ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ಸುರಪುರ ಮತ್ತು ಹುಣಸಗಿ ಇವರ ಸಂಯುಕ್ತಾಶ್ರಯದಲ್ಲಿ ಸುರಪುರ ತಾಲೂಕಿನ ಖಾನಾಪೂರ ಎಪಿಎಮ್ಸಿ ಮಾರುಕಟ್ಟೆ ಹಮಾಲರ ಭವನದಲ್ಲಿ ನವಲಗುಂದ-ನರಗುಂದ ರೈತ ಬಂಡಾಯದ 45ನೇ ವರ್ಷದ ಅಂಗವಾಗಿ ಹುತಾತ್ಮ ರೈತರ ಸ್ಮರಣಾರ್ಥ ದಿನಾಚರಣೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖ ಪದಾಧಿಕಾರಿಗಳು, ರೈತ ಮುಖಂಡರು ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೇರಿದ್ದರು. 1980ರ ಜುಲೈ 21 ರಂದು ನಡೆದ ಕ್ರಾಂತಿಕಾರಕ ಘಟನೆಯನ್ನು ಸ್ಮರಿಸಿದರು. ಆ ದಿನ ನರಗುಂದ ಪಟ್ಟಣದಲ್ಲಿ ಮಲಪ್ರಭಾ ನದಿಯ ಬೆಟರಮೆಂಟ್ ಲೇವಿಯ ಹೆಚ್ಚಳವನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಆದರೆ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸ್ರಿಂದ ನಡೆದ ಗೋಲಿಬಾರ್ನಲ್ಲಿ ಹಲವಾರು ರೈತರು ಹುತಾತ್ಮರಾದರು. ಈ ಘಟನೆ ನವಲಗುಂದ-ನರಗುಂದ ರೈತ ಬಂಡಾಯವೆಂಬ ಹೆಸರಿನಲ್ಲಿ ಇತಿಹಾಸದ ಪುಟಗಳಲ್ಲಿ ಅಮರವಾಗಿದೆ.
ಹುತಾತ್ಮರಿಗೆ ಮೌನಾಚರಣೆ ಮತ್ತು ಪುಷ್ಪಾರ್ಚನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯ ನೇತೃತ್ವವಹಿಸಿಕೊಂಡ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಚಂದಲಾಪೂರ ಮಾತನಾಡಿ, “ರೈತನು ಈ ದೇಶದ ಬೆನ್ನೆಲುಬು. ಬಿಸಿಲು, ಮಳೆ ಲೆಕ್ಕಿಸದೆ ಭೂಮಿಯಲ್ಲಿ ದುಡಿದು ದೇಶಕ್ಕೆ ಅನ್ನದಾತನೆನ್ನಿಸಿಕೊಂಡಿದ್ದಾನೆ. ರೈತನು ತನ್ನ ಸ್ವಾಭಿಮಾನಕ್ಕಾಗಿ ಪ್ರಾಣವನ್ನು ಕಳೆದುಕೊಂಡಿರುತ್ತಾನೆ ಹೊರತು ಬಂಡತನದಿಂದ ಬದುಕಿರುವುದಿಲ್ಲ. ಇಂತಹ ಸ್ವಾಭಿಮಾನಿ ರೈತರ ಮೇಲೆ ಗುಂಡೇಟು ದಾಳಿ ನಡೆಸಿ ಅವರ ಪ್ರಾಣ ಬಲಿ ತೆಗೆದುಕೊಂಡ ಅಂದಿನ ಸರ್ಕಾರದ ನಡೆಯನ್ನು ಇಂದಿಗೂ ಖಂಡಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಹನುಮಗೌಡ ನಾರಾಯಣಪೂರ ಮಾತನಾಡಿ, “ಹಿಂದಿನ ನಂಜುಂಡಸ್ವಾಮಿಯ ಕಾಲಘಟ್ಟದಲ್ಲಿ ಅವರ ಅನುಭವವ, ಸಿದ್ಧಾಂತಗಳ ಆಧಾರದ ಮೇಲೆ ಸಂಘಟನೆ ಕಟ್ಟಲಾಗಿದೆ. ಮುಂದಿನ ದಿನಗಳಲ್ಲಿ ಸಂಘಟನೆ ಮಾಡಬೇಕಾದರೆ ರೈತರಾದ ನಾವೆಲ್ಲರೂ ಒಂದಾಗಿ ಸಂಘಟನೆಯನ್ನು ಬಲಪಡಿಸಿಕೊಂಡು ಹೋರಾಟ ಮಾಡಬೇಕೇ ಹೊರತು ಸ್ವಾರ್ಥಕ್ಕಾಗಿ, ರಾಜಕೀಯ ಬಲಿಪಶುವಾಗಿ ಹೋರಾಟ ಮಾಡಬಾರದು” ಎಂದು ಹೇಳಿದರು.
ಇದನ್ನೂ ಓದಿ: ಯಾದಗಿರಿ | ವಸತಿ ಶಾಲೆ ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛತೆ ; ವಿಡಿಯೊ ವೈರಲ್
ಕಾರ್ಯಕ್ರಮದಲ್ಲಿ ಸುರಪುರ ತಾಲೂಕು ಗೌರವಾಧ್ಯಕ್ಷ ಮಲ್ಲಣ್ಣ ಹಾಲಭಾವಿ, ತಿರುಪತಿ ಕುಪಗಲ್ ಜಿಲ್ಲಾ ಸಮಿತಿ ಸದಸ್ಯ, ಭೀಮರಾಯ ಒಕ್ಕಲಿಗ ಕೆಂಭಾವಿ ಹೋಬಳಿ ಘಟಕ ಸಂಚಾಲಕರು, ಯಂಕೋಬ ದೊರೆ ಕುಪಗಲ್ ಗ್ರಾಮ ಘಟಕ ಅಧ್ಯಕ್ಷ ,ಶಿವು, ಪರಮಣ್ಣ ಬಾಣತಿಹಾಳ ರೈತ ಮುಖಂಡ ಚಂದಲಾಪೂರ, ನಾಗಪ್ಪ ಕುಪಗಲ್, ಖುದಾಭಕ್ಷ, ಹಣಮಂತ ಕುಂಬಾರಪೇಟೆ ರೈತ ಮುಖಂಡರು, ಕೃಷ್ಣಪ್ಪ ನಾರಾಯಣಪೂರ, ಶಾಂತಪ್ಪ ತಿಪ್ಪನಟಗಿ, ಭೀಮಣ್ಣ, ಕಾಮರಾಯ ಮದಲಿಂಗನಾಳ, ನಿಂಗಪ್ಪ, ಶಿವಲಿಂಗಯ್ಯ ಗುರಿಕಾರ ಕುಂಬಾರ, ಹುಣಸಗಿ ತಾಲೂಕಾ ಅಧ್ಯಕ್ಷ ಹನುಮಗೌಡ ನಾರಾಯಣಪೂರ, ಹುಣಸಗಿ ತಾಲೂಕಾ ಗೌರವ ಅಧ್ಯಕ್ಷ ಸಾಹೇಬಗೌಡ ಮದಲಿಂಗನಾಳ, ಹುಣಸಗಿ ತಾಲೂಕಾಡ ಉಪಾಧ್ಯಕ್ಷ ಗದ್ದೆಪ್ಪ ನಾಗಬೇವಿನಾಳ, ಸುರಪುರ ತಾಲೂಕಾ ಕಾರ್ಯದರ್ಶಿ ವೆಂಕಟೇಶ ಕುಪಗಲ್ ಉಪಸ್ಥಿತರಿದ್ದರು.