ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆಗೆ ಸಂಬಂಧಿಸಿ ವರದಿಗೆ ತೆರಳಿದ್ದ ನಾಲ್ವರು ವರದಿಗಾರರನ್ನು ಗೂಂಡಾಗಳು ಥಳಿಸಿದ ಘಟನೆಗೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಖಂಡನಾ ಸಭೆ ನಡೆಯಿತು. ಸ್ವತಂತ್ರ ಮಾಧ್ಯಮ ಪ್ರತಿನಿಧಿಗಳು, ಪ್ರಗತಿಪರರು, ಸಾಹಿತಿಗಳು, ನ್ಯಾಯವಾದಿಗಳು ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಹಿರಿಯ ವಕೀಲರಾದ ಬಾಲನ್ ಮಾತನಾಡಿ, ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿದ ಪ್ರಕರಣದಲ್ಲಿ ದೂರುದಾರ ಭೀಮಾ ಸ್ವಯಂ ಹೇಳಿಕೆ ನೀಡಿದ್ದಾನೆ. ತನಿಖೆ ನಡೆಸುತ್ತಿರುವ ಎಸ್ಐಟಿ ಅವರಿಗೆ ʼಎ ಬಿ ಸಿ ಡಿʼ ತಪ್ಪಿತಸ್ಥರು ಎಂಬುದು ತಿಳಿದಿದೆ. ಅದಕ್ಕಾಗಿ ಐವತ್ತು ಲಕ್ಷ ರೂಪಾಯಿ ಖರ್ಚು ಮಾಡಿ ಸುದ್ದಿ ಪ್ರಸಾರ ಮಾಡದಂತೆ ಗ್ಯಾಗ್ ಆರ್ಡರ್ ತಂದಿದ್ರು. ಈಗ ಯುಟ್ಯೂಬರ್ಸ್, ಹೋರಾಟಗಾರರ ಮೇಲೆ ದಾಳಿ ಮಾಡುತ್ತಿದ್ದಾರೆ. ಕಪ್ಪು ಬೆಕ್ಕುಗಳು ಕತ್ತಲಿನಿಂದ ಹೊರಗೆ ಬಂದಿವೆ. ಕಾನೂನು ಅಡಿಯಲ್ಲಿ ಆರೋಪಿಗಳಿಗೆ ಯಾವ ಕ್ರಮ ಆಗಬೇಕು ಅದು ಆಗಲೇ ಬೇಕು. ಕೆಲವರು ಮಾಧ್ಯಮಗಳಲ್ಲಿ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರಿಗೆ ಬುದ್ದಿ ಇದೆಯೋ, ಅವರು ಮನುಷ್ಯರೋ ಅಲ್ವೊ ಗೊತ್ತಿಲ್ಲ. ಸೌಜನ್ಯ ಅಂದ್ರೆ ಫಯರ್, ಫಯರ್ ಜಾಸ್ತಿಯಾದ ಕಾರಣ ಗೂಂಡಾಗಳು ಹೊರಗೆ ಬಂದು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಚಿಂತಕ ಶಿವಸುಂದರ್ ಮಾತನಾಡಿ, ಎಲ್ಲ ಪ್ರಕರಣಗಳಲ್ಲಿ ಒಂದು ಪ್ಯಾಟರ್ನ್ ಇದೆ. ಸೌಜನ್ಯ ಪ್ರಕರಣ ಇನ್ನು ಬಯಲಿಗೆಳೆಯಲು ಸಾಧ್ಯವೇ ಇಲ್ಲ ಎಂದಾಗ ಒಬ್ಬ ಅಮಾಯಕನನ್ನು ಎದುರು ತಂದು ನಿಲ್ಲಿಸಲಾಗಿತ್ತು. ಪದ್ಮಲತಾ ಪ್ರಕರಣದಲ್ಲೂ ಒಬ್ಬ ಅಮಾಯಕನನ್ನು ತಂದು ನಿಲ್ಲಿಸಿದ್ರು. ಅವರು ನಿರಪರಾಧಿ ಎಂದು ಕೋರ್ಟ್ ಹೇಳಿದೆ. ಈಗ ಹದಿನೈದು ವರ್ಷಗಳ ದಾಖಲೆಯನ್ನು ಸುಟ್ಟು ಹಾಕಿದ್ದಾರೆ ಎಂಬ ಮಾಹಿತಿ ಬಂದಿದೆ. 2012ರಲ್ಲಿ ಸೌಜನ್ಯ ಪ್ರಕರಣ ಆಗಿದೆ. 2023ರಲ್ಲಿ ಸಂತೋಷ್ ರಾವ್ ನಿರಪರಾಧಿ ಎಂದು ಸಿಬಿಐ ಕೋರ್ಟ್ ತೀರ್ಪು ಬಂದಿತ್ತು. ಇಡೀ ತನಿಖೆಯಲ್ಲಿ ಪೊಲೀಸರು ಲೋಪ ಎಸಗಿದ್ದಾರೆ, ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಹೇಳಿತ್ತು. ಆದರೆ, ತೀರ್ಪು ಬಂದ ನಂತರ ಪೊಲೀಸರು ದಾಖಲೆಗಳನ್ನು ನಾಶ ಮಾಡಿದ್ದಾರೆ. ರಾಜ್ಯಶಕ್ತಿ -ಪೀಠಶಕ್ತಿ ಒಟ್ಟು ಸೇರಿ ಸತ್ಯವನ್ನು ಮುಚ್ಚಿ ಹಾಕಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಉಮಾಪತಿ ಅವರು ಮಾತನಾಡಿ, ಕರ್ನಾಟಕದ ರಾಜಕಾರಣದ ಮೇಲೆ ಎರಡು ರಿಪಬ್ಲಿಕ್ಗಳು ಬಹಳ ಪ್ರಭಾವ ಬೀರಿವೆ. ಪಕ್ಷಬೇಧ ಇಲ್ಲದೇ ಪ್ರಭಾವ ಬೀರಿವೆ. ಇವರ ಛತ್ರಛಾಯೆ ಅವರ ಮೇಲೆ, ಅವರ ಛತ್ರಛಾಯೆ ಇವರ ಮೇಲಿದೆ. ʼಬಳ್ಳಾರಿ ರಿಪಬ್ಲಿಕ್ʼ ವಿರುದ್ಧ ನಡೆದ ಕಾನೂನು ಹೋರಾಟ ಚಾರಿತ್ರಿಕ. ಎಸ್ ಆರ್ ಹಿರೇಮಠ್ ಅವರನ್ನು ಆ ದಿನಗಳಲ್ಲಿ ದೆಹಲಿಯಲ್ಲಿ ಕಂಡಿದ್ದೇನೆ. ಆಗೆಲ್ಲ ನನಗೆ ಅನ್ನಿಸ್ತಿತ್ತು, ಹಿರೇಮಠ್ ಮೇಲೆ ಯಾಕೆ ದಾಳಿ ನಡೆದಿಲ್ಲ ಅಂತ. ಯಾಕಂದ್ರೆ ಅವರು ಸುಪ್ರೀಂ ಕೋರ್ಟ್ ಬಳಿಯೇ ಇದ್ದ ಗಾಂಧಿ ಪೀಸ್ ಫೌಂಡೇಷನ್ನಲ್ಲಿ ಇರುತ್ತಿದ್ದರು. ಅಲ್ಲಿಂದ ಸುಪ್ರೀಂ ಕೋರ್ಟ್ಗೆ ಒಬ್ಬರೇ ಹೋಗುತ್ತಿದ್ದರು. ಆದರೆ ಅವರ ಮೇಲೆ ದಾಳಿ ಮಾಡುವ ದುಸ್ಸಾಹಸ ಮಾಡಿಲ್ಲ. ಆದರೆ ನಿನ್ನೆ ನಡೆದಿರುವ ಘಟನೆ ಇನ್ನೊಂದು ಸ್ವರೂಪದ ರಿಪಬ್ಲಿಕ್. ಎರಡರ ದುಷ್ಟತನ ಒಂದೇ. ಧರ್ಮ ಮತ್ತು ರಾಜಕಾರಣದ ಅಪವಿತ್ರ ಮೈತ್ರಿ ಜನಪರ ರಾಜಕಾರಣ, ಜನಪರ ಹೋರಾಟ ಎರಡನ್ನೂ ಬಿಡುವುದಿಲ್ಲ. ಇದು ದಶಕಗಳಿಂದ ನಡೆಯುತ್ತಲೇ ಬಂದಿದೆ ಎಂದರು.
ಮೈಸೂರು ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ, ಮಾತನಾಡಿ ಧರ್ಮಸ್ಥಳದ ಪ್ರಕರಣದಲ್ಲಿ ಹೋರಾಟ ನಡೆಸಲು ರಾಜ್ಯಮಟ್ಟದಲ್ಲಿ ಸಂಘಟನೆಯೊಂದನ್ನು ಕಟ್ಟುವ ಅಗತ್ಯವಿದೆ. ಹೋರಾಟಗಾರರು, ಯೂಟ್ಯೂಬರ್ಗಳು ಕೂಡ ತಮ್ಮ ಹೇಳಿಕೆ, ಮಾತುಗಳ ವಿಚಾರದಲ್ಲಿ ಘನತೆಯನ್ನು ಕಾಪಾಡಬೇಕಿದೆ ಎಂದು ಸಲಹೆ ನೀಡಿದರು.
ಜಾಗೃತ ಕರ್ನಾಟಕದ ಬಿ ಸಿ ಬಸವರಾಜು ಮಾತನಾಡಿ, ಕೆಲವು ಮುಖ್ಯವಾಹಿನಿ ಮಾಧ್ಯಮಗಳು ಅನ್ಯಾಯವನ್ನು ಖಂಡಿಸದೇ ಬಲಾಢ್ಯರ ಪರವಹಿಸಿ ನಡೆದುಕೊಳ್ಳುತ್ತಿರುವ ರೀತಿಯನ್ನು ಖಂಡಿಸಿದರು. ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ, ಚಿಂತಕ ಬರಹಗಾರ ಮುರಳಿಕೃಷ್ಣ, ಲೇಖಕಿ ರೇಣುಕಾ ನಿಡಗುಂದಿ, ವಿದ್ಯಾರ್ಥಿನಿ ಅರ್ಪಿತ, ಲಿಂಗತ್ವ ಅಲ್ಪಸಂಖ್ಯಾತ ಮಲ್ಲು ಕುಂಬಾರ್, ಪತ್ರಕರ್ತ ರಾಮಕೃಷ್ಣ ಮುಂತಾದವರು ಧರ್ಮಸ್ಥಳದ ಘಟನೆಯನ್ನು ಖಂಡಿಸಿದರು.
ಪತ್ರಕರ್ತ ನವೀನ್ ಸೂರಿಂಜೆ, ಕನ್ನಡಪರ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್, ವಕೀಲರು, ಪತ್ರಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.