ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ, ಈ ಯುಗದ ಮಹಾನ್ ಮಾರ್ಕ್ಸ್ವಾದಿ ಚಿಂತಕರು ಹಾಗೂ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಶಿವದಾಸ ಘೋಷ್ ರವರ 49ನೇ ಸ್ಮರಣ ವಾರ್ಷಿಕೋತ್ಸವ ಅಂಗವಾಗಿ ಮಂಗಳವಾರ ಕಲಬುರಗಿ ನಗರದ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಧ್ವಜಾರೋಹಣ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಎಸ್ಯುಸಿಐ(ಕಮ್ಯುನಿಸ್ಟ್) ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ವಿ ಎನ್ ರಾಜಶೇಖರ ಮಾತನಾಡಿ, “ಶಿವದಾನ ಘೋಷ್ ರವರು ಎಳೆಯ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜೀರಹಿತ ಪಂಥದ ಹೋರಾಟಗಾರರಾಗಿದ್ದರು. ಅವರು ಜೈಲಿನಲ್ಲಿದ್ದಾಗಲೇ ನಮಗೆ ದೊರಕುವ ಈ ರಾಜಕೀಯ ಸ್ವಾತಂತ್ರ್ಯವು ಕೇವಲ ಈ ದೇಶದ ಉಳ್ಳವರಿಗೆ ದೊರಕುತ್ತದೆ. ಆದರೆ ಈ ದೇಶದ ಸುವತ್ತನ್ನು ತಮ್ಮ ಬೆವರು-ರಕ್ತ ಸುರಿಸಿ ಸೃಷ್ಟಿಸುವ ಕಾರ್ಮಿಕರು-ರೈತರು ಹಾಗೂ ದುಡಿಯುವ ಜನರಿಗಲ್ಲ ಎಂಬುದನ್ನು ಮನಗಂಡರು, ಹಾಗಾಗಿಯೇ ಅವರು ಸಮ ಸಮಾಜವನ್ನು ಖಾತ್ರಿಪಡಿಸುವಂತಹ ವೈಚಾರಿಕತೆ ರಾಜಕೀಯ ದೃಷ್ಟಿಕೋನದ ಹುಡುಕಾಟದಲ್ಲಿ ಅವರು ಮಾರ್ಕ್ಸ್ವಾದ-ಲೆನಿನ್ ವಾದವೇ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಒದಗಿಸುವ ಅಸ್ತ್ರವೆಂದು ಅರಿತರು. ಅವರು ಈ ಸಿದ್ಧಾಂತವನ್ನು ಭಾರತದ ನೆಲಕ್ಕೆ ಬೇಕಾಗುವ ರೀತಿಯಲ್ಲಿ ಅದನ್ನು ಸಂಪದ್ಭರಿತಗೊಳಿಸಿದರು” ಎಂದರು.
“ದೇಶದ ದುಡಿಯುವ ವರ್ಗದ ಶೋಷಣೆಯನ್ನು ಕೊನೆಗಾಣಿಸಲು ಹಾಗೂ ಉನ್ನತ ವೈಚಾರಿಕತೆ ಹಾಗೂ ಸಾಂಸ್ಕೃತಿಕ ಚಳುವಳಿಗೆ ಶಿವದಾಸ ಘೋಷ್ ರವರ ಚಿಂತನೆಗಳು ನಮಗೆ ದಾರಿದೀಪವಾಗಿವೆ. ಈ ಮೂಲಕ ಮಾರ್ಕ್ಸ್ವಾದಕ್ಕೆ ಅವರು ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದರು. ಇದರ ಜೊತೆಗೆ ಬದಲಾದ ಕಾಲಘಟ್ಟಕ್ಕೆ ಬೇಕಾದ ಉನ್ನತ ಸಂಸ್ಕೃತಿ ನೀತಿ-ನೈತಿಕತೆಯ ಅಡಿಪಾಯವನ್ನು ಹಾಕಿಕೊಟ್ಟರು. ಅವರು ಮಾರ್ಕ್ಸ್ ವಾದ ಮಾತ್ರವೇ ಶೋಷಣೆಯನ್ನು ಕೊನೆಗಾಣಿಸುವ ಏಕೈಕ ಸಿದ್ಧಾಂತವೆಂದು ಘೋಷಿಸುತ್ತಾ ಕೆಲವೇ ಕೆಲವು ಆತ್ಮೀಯ ಸಂಗಾತಿಗಳೊಂದಿಗೆ ಈ ದೇಶದ ನೈಜ ಕಮ್ಯುನಿಸ್ಟ್ ಪಕ್ಷವಾದ ಎಸ್ಯುಸಿಐ ಕಮ್ಯುನಿಸ್ಟ್ ಅನ್ನು ಸಂಸ್ಥಾಪಿಸಿದರು. ಇಂದು ನಮ್ಮ ಪಕ್ಷವು ಜನತೆಯ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೋರಾಟದ ಮುಂಚೂಣಿಯಲ್ಲಿದೆ” ಎಂದು ಹೇಳಿದರು.
“ಶಿವದಾಸ ಘೋಷ್ ರವರ ಸ್ಮರಣ ದಿನದಂದು ನಾವೆಲ್ಲರೂ ಮತ್ತೊಮ್ಮೆ ಸಮಸಮಾಜವನ್ನು ನಿರ್ಮಿಸಲು ಸಂಕಲ್ಪ ತೊಡಬೇಕೆಂದು” ಕರೆ ನೀಡಿದರು.
ಈ ಸಂದರ್ಭದಲ್ಲಿ ಎನ್ಯುಸಿಐ ಕಮ್ಯುನಿಸ್ಟ್ ಪಕ್ಷದ ಕಲಬುರಗಿ ಜಿಲ್ಲಾ ಮುಖಂಡರಾದ ವಿ ನಾಗಮ್ಮಾಳ್, ಎಸ್ ಎಮ್ ಶರ್ಮ, ಮಹೇಶ ನಾಡಗೌಡ, ಡಾ. ಸೀಮಾ ದೇಶಪಾಂಡೆ, ಈಶ್ವರ, ರಾಧಾ, ತುಳಜಾರಾಮ, ಲಲಿತಾ ಬಿಜ್ಜರಗಿ, ಪುಟ್ಟರಾಜ ಲಿಂಗಶೆಟ್ಟಿ, ವೆಂಕಟೇಶ ದೇವದುರ್ಗಾ, ಗೋವಿಂದ ಯಾಳವಾರ ಮುಂತಾದ ಕಾರ್ಯಕರ್ತರು ಇದ್ದರು.