ನಮ್ಮ ಮಾತೃ ಭಾಷೆ ಕನ್ನಡವನ್ನು ಕಲಿತು ನಂತರ ಬೇರೆ ಭಾಷೆಯತ್ತ ಹೋಗಲಿ. ಶಿಕ್ಷಣ ಸೇರಿದಂತೆ ಎಲ್ಲಾ ರಂಗದಲ್ಲೂ ಎಂದಿಗೂ ಕನ್ನಡವೇ ಪ್ರಥಮ ಭಾಷೆಯಾಗಿರಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಆರ್.ಬಿ.ಜಯಣ್ಣ ತಿಳಿಸಿದರು
ಗುಬ್ಬಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಡೆ ಕಾಲೇಜು ವಿದ್ಯಾರ್ಥಿಗಳ ಕಡೆ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಭಾಷೆಯ ಮೇಲೆ ನಾವು ಪ್ರೀತಿ ವ್ಯಾಮೋಹ ಬೆಳೆಸಿಕೊಳ್ಳಬೇಕು. ಸುಂದರ ಸುಲಲಿತ ಸುಶ್ರಾವ್ಯ ಕನ್ನಡ ಭಾಷೆ ಸಾಹಿತ್ಯ ಕ್ಷೇತ್ರದಲ್ಲೂ ಶ್ರೀಮಂತ ಎನಿಸಿದೆ. ಕನ್ನಡ ಸಾಹಿತ್ಯ ಸರಳ ಎನಿಸಿದ್ದು 12 ನೇ ಶತಮಾನದ ವಚನ ಸಾಹಿತ್ಯದ ಗದ್ಯ ಪದ್ಯ ಪದಗಳು ಜನರ ಮನಸ್ಸಿನಲ್ಲಿ ಉಳಿದಿದೆ. ಅರ್ಥಪೂರ್ಣ ವಚನಗಳು ಆಡು ಭಾಷೆ ಕನ್ನಡದಲ್ಲೇ ಇರುವುದು ಸಾಹಿತ್ಯ ರಂಗದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಗಮನಾರ್ಹ ವಿಚಾರವಾಗಿದೆ. ನಮ್ಮಲ್ಲಿ ಪ್ರಾದೇಶಿಕವಾರು ಭಾಷೆ ಭಿನ್ನವಾದರೂ ಕನ್ನಡ ಎಂದಿಗೂ ಒಂದೇ ಎಂದರು.
ಕಡಬ ಕಾಲೇಜು ಪ್ರಾಚಾರ್ಯ ಹಾಗೂ ಸಾಹಿತಿ ಹಾಗಲವಾಡಿ ಪಾಲಾಕ್ಷ ಮಾತನಾಡಿ ಪಸ್ತುತ ಯುವಪೀಳಿಗೆ ಸಾಮಾಜಿಕ ಜಾಲತಾಣದ ಹಿಂದೆ ಹೊರಟಿದೆ. ಮೊಬೈಲ್ ನಲ್ಲಿ ಒಳ್ಳೆಯ ವಿಚಾರಕ್ಕಿಂತ ಕೆಟ್ಟ ಚಟವೇ ಹೆಚ್ಚಾಗಿದೆ. ಮೊಬೈಲ್ ಮೂಲಕ ಕನ್ನಡ ಟೈಪಿಂಗ್ ಬಳಕೆ, ಕನ್ನಡದ ಮೆಸೇಜ್ ಮಾಡುವ ಕಲೆ ಕಲಿತಿದ್ದರೂ ಒಂದಿಷ್ಟು ಕನ್ನಡಕ್ಕೆ ಬೆಲೆ ಸಿಗುತ್ತಿತ್ತು. ಈ ಜೊತೆ ಯುವ ಜನತೆ ಕವನ ರಚನೆ ಬಗ್ಗೆ ತಿಳಿದುಕೊಳ್ಳಬೇಕಿದೆ. ಸರಳ ಪದ ಬಳಕೆಯ ವಿಷಯವಾರು ಕವನ ರಚನೆ ಮೊದಲು ಕಲಿಯಬೇಕು. ಪರಿಸರ, ಆಧ್ಯಾತ್ಮಿಕತೆ, ಸಾಮಾಜಿಕತೆ, ಶೋಷಣೆ ಹೀಗೆ ವಿಷಯದ ಮೇಲೆ ಕವನ ಬರೆಯುವ ಕಲೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಕನ್ನಡ ಭಾಷೆ ಮೈಗೂಡಿಸಿಕೊಂಡು ವಿದ್ಯಾರ್ಜನೆ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಾತೃ ಭಾಷೆ ಕನ್ನಡವನ್ನು ಹೆಚ್ಚು ಕಲಿತು ಬಳಕೆ ಮಾಡಬೇಕು. ಸಾಹಿತ್ಯಾಸಕ್ತಿ ಮೇಲೆಸಿಕೊಂಡು ವೇದಿಕೆ ಬಳಸಿಕೊಳ್ಳಬೇಕು. ಈ ವರ್ಷ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗುಬ್ಬಿ ಪಟ್ಟಣದಲ್ಲಿ ನಡೆಸಲು ಪರಿಷತ್ತು ಸಜ್ಜಾಗಬೇಕು. ಜನ ಪ್ರತಿನಿಧಿಗಳ ಜೊತೆ ಸಾರ್ವಜನಿಕರ ಸಹಕಾರ ಖಂಡಿತಾ ಸಿಗುತ್ತದೆ. ನಮ್ಮ ಗುಬ್ಬಿ ಪಟ್ಟಣದ ಡಾ.ನಂಜುಂಡಸ್ವಾಮಿ ಅವರನ್ನು ಸಾಹಿತ್ಯ ಪರಿಷತ್ತು ಗುರುತಿಸಬೇಕು ಎಂದ ಅವರು ಬಾಲಕಿಯರ ಕಾಲೇಜಿಗೆ ಸೈಕಲ್ ಸ್ಟ್ಯಾಂಡ್ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿ ಮೂಲಕ ಅನುದಾನ ಮಂಜೂರು ಮಾಡಲು ಮನವಿ ಮಾಡಿದ್ದೇವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಚ್.ಸಿ.ಯತೀಶ್ ಮಾತನಾಡಿ ಕನ್ನಡ ಸಾಹಿತ್ಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಮನದಟ್ಟು ಮಾಡುವ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ಜೂನಿಯರ್ ಕಾಲೇಜಿನಲ್ಲಿ ಈ ಕಾರ್ಯಕ್ರಮ ನಡೆಸುತ್ತೇವೆ. ಈ ಜೊತೆಗೆ ಕನ್ನಡ ಜಾಗೃತಿ ಮೂಡಿಸಿ ಈ ಬಾರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಪೂರ್ವ ತಯಾರಿ ನಡೆಸಬೇಕಿದೆ. ಸಮ್ಮೇಳನ ಬಗ್ಗೆ ಪೂರ್ವಬಾವಿ ಸಭೆಯನ್ನು ಶೀಘ್ರದಲ್ಲಿ ನಡೆಸಿ ಅಂತಿಮ ತೀರ್ಮಾನ ಕೈಗೊಂಡು ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125 ಅಂಕ ಗಳಿಸಿದ 29 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಪ್ರಾಚಾರ್ಯ ಮಂಜುನಾಥ್, ಕಸಾಪ ಹೋಬಳಿ ಅಧ್ಯಕ್ಷ ಕೆ.ಎಂ.ರವೀಶ್, ಕಾರ್ಯದರ್ಶಿ ಜಯಣ್ಣ, ಜಿ.ಗೋವಿಂದಯ್ಯ, ಜಿ.ಆರ್.ಅಪ್ಪಾಜಿ, ಗಂಗಾಧರ್, ಪರಮೇಶಯ್ಯ, ಅರುಣ್ ಕುಮಾರ್, ಅಡವೀಶ್, ಲೋಕೇಶ್, ದೊಡ್ಡಯ್ಯ, ಮೂರ್ತಿ, ಕೆ.ವಿ.ದಯಾನಂದ್ ಇತರರು ಇದ್ದರು.