ಶಿವಮೊಗ್ಗ ಮಾರಾಟಕ್ಕಿರುವ ಕಾರಿನ ಟ್ರಯಲ್ ನೋಡಿಕೊಂಡು ಬರುವುದಾಗಿ ತಿಳಿಸಿ ಕೊಂಡೊಯ್ದ ವ್ಯಕ್ತಿ ಮರಳಿ ಬಾರದೆ ವಂಚಿಸಿದ್ದಾನೆ. ಮಾಲೀಕರು ಕಾರಿಗಾಗಿ ಹುಡುಕಾಟ ನಡೆಸಿದಾಗ ಗೋವಾದಲ್ಲಿ ಅಡವಿಟ್ಟಿರುವುದಾಗಿ ತಿಳಿದು ಬಂದಿದೆ.
ಆರ್ಎಂಎಲ್ ನಗರದ ವ್ಯಕ್ತಿಯೊಬ್ಬರು ತಮ್ಮ ಕಾರು ಮಾರಾಟಕ್ಕಿಟ್ಟಿದ್ದರು. ಚಿತ್ರುದರ್ಗದ ಈಶ್ವರಪ್ಪ ಎಂಬಾತ ಕಾರು ಖರೀದಿಸುವವನಂತೆ ಬಂದು ಪರಿಶೀಲಿಸಿದ್ದ.
ಟ್ರಯಲ್ ನೋಡಿ ಬರುವುದಾಗಿ ಕಾರನ್ನು ಕೊಂಡೊಯ್ದಿದ್ದ. ಬಹು ಹೊತ್ತಿನ ತನಕ ಆತ ಹಿಂತಿರುಗದ ಹಿನ್ನೆಲೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಆರೋಪಿಸಲಾಗಿದೆ.
ಕಾರು ಮಾಲೀಕರ ಸಂಬಂಧಿಗೆ ವಾಟ್ಸಪ್ನಲ್ಲಿ ಮೆಸೇಜ್ ಮಾಡಿದ್ದ ಈಶ್ವರಪ್ಪ, ಮತ್ತೊಂದು ಮೊಬೈಲ್ ನಂಬರ್ ಕಳುಹಿಸಿದ್ದ. ಆ ನಂಬರ್ಗೆ ಕಾರು ಮಾಲೀಕರು ಕರೆ ಮಾಡಿದಾಗ, ಕಾರು ಗೋವಾದಲ್ಲಿದೆ. ₹1.50 ಲಕ್ಷಕ್ಕೆ ಅಡವಿಡಲಾಗಿದೆ. ಹಣ ನೀಡಿ ಕಾರು ಬಿಡಿಸಿಕೊಂಡು ಹೋಗುವಂತೆ ತಿಳಿಸಿದರು ಎಂದು ಆರೋಪಿಸಲಾಗಿದೆ.
ಕೃತ್ಯ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.