ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲ್ಲ, ಬಿಜೆಪಿ ಅಧಿಕಾರಕ್ಕೆ ಬಂದರೂ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡಲ್ಲ. ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಮಾತ್ರ ಬೆಂಬಲಿಸುವಂತೆ ಶಾಸಕ ಕೊತ್ತೂರು ಮಂಜುನಾಥ್ ಮನವಿ ಮಾಡಿದರು.
ಕೋಲಾರ ತಾಲೂಕಿನ ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ವಾರ್ಡ್ ವಾರು ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳು ಅಧಿಕಾರ ನಡೆಸಿದ್ದಾರೆ ಅವರನ್ನು ಪ್ರಶ್ನೆ ಮಾಡಿ ಕೇಳಿ ನಿಮ್ಮ ಕೊಡುಗೆ ಏನು ಅಂತ ಅದೇ ರೀತಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಕೊಟ್ಟಂತ ಕೊಡುಗೆಗಳನ್ನು ಜನಕ್ಕೆ ಮತ್ತು ವಿರೋಧ ಪಕ್ಷಗಳಿಗೆ ಹೇಳಬೇಕು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ನೆಮ್ಮದಿ ಮತ್ತು ಅಭಿವೃದ್ಧಿ ಅದಕ್ಕಾಗಿ ಕಾಂಗ್ರೆಸ್ ಬೆಂಬಲಿಸುವಂತೆ” ಮನವಿ ಮಾಡಿದರು.
“ರಾಜ್ಯದಲ್ಲಿ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳು ಯಾವುದೇ ಮಧ್ಯವರ್ತಿಗಳು ಇಲ್ಲದೇ ನೇರವಾಗಿ ಪಲಾನುಭವಿಗಳಿಗೆ ಸೌಲಭ್ಯ ಒದಗಿಸುತ್ತಿವೆ. ಕಷ್ಟಕ್ಕೆ ಆಗಿರುವವರನ್ನು ನೆನಪಿಸಿಕೊಳ್ಳಬೇಕು.
ಕಾಂಗ್ರೆಸ್ ಸರ್ಕಾರದಿಂದ ಪ್ರತಿ ಹಳ್ಳಿಯಲ್ಲಿ ಯಾವುದೇ ಜಾತಿ ಧರ್ಮವಿಲ್ಲದೇ ಸೌಲಭ್ಯಗಳನ್ನು ಒದಗಿಸುತ್ತದೆ. ಕಾಂಗ್ರೆಸ್ ಸರ್ಕಾರಕ್ಕೆ ಹಸಿವು ಮುಕ್ತ ಕರ್ನಾಟಕ ಮುಖ್ಯ ಗುರಿಯಾಗಿದೆ. ಆ ನಿಟ್ಟಿನಲ್ಲಿ ಹತ್ತು ಕೆಜಿ ಅಕ್ಕಿ ವಿತರಣೆ ಮಾಡಿದೆ. ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಈ ಭಾಗದ ಕೈಗಾರಿಕೆಗಳು ಸೇರಿದಂತೆ ಅಭಿವೃದ್ಧಿಗೆ ಕೈ ಜೋಡಿಸಿ” ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, “ಈ ಭಾಗದಲ್ಲಿ ಕೈಗಾರಿಕೆಗಳು, ಪಟ್ಟಣ ಪಂಚಾಯತಿಯಾಗಲು ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದೆ. ಸುಮಾರು ಒಂಭತ್ತು ವರ್ಷಗಳ ನಂತರ ಚುನಾವಣೆ ನಡೆಯುತ್ತಿದೆ. ವಾರ್ಡ್ಗಳಲ್ಲಿಯೇ ಜನಾಭಿಪ್ರಾಯ ಮತ್ತು ಒಲವು ಸಂಗ್ರಹ ನಡೆದು ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಈ ಭಾಗದಲ್ಲಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದೆ ಅಭಿವೃದ್ಧಿ ಮಾಡಲು ಸಹ ಸಹಕಾರಿಯಾಗುತ್ತದೆ” ಎಂದರು.
“ವೇಮಗಲ್ ಹೋಬಳಿ ಕೇಂದ್ರವಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರವಾಗಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಕಾಂಗ್ರೆಸ್ ಬೆಂಬಲಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರ್ಕಾರ ಯಾವುದು ಇದೆ ಅವರಿಗೆ ಆಶೀರ್ವಾದ ಮಾಡಿ ಗ್ಯಾರಂಟಿ ಮುಂದುವರೆಸಲು ಕಾಂಗ್ರೆಸ್ ಬೆಂಬಲಿಸಿ” ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕೋಲಾರ | ಮನೆಯಲ್ಲೇ ಕೆಮಿಕಲ್ ಮಿಶ್ರಿತ ಹಾಲು ತಯಾರಿ; ದೂರು ದಾಖಲು
ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ, “ಕುರಗಲ್ ಸರ್ಕಾರಿ ಶಾಲೆ ಮುಚ್ಚಿ ಹೋಗುತ್ತಿತ್ತು, ಗ್ರಾಮದ ಕೆ.ಎಂ ಚೌಡೇಗೌಡ ಸರ್ಕಾರಿ ಶಾಲೆಯನ್ನು ಉಳಿಸಿ ಅಭಿವೃದ್ಧಿ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಜೊತೆಗೆ ಸಮಾಜಸೇವೆಯಲ್ಲಿ ತಮ್ಮದೇ ಆದ ಪಾತ್ರ ವಹಿಸಿದ್ದಾರೆ, ಎಸ್.ಎಂ ಕೃಷ್ಣ ಕಾಲದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಪ್ರೌಢಶಾಲೆಯನ್ನು ಗುರುತಿಸಿದ್ದರು, ನಮಗೆ ಅಧಿಕಾರ ಮುಖ್ಯ ಅಲ್ಲ, ನಿಮ್ಮ ಸೇವೆ ಮಾಡುವ ಅವಕಾಶ ಬೇಕು ತಮ್ಮ ವಾರ್ಡ್ ಗಳಲ್ಲಿ ನಿಲ್ಲುವಂತಹ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ಮುನಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಮುಖಂಡರಾದ ಉರಟ ಅಗ್ರಹಾರ ಚೌಡರೆಡ್ಡಿ, ಮೈಲಾಂಡಹಳ್ಳಿ ಮುರಳಿ, ಕೆ.ಎಂ ಚೌಡೇಗೌಡ, ರಮೇಶ್, ಕಡಗಟ್ಟೂರು ದೇವರಾಜ್, ಬೈರಂಡಹಳ್ಳಿ ನಾಗೇಶ್, ಅಫ್ಸರ್, ಪೇರ್ಜೆನಹಳ್ಳಿ ನಾಗೇಶ್, ಬೆಟ್ಟಹೊಸಪುರ ಜಗನ್, ಯಲವಾರ ರಾಜಕುಮಾರ್, ಬರ್ಕತ್ತುಲ್ಲಾಖಾನ್ ಉಪಸ್ಥಿತರಿದ್ದರು.