ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಹಾನಿಕರ ವರದಿಗಳ ಪ್ರಕಟಣೆ ತಡೆಯುವಂತೆ ಧರ್ಮಸ್ಥಳ ದೇವಾಲಯದ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ ಸಲ್ಲಿಸಿದ್ದ ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕರ್ನಾಟಕ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಮಾನಹಾನಿಕರ ವರದಿ ಪ್ರಸಾರಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ದ್ವಿಸದಸ್ಯ ಪೀಠವು ವಿಚಾರಣೆ ನಡೆಸಿತು. ಆದಾಗ್ಯೂ ಈ ವಿಷಯದಲ್ಲಿ ಮಾಧ್ಯಮಗಳ ನಿರ್ಬಂಧದ ಅಗತ್ಯವಿದೆಯೇ ಎಂಬುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ದೇವಾಲಯದ ಆಡಳಿತ ಮಂಡಳಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ಮುಕುಲ್ ರೊಹಟಗಿ, ದಿನೇ ದಿನೇ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಾನಹಾನಿಕರ ವರದಿಗಳನ್ನ ಪ್ರಕಟಿಸುತ್ತಿವೆ ಎಂದರು. ಇದೇ ವೇಳೆ ಮಾನಹಾನಿಕರ ಎಂದು ಹೇಳಲಾದ ಇಂಟರ್ನೆಟ್ ಮೀಮ್ಸ್ಗಳ ಪೋಸ್ಟ್ಗಳ ಪ್ರತಿಯನ್ನು ಕೋರ್ಟ್ಗೆ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋರ್ಟ್, ಇಂತಹ ಮಾನಹಾನಿಕರ ಪೋಸ್ಟ್ಗಳಿಗೆ ದೇವಾಲಯವು ಯಾವಾಗಲೂ ಪರಿಹಾರ ಪಡೆಯಬಹುದು ಎಂದು ಹೇಳಿತು. ಆದಾಗ್ಯೂ, ಮಾಧ್ಯಮಗಳ ವಿರುದ್ಧ ನಿಗ್ರಹ ಹೇರಬೇಕೆ ಅಂತ ಪ್ರಶ್ನಿಸಿತು. ವಿರಳ ಮತ್ತು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಗ್ಯಾಗ್ ಆದೇಶಗಳನ್ನ ಹೊರಡಿಸಲಾಗುತ್ತೆ. ಇಂತಹ ಆದೇಶ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತವೆ. ನಾವು ತಡೆಯಾಜ್ಞೆ ನೀಡಿದರೆ ಅನಾಮಿಕ ವ್ಯಕ್ತಿಯ ಹೇಳಿಕೆಯನ್ನು ಸಹ ವರದಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದರು. ಈ ವಿಷಯವನ್ನು ರಾಜ್ಯದ ವಿಚಾರಣಾ ನ್ಯಾಯಾಲಯವೇ ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿ ಮೋದಿಗೆ ಅದಾನಿ-ಅಂಬಾನಿ ದೋಸ್ತಿ ತಂದ ದುರ್ಗತಿ
ಕರ್ನಾಟಕದ ವಿಚಾರಣಾ ನ್ಯಾಯಾಲಯದ ಮುಂದೆ ಅರ್ಜಿದಾರರು ಮತ್ತೆ ವಾದ ಮಂಡಿಸಲಿ. ನಾವು ಸ್ವತಂತ್ರ ದೇಶದಲ್ಲಿ ವಾಸಿಸುತ್ತಿದ್ದೇವೆ. ವಿಚಾರಣಾ ನ್ಯಾಯಾಲಯವು ಈ ವಿಷಯದ ಬಗ್ಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು. ನಂತರ ಮುಕುಲ್ ರೊಹಟಗಿ ನ್ಯಾಯಾಲಯವನ್ನು ಮಧ್ಯಂತರ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ವಿಚಾರಣಾ ನ್ಯಾಯಾಲಯವು ಮುಂದಿನ ವಿಚಾರಣೆಯ ದಿನದಿಂದ ಎರಡು ವಾರಗಳಲ್ಲಿ ಅರ್ಜಿಯನ್ನು ನಿರ್ಧರಿಸುವಂತೆ ನಾವು ನಿರ್ದೇಶಿಸುತ್ತೇವೆ. ಹೈಕೋರ್ಟ್ ಮಾಡುವ ಯಾವುದೇ ಅವಲೋಕನಗಳು ಹೊಸದಾಗಿ ತಡೆಯಾಜ್ಞೆ ಅರ್ಜಿಯನ್ನು ಪರಿಗಣಿಸುವಾಗ ವಿಚಾರಣಾ ನ್ಯಾಯಾಲಯದ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಪೀಠ ಅಂತಿಮವಾಗಿ ತಮ್ಮ ಆದೇಶದಲ್ಲಿ ತಿಳಿಸಿತು.
