ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ ಉದ್ದಿಮೆಗಳಲ್ಲಿ ದುಡಿಯುವ ನೌಕರರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದೊಂದಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದಿಂದ ಹಾಸನ ಜಿಲ್ಲಾ ಕಾರ್ಮಿಕ ಇಲಾಖೆ ಎದುರು ಪ್ರತಿಭಟನೆ ನಡೆಸಿ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, “ಕರ್ನಾಟಕ ಸರ್ಕಾರವು ʼಪಂಚಾಯತ್ ರಾಜ್ʼ ಸಂಸ್ಥೆಯಲ್ಲಿ ಉದ್ಯೋಗ ಉದ್ದಿಮೆ ಮಾಡುವ ನೌಕರರಿಗೆ 2021 ನವೆಂಬರ್ ತಿಂಗಳಲ್ಲಿ ಅವೈಜ್ಞಾನಿಕವಾಗಿ ಜಾರಿ ಮಾಡಿರುವ ಕನಿಷ್ಠ ವೇತನವನ್ನು ಕರ್ನಾಟಕ ಗೌರವಾನ್ವಿತ ಉಚ್ಚನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ ಸಂಘವು ರಿಟ್ ದಾಖಲೆ ಮಾಡಿದ ನಂತರ ನ್ಯಾಯಾಲಯದಲ್ಲಿ ವಾದ-ವಿವಾದಗಳು 2023 ಸೆಪ್ಟಂಬರ್ನಿಂದ ಆರಂಭವಾಗಿ 2024ರಲ್ಲಿ ಮಾನ್ಯ ನ್ಯಾಯಾಲಯದ ಏಕಸದಸ್ಯ ಪೀಠವು ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಕನಿಷ್ಠ ವೇತನ ನಿಗದಿ ಪಡಿಸಲು 10 ವಾರಗಳ ಗಡುವು ನೀಡಿದ ಮೇಲೆ ಮೂರು ವರ್ಷ ನಾಲ್ಕು ತಿಂಗಳ ನಂತರ 2025ರಂದು ಸರ್ಕಾರ ಕನಿಷ್ಠ ವೇತನ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು” ಎಂದರು.
“ಕರವಸೂಲಿಗಾರ, ಗುಮಾಸ್ತ, ಕ್ಲರ್ಕ್, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಅತ್ತಿ ಕುಶಲರಾಗಿ ಪರಿಗಣಿಸಿ ಮೂಲ ವೇತನ ₹38,021.86 ನಿಗದಿಪಡಿಸಬೇಕು. ವಾಟರ್ಮ್ಯಾನ್(ನೀರುಗಂಟಿ), ಪಂಪ್ ಆಪರೇಟರ್ ಕಂ ಮೆಕ್ಯಾನಿಕ್ ಹುದ್ದೆಗಳನ್ನು ʼಕುಶಲʼರಾಗಿ ಪರಿಗಣಿಸಿ’ ಮೂಲ ವೇತನ ₹33,062.50 ನಿಗದಿಪಡಿಸಬೇಕು. ಅಟೆಂಡರ್, ಜವಾನರು ʼಅರೆ ಕುಶಲʼರಾಗಿ ಪರಿಗಣಿಸಿ ಮೂಲ ವೇತನ ₹28750 ನಿಗದಿಪಡಿಸಬೇಕು. ಕಸಗುಡಿಸುವವರು/ಸ್ವಚ್ಛಾತಾಗಾರರು ʼಅಕುಶಲʼರಾಗಿ ಪರಿಗಣಿಸಿ ಮೂಲ ವೇತನ ₹25,000 ನಿಗದಿಪಡಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ
“ಕನಿಷ್ಠ ವೇತನದ ಜಾರಿಯನ್ನು 2025ರಿಂದ ಅನ್ವಯವಾಗುವಂತೆ ಜಾರಿ ಮಾಡಬೇಕು ಜತೆಗೆ 9,469 ಅಂಶಗಳಿಗಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ ದಿನಕ್ಕೆ ಆರು ಪೈಸೆ ನಿಗದಿಯಾಗಬೇಕು. ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುವ ಸಿಬ್ಬಂದಿಗಳಿಗೆ ʼಸೇವಾ ಹಿರಿತನದʼ ಮಾನ್ಯತೆ ನೀಡಿ ಮೂಲ ವೇತನಕ್ಕೆ ಶೇ.2ರಷ್ಟು ಹೆಚ್ಚಳವನ್ನು ಪ್ರತಿ ವರ್ಷ ಪರಿಗಣಿಸಿ ಹೆಚ್ಚುವರಿ ಭತ್ಯೆ ನೀವುವಂತಹ ಬೇಡಿಕೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಾಂತ ಎಲ್ಲ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ ಟಿ ಹೊನ್ನೇಗೌಡ, ಖಜಾಂಚಿ ಕುಮಾರಸ್ವಾಮಿ, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಕರಿಯಪ್ಪ, ಅರಕಲಗೂಡು ಕಾರ್ಯದರ್ಶಿ ಅಶೋಕ್, ಬೇಲೂರು ತಾಲೂಕು ಕಾರ್ಯದರ್ಶಿ ನಂದೀಶ್, ಅರಸೀಕೆರೆ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಡಿವೈಎಫ್ವೈ ಜಿಲ್ಲಾ ಕಾರ್ಯದರ್ಶಿ ಎಂ ಜಿ ಪೃಥ್ವಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್ ಸೇರಿದಂತೆ ಇತರರು ಇದ್ದರು.