ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಮಾರುತಿನಗರ ಬಡಾವಣೆಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು, ಮಗಳ ನಿಶ್ಚಿತಾರ್ಥಕ್ಕೆಂದು ಮಾಡಿಸಿದ್ದ ಬಂಗಾರದ ಒಡವೆಗಳು ಹಾಗೂ ಹಣವನ್ನು ಖದೀಮರು ದೋಚಿರುವ ಘಟನೆ ನಾಗರಿಕರಲ್ಲಿ ಆತಂಕ ಮನೆಮಾಡಿದೆ.
ಪಟ್ಟಣದ ಮಾರುತಿ ನಗರ ಬಡಾವಣೆ ಒಂದನೇ ಕ್ರಾಸ್ನಲ್ಲಿನ ಸರ್ವೇಯರ್ ಜಗದೀಶ್ ಅವರ ಮನೆಗೆ ಹಾಡಹಗಲೇ ಕನ್ನ ಹಾಕಿರುವ ಕಳ್ಳರು ಅಂದಾಜು 30 ಲಕ್ಷ ರೂಪಾಯಿಗಳ ಚಿನ್ನಾಭರಣ ಹಾಗೂ 3.50 ಲಕ್ಷ ನಗದು ದೋಚಿದ್ದಾರೆ. ಸರ್ವೇಯರ್ ಜಗದೀಶ್ ಹಾಗೂ ಪತ್ನಿ ಶಿಕ್ಷಕಿ ಸುಜಾತ ಬೆಳಿಗ್ಗೆ ಕೆಲಸಕ್ಕೆಂದು ಹೋಗುವಾಗ ಮನೆಗೆ ಬೀಗ ಹಾಕಿಕೊಂಡು ತೆರಳಿದ್ದರು. ಕರ್ತವ್ಯ ಮುಗಿಸಿ ಸಂಜೆ ವೇಳೆ ಮನೆಗೆ ಬಂದಾಗ ಮನೆಯ ಬಾಗಿಲಿನ ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ.
ಮನೆಯಲ್ಲಿದ್ದ 22 ಜೊತೆ ಓಲೆಗಳು, 5 ಸರಗಳು, 8 ಉಂಗುರಗಳು ಸೇರಿದಂತೆ 3.50 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಬಡಾವಣೆಯ ನಾಗರಿಕರಲ್ಲಿ ಭಯ ಆವರಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ತಿಳಿದು ಮಾಡಿರುವ ಈ ಕೃತ್ಯ ಚಿನ್ನಾಭರಣ ಹಣ ಇರುವ ಬಗ್ಗೆ ಖಚಿತ ಮಾಹಿತಿ ಕಳ್ಳರಿಗೆ ಹೇಗೆ ತಿಳಿದಿದೆ ಎಂಬ ವಿಚಾರ ಸಾರ್ವಜನಿಕರಲ್ಲಿ ಚರ್ಚೆ ನಡೆದಿದೆ. ಪೊಲೀಸರು ಚುರುಕಿನ ತನಿಖೆ ನಡೆಸಬೇಕಿದೆ. ಹಾಡಹಗಲೇ ಇಂತಹ ಘಟನೆ ನಡೆದರೆ ಪೊಲೀಸರ ಮೇಲಿನ ನಂಬಿಕೆ ಸಾರ್ವಜನಿಕರಲ್ಲಿ ಇಲ್ಲವಾಗುತ್ತದೆ ಎಂದು ನಾಗರೀಕರು ಚರ್ಚೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಸಮುದ್ರ ಮೀನುಗಾರಿಕೆ ಪ್ರಾರಂಭ: 2 ತಿಂಗಳ ಬಳಿಕ ಕಡಲಿಗಿಳಿದ ಬೋಟುಗಳು
ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್, ಡಿವೈಎಸ್ಪಿ ಶೇಖರ್, ಸಿಪಿಐ ರಾಘವೇಂದ್ರ ಹಾಗೂ ಪಿಎಸ್ಐ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿ ಖದೀಮರ ಸೆರೆಗೆ ಬಲೆ ಬೀಸಿದ್ದಾರೆ.