ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡುವ ಅಪ್ರಾಪ್ತರ ಪೋಷಕರಿಗೆ 25 ಸಾವಿರ ದಂಡ ವಿಧಿಸುವುದಾಗಿ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸ್ ಎಚ್ಚರಿಕೆ ನೀಡಿದರು.
ಇಂದು ಚಿಂತಾಮಣಿ ನಗರ ಭಾಗದಲ್ಲಿ ಅಪ್ರಾಪ್ತರು ಓಡಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ತಡೆದು ನಗರ ಠಾಣೆ ಪೊಲೀಸರು ದಂಡ ವಿಧಿಸಿ ಅವರ ಪೋಷಕರಿಗೆ ಕಾನೂನಿನ ಅರಿವು ಮೂಡಿಸಿದರು.
ಈ ವೇಳೆ ಎಸ್ ಪಿ ಕುಶಾಲ್ ಚೌಕ್ಸ್ ಮಾತನಾಡಿ, “ಹೆಲ್ಮೆಟ್ ಧರಿಸಲು ಉದಾಸೀನತೆ ತೋರುವ ಜೊತೆಗೆ ಸಂಚಾರಿ ನಿಯಮ ಉಲ್ಲಂಘಿಸುವುದು ಸರಿಯಲ್ಲ. ವಾಹನ ಸಂಚಾರ ನಿಯಮ ಎಲ್ಲೆಡೆ ಅನ್ವಯವಾಗುತ್ತದೆ. ವಾಹನ ಸವಾರರು ತಪ್ಪದೇ ಪಾಲಿಸಬೇಕೆಂದು ಸೂಚಿಸಿದರು. ಅಪ್ರಾಪ್ತ ವಯಸ್ಸಿನ ವಾಹನ ಚಾಲಕರ ನಿಯಂತ್ರಣ ಕುರಿತು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಇಲ್ಲಿಯವರೆಗೆ ಚಿಕ್ಕಬಳ್ಳಾಪುರದಲ್ಲಿ 40 ಹಾಗೂ ಬಾಗೇಪಲ್ಲಿಯಲ್ಲಿ 22 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ಪೋಷಕರನ್ನು ಕರೆಸಿ ಕಾನೂನಿನ ಅರಿವು ಮೂಡಿಸಲಾಗಿದೆ. ಅಪ್ರಾಪ್ತರಿಗೆ ಯಾವುದೇ ಕಾರಣಕ್ಕೂ ವಾಹನ ನೀಡಬಾರದು. ಇದು ಮುಂದುವರಿದರೆ ಕ್ರಮ ಕೈಗೊಳ್ಳಲಾಗುವುದು. ಸಂಚಾರಿ ನಿಯಮ ಪಾಲಿಸದೆ ವಾಹನ ಚಲಾಯಿಸುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ” ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಚಿಂತಾಮಣಿ | ನಿಮಿಷಾ ಪ್ರಿಯಾ ಪ್ರಕರಣ: ತಲಾಲ್ ಕುಟುಂಬದೊಂದಿಗೆ ಡಾ. ಸಿ ಕೆ ಮೌಲಾ ಶರೀಫ್ ಮಾತುಕತೆ
ಈ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ಜಗನ್ನಾಥ್ ರೈ, ಡಿವೈಎಸ್ಪಿ ಮುರುಳಿಧರ್, ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಿ ಕುಮಾರ್, ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಸೇರಿದಂತೆ ಮತ್ತಿತರರು ಇದ್ದರು.