ಅನುಭವಿ, ಪ್ರಾಮಾಣಿಕ ಮತ್ತು ಕೆಲಸದಲ್ಲಿ ಬದ್ಧತೆ ಹೊಂದಿರುವ ಅಧಿಕಾರಿಗಳು ಇಲಾಖೆಯ ಆಸ್ತಿಯಾಗಿರುತ್ತಾರೆ ಎಂದು ಧಾರವಾಡ ಜಿಲ್ಲಾ ಪಂಚಾಯತ್ನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಬಿ ಎಸ್ ಮೂಗನೂರಮಠ ಅವರದ್ದು ಯುವ ಅಧಿಕಾರಿ, ನೌಕರರಿಗೆ ಮಾದರಿ ಆಗಿರುವ ವ್ಯಕ್ತಿತ್ವ. ಕೆಲಸದಲ್ಲಿನ ಅವರ ಪ್ರಾಮಾಣಿಕತೆ, ಬದ್ಧತೆ ಮತ್ತು ತ್ವರಿತತೆಗಳು ಅವರನ್ನು ಮೇಲ್ಮಟ್ಟಕ್ಕೆ ಏರಿಸಿವೆ. ಅವರ ಡಿಎಸ್ ಅವಧಿಯಲ್ಲಿ ಜಿಲ್ಲಾ ಪಂಚಾಯತ್ ಉತ್ತಮ ಸಾಧನೆ ಮಾಡಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಭುವನೇಶ್ ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಸೇವಾ ನಿವೃತ್ತಿ ಹೊಂದಿದ ಜಿ ಪಂ ಉಪ ಕಾರ್ಯದರ್ಶಿ ಬಿ ಎಸ್ ಮೂಗನೂರಮಠ ಬಿಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಉಪಕಾರ್ಯದರ್ಶಿಗಳಾಗಿ ಮೇಲಿನ ಅಧಿಕಾರಿಗಳಿಗೆ ಸೂಕ್ತ ಸಲಹೆ ಮತ್ತು ಕೆಳಗಿನ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುವ ಸಾಮರ್ಥ್ಯ ಹೊಂದಿರಬೇಕು. ಅಂತಹ ಶಕ್ತಿ, ಮೂಗನೂರಮಠರಿಗಿತ್ತು. ಸರ್ಕಾರಿ ಸೇವೆ ದೇವರ ಕೆಲಸ ಎಂಬುದು ಮಾತಿಗಾಗಿ, ತೋರಿಕೆಗಾಗಿ ಇರಬಾರದು. ಅದನ್ನು ಅಂತರಾಳದಲ್ಲಿ ಅನುಭವಿಸಿ, ಬಾಹ್ಯವಾಗಿ ಪ್ರಕಟಿಸಬೇಕು. ನೌಕರಿ ಬರೀ ನೌಕರಿ ಅಗಿದ್ದರೆ ಅದರಲ್ಲಿ ಒಂದು ರೀತಿಯ ಜಡತ್ವ ಬರುತ್ತದೆ. ಕರ್ತವ್ಯದಲ್ಲಿ ಖುಷಿ, ಆಸಕ್ತಿ, ಪ್ರಾಮಾಣಿಕತೆ, ಬದ್ಧತೆ, ನಮ್ಮತನ, ನಮ್ಮದು ಎಂಬ ಭಾವನೆಗಳಿದ್ದರೆ ಅದು ಸೇವೆ ರೂಪದಲ್ಲಿ ಬದಲಾಗುತ್ತದೆ” ಎಂದರು.
ಬಿ ಎಸ್ ಮೂಗನೂರಮಠ ಅವರು ಗೌರವ ಅಭಿನಂದನೆ ಸ್ವೀಕರಿಸಿ ಮಾತನಾಡಿ, “ನನಗೆ ಕೆಲಸದ ಸಂತೃಪ್ತಿ ಇದೆ. ಜನರ ಜತೆ ನೇರವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನನ್ನ ಪೂರ್ವ ಜನ್ಮದ ಪುಣ್ಯದಿಂದ, ಹಿರಿಯರ ಆಶಿರ್ವಾದದಿಂದ ಈ ಇಲಾಖೆಯಲ್ಲಿ ನೌಕರಿ ಲಭಿಸಿದೆ. ಗ್ರಾಮೀಣ ಜನರ ಸೇವೆ ಮಾಡುವ ಸೌಭಾಗ್ಯ ನನ್ನದಾಗಿದೆ. ಈ ಅವಕಾಶಕ್ಕಾಗಿ ಚಿರಋಣಿ ಆಗಿದ್ದೇನೆ” ಎಂದು ಭಾವುಕರಾದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ತುಳು ಅಕಾಡೆಮಿಯಿಂದ ದಾಖಲೀಕರಣ ಘಟಕ ರೂಪಿಸುವ ಯೋಜನೆಯ ಅಗತ್ಯವಿದೆ: ಡಾ. ವೈ ಎನ್ ಶೆಟ್ಟಿ
“ಮನೆ ಮತ್ತು ಕಚೇರಿ ಎರಡೂ ಒಂದಾಗಬಾರದು. ಮನೆ ಬೇರೆ ಕೆಲಸ ಬೇರೆ ಎಂದು ತಿಳಿದು ನಡೆದರೆ ಎರಡೂ ಕಡೆ ನೆಮ್ಮದಿ, ಸಂತೋಷ ಇರುತ್ತದೆ. ಆದರೆ ನಾವು ಇಂದಿನ ಇಲಾಖಾ ಕಾರ್ಯವೈಖರಿಯಲ್ಲಿ ಕೆಲಸಮಾಡುವಲ್ಲಿ ಮನೆ ಮತ್ತು ಕಚೇರಿ ಎರಡೂ ಕೂಡ ಒಂದೇ ಆಗುತ್ತಿವೆ. ಇದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ಬೇರ್ಪಡಿಸಿಕೊಂಡು ಬದಕುವ ಕಲೆಯನ್ನು ನಾವು ಕಲಿಯಬೇಕು” ಎಂದರು.