ಕೋಲಾರ ತಾಲೂಕಿನ ಕೆ ಬಿ ಹೊಸಹಳ್ಳಿ ಭಾಗದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಬಂಡೆಗಳನ್ನು ಓವರ್ ಬ್ಲಾಸ್ಟ್ ಮಾಡುವುದರಿಂದ ಮನೆಗಳು ಬಿರುಕು ಬಿಟ್ಟು, ನೆರೆ ಹೊಡೆದು ತೊಂದರೆಯಾಗುತ್ತಿರುವುದರಿಂದ ಬಂಡೆ ಬ್ಲಾಸ್ಟ್ ಮಾಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕೋಲಾರ ಜಿಲ್ಲಾ ಅಧ್ಯಕ್ಷ ಟಿ ಎಂ ವೆಂಕಟೇಶ್ ಮಾತನಾಡಿ, “ನರಸಾಪುರ ಹೋಬಳಿಯ ಕೆ ಬಿ ಹೊಸಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ 110, 130 ರಲ್ಲಿ ಬಂಡೆಗಳನ್ನು ಬ್ಲಾಸ್ಟ್ ಮಾಡಲು ನೀಡಿರುವ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ರಾತ್ರಿ ಸಮಯದಲ್ಲಿ ಓವರ್ ಬ್ಲಾಸ್ಟ್ ಮಾಡುವುದರಿಂದ ಆ ಭಾಗದ ಗ್ರಾಮದಲ್ಲಿ ಜನರು ನೆಮ್ಮದಿಯಿಂದ ಜೀವನ ಮಾಡಲು ಆಗುತ್ತಿಲ್ಲ. ಬಂಡೆಗಳನ್ನು ಬ್ಲಾಸ್ಟ್ ಮಾಡುವುದರಿಂದ ಮನೆಗಳು ಬಿರುಕು ಬಿಟ್ಟು ಮಳೆಗಾಲದಲ್ಲಿ ಮನೆಗೆಳು ಸೋರುವ ಮತ್ತು ಬೀಳುವ ಅಪಾಯದ ಪರಿಸ್ಥಿತಿಗಳು ನಿರ್ಮಾಣವಾಗಿರುತ್ತಿವೆ. ಈಗಾಗಲೇ ಮನೆಗಳಿಗೆ ಹಾಕಿರುವ ಕೂಚ ದೂಲಗಳು ನೆರೆ ಬಿಟ್ಟಿರುವುದರಿಂದ ರಾತ್ರಿ ಸಮಯದಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಲು ಕೂಡ ಆಗುವುದಿಲ್ಲ. ಬಂಡೆಯ ಪಕ್ಕದಲ್ಲಿ ಅರಣ್ಯ ಇದ್ದು, ಈ ಅರಣ್ಯದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ ಹಾಗೂ ಬಂಡೆಯ ಕಲ್ಲಿನ ದೂಳಿನಿಂದ ಬಂಡೆಯ ಸುತ್ತ ಮುತ್ತಲೂ ರೈತರು ಯಾವುದೇ ರೀತಿಯ ತರಕಾರಿ ಮತ್ತು ರೇಷ್ಮೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ದನ-ಕರುಗಳ ಮೇವಿಗೂ ತುಂಬಾ ತೊಂದರೆಯಾಗುತ್ತಿದೆ” ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್ ಮಾತನಾಡಿ, “ಬಂಡೆ ಬ್ಲಾಸ್ಟ್ ಮಾಡಿ ತೆಗೆಯುವ ಕಲ್ಲುಗಳನ್ನು ಟಿಪ್ಪರ್ಗಳ ಮೂಲಕ ಅಗತ್ಯಕ್ಕಿಂತ ಹೆಚ್ಚಿನ ಭಾರ ತುಂಬಿಸಿ ಊರಿನ ಮಧ್ಯೆ ಸಾಮಾನ್ಯ ರಸ್ತೆಗಳಲ್ಲಿ ಸಾಗಿಸುತ್ತಾರೆ. ಇದರಿಂದ ರಸ್ತೆಗಳು ಹಾಳಾಗುತ್ತಿವೆ. ಊರಿನ ಒಳಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ಶಾಲೆಯಿದ್ದು, ಸಣ್ಣ ಮಕ್ಕಳು ಮಹಿಳೆಯರು ಹೆಚ್ಚು ಒಡಾಡುತ್ತಾರೆ. ಅತೀ ವೇಗದಲ್ಲಿ ತುಂಬಿದ ಟಿಪ್ಟರ್ಗಳು ಒಡಾಡುವುದರಿಂದ ಜನ ಭಯಬೀತರಾಗಿ ಬದುಕುವ ಪರಿಸ್ಥಿತಿ ಇದೆ.
ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ಸಂಘಟನೆ ಮತ್ತು ಗ್ರಾಮಸ್ಥರಿಂದ ಎರಡು ಮೂರು ಬಾರಿ ಮನವಿ ಪತ್ರ ನೀಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಮತ್ತು ಕ್ರಷರ್ ಮಾಲೀಕರನ್ನು ವಿಚಾರಣೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಓವರ್ ಬ್ಲಾಸ್ಟ್ಗೆ ಕಡಿವಾಣ ಹಾಕಿ, ಗ್ರಾಮದ ಜನರು ನಿರ್ಭೀತಿಯಿಂದ ಜೀವನ ಮಾಡಲು ಅನುವು ಮಾಡಿಕೊಡಬೇಕೆಂದು” ಮನವಿ ಮಾಡಿದರು.
ಇದನ್ನೂ ಓದಿ: ಕೋಲಾರ | ಮನೆಯಲ್ಲೇ ಕೆಮಿಕಲ್ ಮಿಶ್ರಿತ ಹಾಲು ತಯಾರಿ; ದೂರು ದಾಖಲು
ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ತಾಲೂಕು ಅಧ್ಯಕ್ಷ ಅಲಹಳ್ಳಿ ವೆಂಕಟೇಶಪ್ಪ, ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಮುಖಂಡರಾದ ವಿ.ವೆಂಕಟೇಶಪ್ಪ, ಕೆ ಎಂ ನಾರಾಯಣಸ್ವಾಮಿ, ಚಿನ್ನಮ್ಮ, ಅಪ್ಪಯ್ಯಣ್ಣ, ಮಂಜುಳಾ, ರಾಜೇಂದ್ರ, ಹರೀಶ್, ವಿಜಯ ರಾಘವರೆಡ್ಡಿ, ಮಂಜುನಾಥ್, ಚಂದ್ರಶೇಖರ್, ಚಂದ್ರಪ್ಪ, ವೆಂಕಟೇಶರೆಡ್ಡಿ, ನಾರಾಯಣರೆಡ್ಡಿ, ಶೈಲಜಾ, ಪ್ರಭಮ್ಮ, ರಾಜಮ್ಮ ಮುಂತಾದವರು.