ಗ್ಯಾರೆಂಟಿ ಯೋಜನೆಯಡಿಯಲ್ಲಿ ನೀಡುತ್ತಿರುವ ಪಡಿತರ ಅಕ್ಕಿಯನ್ನು ಕಾಳಸಂತೆಕೋರರು ಪಡಿತರ ಚೀಟಿದಾರರಿಂದ ಕಡಿಮೆ ದರದಲ್ಲಿ ಖರೀದಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಉದ್ದೇಶದಿಂದ, ಪಡಿತರ ಸಂಗ್ರಹಣೆ ಹಾಗೂ ಸಾಗಾಣಿಕೆ ಮಾಡುವ ಸಂಭವವಿದೆ. ಹಾಗಾಗಿ ಇದನ್ನು ತಡೆಯಲು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಅವರು ತಾಲೂಕು ಮಟ್ಟದಲ್ಲಿ ಟಾಸ್ಕ್ ಪೋರ್ಸ್(ಕಾರ್ಯಪಡೆ) ರಚಿಸಿಲು ಆದೇಶಿಸಿದ್ದಾರೆ.
ತಾಲೂಕು ಮಟ್ಟದಲ್ಲಿ ಆರಕ್ಷಕ ಇಲಾಖೆ ಒಳಗೊಂಡಂತೆ ತಪಾಸಣೆ ತಂಡವನ್ನು ರಚನೆ ಮಾಡಿದ್ದು, ಈ ತಂಡದಲ್ಲಿ ತಾಲೂಕು ತಹಶೀಲ್ದಾರರು ಅಧ್ಯಕ್ಷರಾಗಿದ್ದು, ಆಹಾರ ಶಿರಸ್ತೇದಾರರು, ಪೊಲೀಸ್ ಉಪನಿರೀಕ್ಷಕರು, ಕಂದಾಯ ನಿರೀಕ್ಷಕರು, ವಾಣಿಜ್ಯ ತೆರಿಗೆ ಇಲಾಖೆ ಪರಿವೀಕ್ಷಕರು ಮತ್ತು ಮೋಟಾರ್ ವಾಹನ ನಿರೀಕ್ಷಕರು ಸದಸ್ಯರಾಗಿದ್ದಾರೆ. ಆಹಾರ ನಿರೀಕ್ಷಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | 90 ದಿನಗಳ ಮಧ್ಯಸ್ಥಿಕೆಯ ವಿಶೇಷ ಆಂದೋಲನ: ಸದುಪಯೋಗ ಪಡೆದುಕೊಳ್ಳುವಂತೆ ನ್ಯಾ. ಎಂ ಎಸ್ ದರಗದ ಕರೆ
ಈ ತಂಡದವರು ಪಡಿತರ ಅಕ್ಕಿ ಕಾಳಸಂತೆಯಲ್ಲಿ ಸಂಗ್ರಹಣೆ ಮತ್ತು ಮಾರಾಟವಾಗುವ ಮಾರ್ಗಗಳಾದ ಅಕ್ಕಿ ಮಿಲ್. ಹೊಟೇಲ್, ಕಿರಾಣಿ ಅಂಗಡಿಗಳು, ಗೋದಾಮು ಹಾಗೂ ಸಾರಿಗೆ ಮೂಲಕ ಸಾಗಾಟವಾಗುವುದನ್ನು ತಪಾಸಣೆ ಮಾಡಬೇಕು. ತಪಾಸಣೆ ಸಂದರ್ಭದಲ್ಲಿ ಪಡಿತರ ಸಂಗ್ರಹಣೆ ಮತ್ತು ಮಾರ್ಗಾಂತರ ಮಾಡುವುದು ಕಂಡುಬಂದರೆ ಆವಶ್ಯಕ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ, ಉಪನಿರ್ದೇಶಕರು ಆಹಾರ ನಾಗರಿಕ ಸರಬರಾಜು ಇಲಾಖೆ ಉತ್ತರ ಕನ್ನಡ ಕಾರವಾರ ಅವರಿಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ.