮುಖ್ಯವಾಗಿ ದಲಿತರು, ಅಲೆಮಾರಿ ಸಮುದಾಯಗಳು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗಗಳಿಗೆ ಸೇರಿದ ಹೆಣ್ಣುಮಕ್ಕಳ ಮೇಲೆ- ನಡೆಯುತ್ತಿರುವ ಬರ್ಬರ ಕೊಲೆಗಳು, ಭೀಕರವಾದ ಅತ್ಯಾಚಾರಗಳು, ಆಸಿಡ್ ದಾಳಿಗಳು ಮೊದಲಾಗಿ ಹತ್ತಾರು ಬಗೆಯ ದೌರ್ಜನ್ಯಗಳನ್ನು ತಡೆಗಟ್ಟುವ ದಿಕ್ಕಿನಲ್ಲಿ ಅತ್ಯಂತ ತುರ್ತಾಗಿ ಕೆಲಸ ಆಗಬೇಕಿದೆ. ಇದಕ್ಕಾಗಿ, ಮಹಿಳಾ ಸಂಘಟನೆಗಳು, ತಜ್ಞರು, ಕಾಳಜಿಯುಳ್ಳ ಗಣ್ಯ ನಾಗರೀಕರನ್ನೊಳಗೊಂಡಂತೆ ಸರ್ಕಾರದ ಸಭೆ ನಡೆಸಿ, ಪರಿಣಾಮಕಾರಿ ಹೆಜ್ಜೆಗಳನ್ನು ಮುಂದಿಡಬೇಕೆಂದು ಸಂಘಟನೆಯ ಸದಸ್ಯರು ಆಗ್ರಹಿಸಿದರು.

ದೇವಾಲಯವನ್ನು ಸರ್ಕಾರ ವಶಕ್ಕೆ ಪಡೆದು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ಖಾಸಗಿ ದುಷ್ಟಕೂಟಗಳು ಅಲ್ಲಿ ಅಮಾಯಕ ಜೀವಗಳನ್ನು ಬಲಿಕೊಡುವಂತಹ ಕೃತ್ಯಗಳನ್ನು ಎಸಗುವುದನ್ನು ತಡೆಯಲು ಅವಕಾಶವಾಗುತ್ತದೆ. ಮುಂದಿನ ದಿನಗಳಲ್ಲಿ, ಈಗಾಗಲೇ ನಾವುಗಳು ಮಾಡುತ್ತಿರುವ ಕೆಲಸಗಳನ್ನು ಮುಂದುವರೆಸುತ್ತಾ, ಕರ್ನಾಟಕವನ್ನು ಮಹಿಳೆಯರಿಗೆ ಸುರಕ್ಷಿತವಾದ ನಾಡನ್ನಾಗಿಸಲು ನಾವು ಎಲ್ಲ ಜನರನ್ನು ಒಗ್ಗೂಡಿಸಿ, ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಯತ್ನಶೀಲರಾಗುತ್ತೇವೆ. ಈ ಪ್ರಯತ್ನದಲ್ಲಿ ಎಲ್ಲ ಪ್ರಜ್ಞಾವಂತರೂ ಭಾಗಿಯಾಗಲು ಸಂಘಟನೆಗಳ ಸದಸ್ಯರು ಕರೆ ನೀಡಿದರು.

ಪತ್ರಿಕಾ ಗೋಷ್ಟಿಯಲ್ಲಿ ಕರ್ನಾಟಕ ಜನಶಕ್ತಿಯ ಮಲ್ಲಿಗೆ, ಮಹಿಳಾ ಮುನ್ನಡೆಯ ಗೌರಿ ಬೆಂಗಳೂರು, ಗಮನ ಮಹಿಳಾ ಸಮೂಹದ ಮಮತಾ ಯಜಮಾನ್, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲ, ಒಂದೆಡೆ ಸಂಸ್ಥೆಯ ಅಕ್ಕೈ ಪದ್ಮಶಾಲಿ, ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್ ಜಸ್ಟೀಸ್‌ನ ಮೈತ್ರೇಯಿ ಕೃಷ್ಣನ್ ಇವರುಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಪುನರಾರಂಭ; ಸೀಮಿತ ಆ್ಯಪ್‌ಗಳಲ್ಲಿ ಮಾತ್ರ ಲಭ್ಯ

ಬೆಂಗಳೂರಿನಲ್ಲಿ ಗುರುವಾರದಿಂದ (ಆಗಸ್ಟ್‌ 21) ಮತ್ತೆ ಬೈಕ್‌ ಟ್ಯಾಕ್ಸಿ ಸೇವೆಗಳು ಪುನಾರಂಭವಾಗಿವೆ....

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X