ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಎಸ್.ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಳೇನಹಳ್ಳಿ ಕೆ.ಜಿ.ಶಿವಣ್ಣ, ಉಪಾಧ್ಯಕ್ಷರಾಗಿ ಕೊಡಗೀಹಳ್ಳಿ ಪಾಳ್ಯ ವೆಂಕಟಲಕ್ಷ್ಮಮ್ಮ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿ ತಾಪಂ ಇಓ ಶಿವಪ್ರಕಾಶ್ ಹಾಗೂ ಗುರುಪ್ರಸಾದ್ ನಡೆಸಿಕೊಟ್ಟರು. ಸಾಮಾನ್ಯ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ತುಳಸಿದಾಸ್ ಸಲ್ಲಿಸಿದ್ದ ರಾಜೀನಾಮೆ ಹಿನ್ನಲೆ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸಲಾಗಿ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿವಣ್ಣ ಅವರನ್ನು ಅಧ್ಯಕ್ಷರಾಗಿ ಹಾಗೂ ಅನಿತಾ ಅವರ ರಾಜೀನಾಮೆಯಿಂದ ತೆರವಾದ ಸಾಮಾನ್ಯ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟಲಕ್ಷ್ಮಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನಲೆ ಸರ್ವ ಸದಸ್ಯರ ಸಮ್ಮುಖದಲ್ಲಿ ಇಬ್ಬರನ್ನು ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ಗ್ರಾಪಂ ನೂತನ ಅಧ್ಯಕ್ಷ ಶಿವಣ್ಣ ಮಾತನಾಡಿ ಎಸ್.ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸವಲತ್ತುಗಳಾದ ನೀರು, ರಸ್ತೆ, ಚರಂಡಿ, ವಿದ್ಯುತ್ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಿ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಕೆಲಸ ಮಾಡುತ್ತೇನೆ. ಶಾಸಕ ವಾಸಣ್ಣ ಅವರ ಮಾರ್ಗದರ್ಶನದಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಪಂಚಾಯಿತಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಪಂ ನೂತನ ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ ಮಾತನಾಡಿ ಎಸ್.ಕೊಡಗೀಹಳ್ಳಿಯನ್ನು ಮಾದರಿ ಗ್ರಾಮ ಪಂಚಾಯಿತಿಯಾಗಿ ಗುರುತಿಸುವ ಕೆಲಸ ಎಲ್ಲಾ ಸದಸ್ಯರ ಜೊತೆ ಸೇರಿ ನಡೆಸುತ್ತೇವೆ. ಅಭಿವೃದ್ದಿ ಕೆಲಸಗಳಿಗೆ ಉಳಿದ ನಾಲ್ಕೈದು ತಿಂಗಳು ನಿರಂತರ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಸದಸ್ಯರಾದ ಅಶ್ವತ್ತೇಗೌಡ, ರಂಗರಾಜು, ಗಂಗನರಸಮ್ಮ, ಜಯಮ್ಮ, ಶಾಂತಮ್ಮ, ಅಂಬುಜಮ್ಮ, ನೀಲಮ್ಮ, ತುಳಸಿದಾಸ್, ಅನಿತಾ, ಧನಲಕ್ಷ್ಮಿ, ಶ್ವೇತಾ, ಮಂಜಮ್ಮ, ರಾಮೇಗೌಡ, ಪ್ರೇಮ, ಮುಖಂಡರಾದ ಕೆ.ಜಿ.ಗಿರೀಶ್, ಗಳಗ ದಿವಾಕರ್, ಪಾಂಡುರಂಗಣ್ಣ, ಪಿಡಿಓ ಬಿ.ವಿ.ಶಶಿಧರ್, ಕಾರ್ಯದರ್ಶಿ ರವಿ, ಗೌಸ್ ಪೀರ್ ಇತರರು ಇದ್ದರು.