ಕಲ್ಪತರು ನಾಡು ಖ್ಯಾತಿಯ ಅರಸೀಕೆರೆಗೆ ನೂರಾರು ಕೋಟಿ ರೂಪಾಯಿಗಳ ಕಾಮಗಾರಿ ಉದ್ಘಾಟನೆ ಹಾಗೂ ಅನುದಾನ ಮಂಜೂರು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಹಲವು ಸಚಿವರಿಗೆ ಜುಲೈ 26ರಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ಕೆ ಎಂ ಶಿವಲಿಂಗೇಗೌಡ ತಿಳಿಸಿದರು.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಅಂದು ನೂರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಲಿದೆ. ಅದಕ್ಕಾಗಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದ್ದು, ಸುಮಾರು 60 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದ್ದು, ಎಲ್ಲರೂ ಸೇರಿ, ನಮ್ಮ ಕ್ಷೇತ್ರಕ್ಕೆ ಕೆಲಸ ಮಾಡಿಕೊಟ್ಟಿರುವವರಿಗೆ ಕೃತಜ್ಞತೆ, ಅಭಿನಂದನೆ ಸಮರ್ಪಣೆ ಮಾಡುತ್ತೇವೆ” ಎಂದರು.
“ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದರೂ, ಸರ್ಕಾರದ ಬಳಿ ಹಣ ಇಲ್ಲ, ಅಭಿವೃದ್ಧಿ ಆಗುತ್ತಿಲ್ಲವೆಂದು ಆರೋಪ ಮಾಡುತ್ತಿರುವವರಿಗೆ ಈ ಮೂಲಕ ಉತ್ತರ ನೀಡಬೇಕಿದೆ. ನಾಡಿನ ಜನರಿಗೂ ತಿಳಿಸಬೇಕಿದೆ” ಎಂದರು.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್, ಸರ್ಕಾರಿ ಈಜುಕೊಳ, ನಗರಸಭೆಯ ತರಕಾರಿ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ ಮೊದಲಾದವುಗಳು ಉದ್ಘಾಟನೆಯಾಗುತ್ತಿದ್ದರೆ, ತಾಲೂಕು ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಸಿಗದ ಕಾರಣ ಮುಂದಕ್ಕೆ ಹೋಗಿದೆ” ಎಂದು ಹೇಳಿದರು.
“ಒಳಾಂಗಣ ಕ್ರೀಡಾಂಗಣ, ಕೆರೆ-ಕಟ್ಟೆ ತುಂಬಿಸಲು ಎತ್ತಿನಹೊಳೆ ಯೋಜನೆ ನೀರು ಹರಿಸುವುದು, ಗಂಡಸಿ ಹೋಬಳಿ ಭಾಗಕ್ಕೆ ಹೇಮಾವತಿ ನೀರು ಪೂರೈಸುವ ಯೋಜನೆ, ಭದ್ರಾ ಮೇಲ್ದಂಡೆ ಮೂಲಕ ಬಾಣಾವರ, ಕಣಕಟ್ಟೆ ಭಾಗದ ಕೆರೆಗಳಿಗೆ ನೀರು ಹರಿಸುವುದು, ಪ್ರಗತಿ ಪಥ ಯೋಜನೆಯಡಿ ₹35 ಕೋಟಿ ವೆಚ್ಚದ ರಸ್ತೆ ಕಾಮಗಾರಿ, 50 ಕೋಟಿ ವೆಚ್ಚದಲ್ಲಿ ವಿವಿಧ ಹಾಸ್ಟೆಲ್ ನಿರ್ಮಾಣ, ಸುಮಾರು ₹35 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲೇ ವಿಶೇಷವಾಗಿ ಕಾರ್ಮಿಕರ ಮಕ್ಕಳಿಗೆ ಗೀಜಿಹಳ್ಳಿ ಬಳಿ ವಸತಿ ಶಾಲೆ ನಿರ್ಮಾಣ, ಅರಸೀಕೆರೆ ಕ್ಷೇತ್ರಕ್ಕೆ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆ ವಿದ್ಯುತ್ ನೀಡಲು ಅನುಕೂಲ ಆಗುವಂತೆ ಕುಸುಮ್ ಬಿ ಮತ್ತು ಸಿ ಯೋಜನೆಯಡಿ, ಸಚಿವ ಜಾರ್ಜ್ ಅವರ ಇಚ್ಛಾಶಕ್ತಿಯಿಂದ 250 ಕೋಟಿ ರೂಪಾಯಿ ವೆಚ್ಚದಲ್ಲಿ ಸೌರ ವಿದ್ಯುತ್ ಸ್ಥಾವರ ನಿರ್ಮಿಸಲಾಗುತ್ತಿದ್ದು, ಅಂದು ಇದಕ್ಕೂ ಶಿಲಾನ್ಯಾಸ ನೆರವೇರಲಿದೆ” ಎಂದರು.
“ಸೋಲಾರ್ ಮೂಲಕ ಶೇಖರಣೆ ಮಾಡಿದ ವಿದ್ಯುತ್ತನ್ನು ಹಂಚಿಕೆ ಮಾಡಲು ಕಣಕಟ್ಟೆ, ಅಗ್ಗುಂದ, ಬಾಗೇಶಪುರ ಮೊದಲಾದ ಕಡೆಗಳಲ್ಲಿ 4 ಸಬ್ ಸ್ಟೇಷನ್ ಕೂಡ ನಿರ್ಮಾಣ ಮಾಡಲಾಗುತ್ತಿದೆ. ಹಾಗೆಯೇ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಸಾರಿಗೆ ಬಸ್ ನಿಲ್ದಾಣ, ಬಹುದಿನಗಳ ಬೇಡಿಕೆಯಾಗಿದ್ದ ಬಸವಣ್ಣ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅತಿಥಿಗಳು ಅಡಿಗಲ್ಲು ಹಾಕಲಿದ್ದಾರೆ” ಎಂದು ವಿವರಿಸಿದರು.
“ಹೌಸಿಂಗ್ ಫಾರ್ ಆಲ್ ಯೋಜನೆಯಡಿ 1081 ಮನೆಗಳನ್ನು ನಿರ್ಮಿಸಲಾಗಿದೆ. ಈ ಪೈಕಿ 300 ಮನೆಗಳು ಪೂರ್ಣಗೊಂಡಿದ್ದು, ಹಣ ಕಟ್ಟಿರುವವವರಿಗೆ ಅಂದು ಹಂಚಿಕೆ ಮಾಡಲಾಗುವುದು. ಪತ್ರಕರ್ತರ ಭವನ, ಫುಡ್ ಕೋರ್ಟ್ ನಿರ್ಮಾಣಕ್ಕೂ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕಾಗಿ ಸರ್ಕಾರ ಅರಸೀಕೆರೆಗೆ ನೂರಾರು ಕೋಟಿ ರೂಪಾಯಿ ಅನುದಾನ ನೀಡಿದೆ. ಅದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.
ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಆಗಿಲ್ಲವೆಂದು ಸಮರ್ಥಿಸಿಕೊಂಡ ಕೆಎಂಶಿ, “ಕೊಂಚ ಆರ್ಥಿಕ ಮುಗ್ಗಟ್ಟಿಗೆ ಕೇಂದ್ರದ ಅನ್ಯಾಯ ದೋರಣೆ ಕಾರಣ. ನಾವು ಕಟ್ಟಿದ ತೆರಿಗೆ ಹಣ ವಾಪಸ್ ಕೊಡುತ್ತಿಲ್ಲ. ಒಂದೊಂದು ರಾಜ್ಯಕ್ಕೆ ಒಂದೊಂದು ರೀತಿ ದೋರಣೆ ಮಾಡಲಾಗುತ್ತಿದೆ” ಎಂದು ದೂರಿದರು.
ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಕುರಿತ ಪ್ರಶ್ನೆಗೆ ಹಿಂದೆ ಅವರು ಏಕೆ ಮಾಡಿದ್ದರು ಎಂದು ಮರು ಪ್ರಶ್ನೆ ಹಾಕಿ ಸರ್ಕಾರದ ನಡೆ ಸಮರ್ಥಿಸಿಕೊಂಡರು.
“ಈ ಭಾಗದ ಪ್ರಮುಖ ಬೆಳೆಯಾದ ತೆಂಗು ಬೆಳೆಗೆ ನಾಲ್ಕು ರೀತಿಯ ರೋಗ ಬಾಧಿಸುತ್ತಿದ್ದು, ಇದರ ಮೂಲೋತ್ಪಾದನೆಗೆ Anti-virus ಸಂಶೋಧನೆ ಮಾಡಲು ರಾಜ್ಯ, ಕೇಂದ್ರ ಸರ್ಕಾರ ಮುಂದಾಗಬೇಕು. ಜತೆಗೆ ರೈತರಿಗೆ ಪರಿಹಾರ ನೀಡಬೇಕು. ಅರಸೀಕೆರೆ, ಚನ್ನರಾಯಪಟ್ಟಣ, ತಿಪಟೂರು ಮೊದಲಾದ ಕಡೆ ತೆಂಗು ನಾಶವಾಗುವುದನ್ನು ತಪ್ಪಿಸಬೇಕು. ಇಲ್ಲವಾದರೆ ಕಷ್ಟದ ಸನ್ನಿವೇಶ ಎದುರಾಗಲಿದೆ. ಹೀಗಾಗಿ ಸರ್ಕಾರಗಳು ಸಮರೋಪಾದಿಯಲ್ಲಿ ಕಾರ್ಯೋನ್ಮುಖವಾಗಬೇಕು” ಎಂದು ಒತ್ತಾಯಿಸಿದರು.
“ಫಲ ಕೊಡುತ್ತಿರುವ ತೆಂಗು ನಾಶವಾದರೆ ಬೆಳೆದ ಮಕ್ಕಳನ್ನು ಕಳೆದುಕೊಂಡಂತೆ, ಹಾಗಾಗಿ ಈ ವಿಚಾರದಲ್ಲಾದರೂ ಕ್ಷೇತ್ರದ ಜನತೆ ಹೋರಾಟಕ್ಕೆ ಅಣಿಯಾಗಿ” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮನರೇಗಾ ಹಣ ದುರುಪಯೋಗ ಸಾಬೀತಾದರೂ ಕ್ರಮವಿಲ್ಲ; ಭ್ರಷ್ಟರ ರಕ್ಷಣೆಗೆ ಜಿಪಂ ಸಿಇಒ?
“ನನಗೆ ಸರ್ಕಾರದಲ್ಲಿ ಮಂತ್ರಿಸ್ಥಾನ ಕೊಡುವ ವಿಶ್ವಾಸ ಇದೆ. ಅನೇಕ ಸಲ ಸಿಎಂ ಹಾಗೂ ಡಿಸಿಎಂ ಹೇಳಿದ್ದಾರೆ. ಆದರೆ ಆ ಅಪೇಕ್ಷೆ ಇಟ್ಟುಕೊಂಡೇ ನಾನು ಕೆಲಸ ಮಾಡುತ್ತಿಲ್ಲ. ನಾನು 14 ಮತಗಳಿಂದ ಸೋತು ಅರಸೀಕೆರೆಗೆ ಬಂದಾಗ ಇಲ್ಲಿಯ ಜನ ಕೈ ಹಿಡಿದಿದ್ದಾರೆ. ಅವರ ಋಣ ತೀರಿಸುವುದು ನನ್ನ ಉದ್ದೇಶ. ಜತೆಗೆ ತೆಂಗು ಬೆಳೆಗಾರರನ್ನು ಉಳಿಸಬೇಕಿದೆ” ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ನಗರಸಭೆ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಮುರುಂಡಿ ಶಿವಯ್ಯ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಿಖಂದರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್ ಸೇರಿದಂತೆ ಇತರರು ಇದ್ದರು.