ಕಾಂಗ್ರೆಸ್ ಮುಖಂಡ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ‘2ನೇ ಅಂಬೇಡ್ಕರ್’ ಎಂದು ಸಾಬೀತುಪಡಿಸಬಹುದು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ಬಿಜೆಪಿ ಅಪಹಾಸ್ಯ ಮಾಡಿದ್ದು, ‘ದಲಿತರು ಮತ್ತು ಸಂವಿಧಾನದ ಪಿತಾಮಹರಿಗೆ ಮಾಡಿದ ಅವಮಾನ’ ಎಂದು ಹೇಳಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಜಾತಿ ಗಣತಿ ತಪ್ಪಾಗಿತ್ತು. ಅದನ್ನು ಸರಿಪಡಿಸಲು ಕಾಂಗ್ರೆಸ್ ದೃಢನಿಶ್ಚಯ ಮಾಡಿದೆ ಎಂದು ಶುಕ್ರವಾರ ರಾಹುಲ್ ಗಾಂಧಿ ಹೇಳಿದ್ದರು.
ಅವರ ಹೇಳಿಕೆ ಬೆನ್ನಲ್ಲೇ, ಎಕ್ಸ್ನಲ್ಲಿ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರು ಪೋಸ್ಟ್ ಮಾಡಿದ್ದು, “ಪ್ರಗತಿಗೆ ಇತಿಹಾಸವು ಮತ್ತೆ ಮತ್ತೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಒಬಿಸಿಗಳು ಭಾವಿಸಬೇಕಾಗುತ್ತದೆ. ಟಾಲ್ಕಟೋರಾ ಕ್ರೀಡಾಂಗಣದ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಹೇಳಿದ್ದನ್ನು ಒಬಿಸಿಗಳು ಅನುಸರಿಸಬೇಕು ಮತ್ತು ಬೆಂಬಲಿಸಬೇಕು. ಅದು ಆದಲ್ಲಿ, ಒಬಿಸಿಗಳಿಗೆ ರಾಹುಲ್ ಗಾಂಧಿ ಎರಡನೇ ಅಂಬೇಡ್ಕರ್ ಎಂಬುದಾಗಿ ಸಾಬೀತುಪಡಿಸುತ್ತಾರೆ” ಎಂದು ಹೇಳಿದ್ದಾರೆ.
ಉದಿತ್ ರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, “ಕಾಂಗ್ರೆಸ್ ‘ಮೂಲ’ ಅಂಬೇಡ್ಕರ್ ಅವರನ್ನು ಎಂದಿಗೂ ಗೌರವಿಸದಿದ್ದರೂ 2ನೇ ಅಂಬೇಡ್ಕರ್ ಬಗ್ಗೆ ಮಾತನಾಡುತ್ತಿದೆ. ದಲಿತರು ಮತ್ತು ಬಿ.ಆರ್ ಅಂಬೇಡ್ಕರ್ ಅವರನ್ನು ಅವಮಾನಿಸುವುದು ಕಾಂಗ್ರೆಸ್ಸಿನ ಹೆಗ್ಗುರುತು. ಅಂಬೇಡ್ಕರ್ ಅವರನ್ನು ಅವಮಾನಿಸಿದವರು ಯಾರು? ಅವರಿಗೆ ಭಾರತ ರತ್ನವನ್ನು ನೀಡದಿದ್ದವರು ಯಾರು? ಜಮ್ಮು ಮತ್ತು ಕಾಶ್ಮೀರದಲ್ಲಿ ಅಂಬೇಡ್ಕರ ಸಂವಿಧಾನವನ್ನು ಜಾರಿಗೆ ತರಲು ಬಿಡದಿದ್ದವರು ಯಾರು? ಮುಸ್ಲಿಂ ಮೀಸಲಾತಿ ಬಗ್ಗೆ ಯಾರು ಮಾತನಾಡಿದರು? ಮೀಸಲಾತಿ ಕೆಟ್ಟದು ಎಂದು ಹೇಳಿದವರು ಯಾರು – ನೆಹರು” ಎಂದು ಆರೋಪಿಸಿದ್ದಾರೆ.
“ಈಗ ಅವರು ನೆಹರು ಅಥವಾ ಇಂದಿರಾ ಗಾಂಧಿ ಅಲ್ಲ. 2ನೇ ಅಂಬೇಡ್ಕರ್ ಆಗಲು ಬಯಸುತ್ತಾರೆಯೇ? ಇದರರ್ಥ ಗಾಂಧಿ ಕುಟುಂಬವು ನೆಹರು ಮತ್ತು ಇಂದಿರಾ ಗಾಂಧಿ ತಪ್ಪು ಹಾದಿಯಲ್ಲಿ ನಡೆದಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುತ್ತಿದೆ. ಕಾಂಗ್ರೆಸ್ ಕೇವಲ ಒಂದು ಕುಟುಂಬವನ್ನು ಪೂಜಿಸುವುದರಲ್ಲಿ ನಂಬಿಕೆ ಇಟ್ಟಿದೆ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಅನಿಲ್ ಅಂಬಾನಿ ವಂಚನೆ ಪ್ರಕರಣ: ಮೋದಿ ಅತ್ಯಾಪ್ತನ ಸಹೋದರ ಬ್ಯಾಂಕ್ಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಕಥೆ ಇದು!
ದೆಹಲಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ನಾನು ನನ್ನ ಕೆಲಸದ ಬಗ್ಗೆ ಯೋಚಿಸುತ್ತೇನೆ. ಯಾವುದು ಸರಿಯಾಗಿದೆ – ಎಲ್ಲಿ ತಪ್ಪಾಗಿದೆ ಎಂಬ ಬಗ್ಗೆ ಪರಾಮರ್ಶಿಸುತ್ತೇನೆ. ಭೂಸ್ವಾಧೀನ ಮಸೂದೆ, ಮನರೇಗಾ, ಆಹಾರದ ಹಕ್ಕು, ಬುಡಕಟ್ಟು ಮಸೂದೆ ವಿಚಾರದಲ್ಲಿ ನಮ್ಮ ಹೋರಾಟಗಳು ಸರಿಯಾದ ಹಾದಿಯಲ್ಲಿವೆ. ಬುಡಕಟ್ಟು ಜನಾಂಗದವರು, ದಲಿತರು ಹಾಗೂ ಮಹಿಳೆಯರ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ನಾವು ಉತ್ತಮ ಕೆಲಸ ಮಾಡಬೇಕು” ಎಂದು ಹೇಳಿದ್ದರು.
“ಕಾಂಗ್ರೆಸ್ ಮತ್ತು ನನ್ನ ಕೆಲಸಗಳಲ್ಲಿ ಒಂದು ನ್ಯೂನತೆ ಇದೆ: ನಾನು OBC ಸಮುದಾಯವನ್ನು ಸರಿಯಾದ ರೀತಿಯಲ್ಲಿ ರಕ್ಷಿಸಲಿಲ್ಲ. ಈ ಹಿಂದೆ, OBC ಸಮಸ್ಯೆಗಳನ್ನು ನಾನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. 10 ರಿಂದ 15 ವರ್ಷಗಳಿಂದ ದಲಿತರು ಎದುರಿಸುತ್ತಿರುವ ತೊಂದರೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅವರ ಸಮಸ್ಯೆಗಳನ್ನು ಅರಿತಿದ್ದೇನೆ. ಅವುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ, OBCಗಳ ಸಮಸ್ಯೆಗಳು ಮರೆಯಾಗಿರುತ್ತವೆ. ಆ ಸಮಯದಲ್ಲಿ ಒಬಿಸಿ ಸಮುದಾಯದ ಸಮಸ್ಯೆಗಳು ಮತ್ತು ಸಮಸ್ಯೆಗಳ ಬಗ್ಗೆ ನನಗೆ ತಿಳಿದಿದ್ದರೆ, ನಾನು ಆಗಲೇ ಜಾತಿ ಆಧಾರಿತ ಜನಗಣತಿಯನ್ನು ನಡೆಸುತ್ತಿದ್ದೆ. ಅದು ನನ್ನ ತಪ್ಪು, ಅದನ್ನು ನಾನು ಸರಿಪಡಿಸುತ್ತೇನೆ” ಎಂದು ರಾಹುಲ್ ಗಾಂಧಿ ಹೇಳಿದ್ದರು.