“ನಮ್ಮ ನಮ್ಮ ಸೈದ್ಧಾಂತಿಕ ಬದ್ಧತೆಗಳನ್ನು ಒಮ್ಮೊಮ್ಮೆ ಮೀರಿ ಮನುಷ್ಯ ಪ್ರೀತಿಗಾಗಿ ಹಳೆಯದನ್ನು ಮುರಿದು, ಹೊಸದನ್ನು ಕಟ್ಟಬೇಕು. ಇಂದಿನ ಹರಿದು ತಿನ್ನುವ ದಿನಮಾನಗಳಲ್ಲಿ ಶರಣರ ದಾಸೋಹ ನೀತಿಯಂತೆ ಹಂಚಿಕೊಂಡು ಬದುಕುವ ಕಲೆ ಅಗತ್ಯವಿದೆ” ಎಂದು ಹಿರಿಯ ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ನುಡಿದರು.
ಹಾವೇರಿ ಪಟ್ಟಣದ ಹಂಚಿನಮನಿ ಆರ್ಟಗ್ಯಾಲರಿಯಲ್ಲಿ ಸಾಹಿತಿ ಕಲಾವಿದರ ಬಳಗ ಆಯೋಜಿಸಿದ್ದ, ಈ ಬಾರಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಿರಿಗನ್ನಡ ಪ್ರಶಸ್ತಿ ಪುರಸ್ಕೃತ ಗೆಳೆಯರ ಬಳಗದ, ಸಂಸ್ಥೆಯ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
“ಆರು ದಶಕಕ್ಕೂ ಹೆಚ್ಚು ಕಾಲ ನಾಡು ನುಡಿಗಾಗಿ ಯಾವ ಸದ್ದು ಗದ್ದಲಗಳಿಲ್ಲದೆ ಮೌನವಾಗಿ ಕೊಡುಗೆ ನೀಡಿದ, ಗೆಳೆಯರ ಬಳಗ. ಅದರ ಸಾಧನೆಯ ಅರ್ಹತೆಯ ಮೇಲೆ ಈ ಪ್ರಶಸ್ತಿ ಬಂದಿದೆ. ಇದನ್ನು ಕಟ್ಟಿದ ಹಿರಿಯರನ್ನು ಸದಾಕಾಲ ಸ್ಮರಿಸುವಂತಾಗಬೇಕು ” ಎಂದು ಡಾ. ಶಂಭು ಬಳಿಗಾರ ಹೇಳಿದರು.
ಗೆಳೆಯರ ಬಳಗದ ಅಧ್ಯಕ್ಷರಾದ ಡಾ. ಸುದೀಪ ಪಂಡಿತರನ್ನು ಹಾಗೂ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಶ್ರೀಮತಿ ರೇಖಾ ಹಂಚಿನಮನಿ ಮತ್ತಿತರರು ಸನ್ಮಾನಿಸದರು.
ನಂತರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, “ವೃತ್ತಿ ಒತ್ತಡಗಳ ನಡುವೆ ಚಿತ್ರಕಲೆ, ಸಾಹಿತ್ಯ ಕಲೆಯಂತಹ ಯಾವುದಾದರೂ ಹವ್ಯಾಸ ಇರಬೇಕು. ಆಗ ಮಾತ್ರ ಚೈತನ್ಯಶೀಲರಾಗಿ ಜೀವನ ಸಾಗಿಸಬಹುದು. ನನಗೂ ಚಿತ್ರ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳ ಓಟದಲ್ಲಿ ಬದಿಗೆ ಸರಿಸ ಬೇಕಾಯಿತು. ಇಂದಿನ ಸಮಾರಂಭ ನನಗೆ ಉತ್ತೇಜನ ನೀಡಿದೆ” ಎಂದರು.
ಸನ್ಮಾನವನ್ನು ಸ್ವೀಕರಿಸಿದ ಡಾ. ಸುದೀಪ ಪಂಡಿತ ಮಾತನಾಡಿ, “ಈ ಪ್ರಶಸ್ತಿ ಹಾವೇರಿ ಜಿಲ್ಲೆಗೆ ಸಲ್ಲುವ ಗೌರವವಾಗಿದೆ. ಈ ಕಾರಣದಿಂದ ಗೆಳೆಯರ ಬಳಗದ ಘನತೆ ಹೆಚ್ಚಿದ್ದು, ‘ನಾವೆಲ್ಲ ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು’ ಎಂಬ ಸಂದೇಶ ಕೊಟ್ಟಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈದಿನ ಯೂಟ್ಯೂಬ್ ಬ್ಲಾಕ್ ತೆರವುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ
ವೇದಿಕೆಯಲ್ಲಿ ಜ್ಞಾನಗಂಗಾ ಶಿಕ್ಷಣ ಸಮಿತಿಯ ಛೇರಮನ್ನರಾದ ಡಾ. ಶ್ರವಣ ಪಂಡಿತ, ಬಳಗದ ಕಾರ್ಯದರ್ಶಿ ಡಾ. ಗೌತಮ ಲೋಡಾಯಾ, ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಗುಹೇಶ್ವರ ಪಾಟೀಲ ಹಾಗೂ ಕೋಶಾಧ್ಯಕ್ಷರಾದ ಸಂಜೀವಕುಮಾರ ಬಂಕಾಪೂರ ಉಪಸ್ಥಿತರಿದ್ದರು. ಆರಂಭದಲ್ಲಿ ಆರ್.ಸಿ. ನಂದಿಹಳ್ಳಿ ಪ್ರಾರ್ಥಿಸಿದರೆ, ಕಲಾವಿದ ಕರಿಯಪ್ಪ ಹಂಚಿನಮನಿ ಸ್ವಾಗತಿಸಿದರು. ಕೊನೆಯಲ್ಲಿ ಪೃಥಿರಾಜ ಬೆಟಗೇರಿ ವಂದಿಸಿದರು.