“ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತು ಹಾಕಿರುವುದನ್ನು ನಾವು ನೋಡಿದ್ದೇವೆ, ನಾವು ಭಯದಲ್ಲಿ ಬದುಕುತ್ತಿದ್ದೇವೆ” ಎಂದು ಮತ್ತೊಂದು ದೂರು ದಾಖಲಾಗಿದೆ. ನೂರಾರು ಶವಗಳನ್ನು ಹೂತು ಹಾಕಿರುವ ಆರೋಪದ ಮೇಲೆ ದಾಖಲಾಗಿರುವ ಮೂರನೇ ದೂರು ಇದಾಗಿದೆ.
ಬೆಳ್ತಂಗಡಿಯಲ್ಲಿರುವ ಎಸ್.ಐ.ಟಿ. ಕಚೇರಿಗೆ ನೀಡಿರುವ ದೂರಿನ ಪ್ರತಿ ಈ ದಿನಕ್ಕೆ ಲಭ್ಯವಾಗಿದೆ.
ಧರ್ಮಸ್ಥಳ ಗ್ರಾಮದ ಸಾಕ್ಷಿದಾರರು (ದೂರುದಾರರು) ದೂರು ನೀಡುವ ವೇಳೆ ಇದ್ದರೆಂದು ತಿಳಿದುಬಂದಿದೆ.
ದೂರು ಸ್ವೀಕರಿಸಿದ ಎಸ್.ಐ.ಟಿ. “ತಾವು ನೀಡಿದ ಅರ್ಜಿಯನ್ನು ಸ್ವೀಕರಿಸಿ, ಪರಿಶೀಲಿಸಿರುತ್ತೇವೆ. ಯಾವುದೇ ಅಪರಾಧ ಕೃತ್ಯದ ಕುರಿತು ಮಾಹಿತಿಯನ್ನು/ದೂರನ್ನು ಸ್ಥಳೀಯ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮುಂದಿನ ಕ್ರಮ ಜರುಗಿಸುವ ಕುರಿತು ಸಲ್ಲಿಸುವುದು” ಎಂದು ಹಿಂಬರಹ ನೀಡಿ ಕಳುಹಿಸಿದೆ.
ದೂರಿನಲ್ಲಿ ಏನಿದೆ?
“ಧರ್ಮಸ್ಥಳದ ಗ್ರಾಮಸ್ಥರು ಮತ್ತು ಧರ್ಮಸ್ಥಳಕ್ಕೆ ಹೊಂದಿಕೊಂಡ ಪ್ರದೇಶದ ಗ್ರಾಮಸ್ಥರಾದ ನಾವು ನಿವೇದಿಸಿ ಕೊಳ್ಳುವುದೇನೆಂದರೆ, ನಾವು ಇಲ್ಲಿಯವರೆಗೆ ಭಯದಲ್ಲಿಯೇ ಬದುಕಿರುತ್ತೇವೆ. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳ ನಿಷ್ಪಕ್ಷಪಾತ ತನಿಖೆಗಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಸ್ಥಾಪಿಸಲಾದ ವಿಶೇಷ ತನಿಖಾದಳವು ನಡೆಸುತ್ತಿರುವ ಕಾರ್ಯಾಚರಣೆಯು ನಮಗೆ ಭಯದಿಂದ ಹೊರಬರಲು ನೆರವಾಗುತ್ತಿದೆ” ಎಂದು ಗ್ರಾಮಸ್ಥರು ದೂರಿನಲ್ಲಿ ವಿವರಿಸಿದ್ದಾರೆ.
ದೃಶ್ಯ ಮಾಧ್ಯಮದಲ್ಲಿ ತೋರಿಸುತ್ತಿರುವ ದೂರುದಾರ ವ್ಯಕ್ತಿಯನ್ನು ಗ್ರಾಮಸ್ಥರಾದ ನಾವು ಗುರುತಿಸಿರುತ್ತೇವೆ. ಆತ ರಹಸ್ಯವಾಗಿ ಜನರಿಗೆ ಕಾಣದಂತೆ ಧರ್ಮಸ್ಥಳ ಗ್ರಾಮದ ವಿವಿಧೆಡೆ ಶವಗಳನ್ನು ಕೊಂಡೊಯ್ದು ಹೂತು ಹಾಕಿರುವುದನ್ನು ನಾವು ವಿವಿಧ ಸ್ಥಳಗಳಲ್ಲಿ ನೋಡಿರುತ್ತೇವೆ” ಎಂದು ತಿಳಿಸಿದ್ದಾರೆ.
“ಆತ ರಹಸ್ಯವಾಗಿ ಹೂತುಹಾಕಿರುವುದಾಗಿ ಭಾವಿಸಿದ್ದರೂ, ಗ್ರಾಮಗಳಲ್ಲಿ ಇಂತಹ ವಿಷಯಗಳು ರಹಸ್ಯವಾಗಿ ಉಳಿಯುವುದಿಲ್ಲವೆಂಬುದು ತಮಗೆ ತಿಳಿದಿರುತ್ತದೆ. ಜನರ ರಕ್ಷಣೆಗೆಂದು ಮಾನ್ಯಮುಖ್ಯಮಂತ್ರಿಗಳು ಸ್ಥಾಪಿಸಿರುವ ಈ ವಿಶೇಷ ತನಿಖಾದಳಕ್ಕೆ ನಾವು ಸಹಕಾರ ನೀಡಲೇಬೇಕು ಎಂದು ತೀರ್ಮಾನಿಸಿರುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿ ‘ಭೂ ಹಗರಣಕ್ಕೂ ಸಾವುಗಳಿಗೂ ಸಂಬಂಧ ಇದೆ’- ಎಡಪಂಥೀಯರ ನಿಯೋಗದ ಮುಂದೆ ಧರ್ಮಸ್ಥಳ ಜನರ ಅಹವಾಲು
ಮುಂದುವರಿದು, “ದೂರುದಾರನು ತೋರಿಸುತ್ತಿರುವ ಸ್ಥಳಗಳಲ್ಲಿ ಮೃತದೇಹಗಳ ಕಳೇಬರಗಳನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ನಮ್ಮನ್ನೂ ಒಳಪಡಿಸಲು ಕೋರುತ್ತೇವೆ. ಪ್ರತ್ಯೇಕವಾಗಿ ಆತನು ಹೂತು ಹಾಕುತ್ತಿದ್ದ ಸ್ಥಳಗಳನ್ನು ನಾವು ಎಲ್ಲೆಲ್ಲಿ ನೋಡಿದ್ದೇವೆ ಎಂದು ಸ್ವತಂತ್ರವಾಗಿ ತೋರಿಸುವ ಅವಕಾಶವನ್ನೂ ಕೋರುತ್ತೇವೆ” ಎಂದು ಮನವಿ ಮಾಡಿಕೊಂಡಿದ್ದಾರೆ

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.