ಚಿಕ್ಕಮಗಳೂರು ಜಿಲ್ಲೆಯ ಜಯಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಸೀಮಿತ ಅನುದಾನವನ್ನು ಬಳಸಿಕೊಂಡು ರಸ್ತೆ, ಕುಡಿಯುವ ನೀರು ಚರಂಡಿ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿಯಾಗಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಕರುಣಾಕರ ಹೇಳಿದರು.
ಜಯಪುರ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, “ಗ್ರಾಮ ಪಂಚಾಯತ್ ವತಿಯಿಂದ ಸದಸ್ಯರ ಸಹಕಾರ ಪಡೆದು ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಹಲವು ವರ್ಷಗಳಿಂದ ಶಾಸಕರು ಸೇರಿದಂತೆ ಹಲವರಿಗೆ ಮನವಿ ಮಾಡಿದ್ದರೂ ಇಲ್ಲಿನ ವಿನಾಯಕ ನಗರದ ರಸ್ತೆ ನಿರ್ಮಾಣಕ್ಕೆ ಯಾರು ಮನಸ್ಸು ಮಾಡಿರಲಿಲ್ಲ. ಆದರೆ, ಈಗ ಸುಮಾರು 9 ಲಕ್ಷ ಅನುದಾನದಲ್ಲಿ ಇಲ್ಲಿ ಕಾಂಕ್ರೀಟ್ ಹಾಕಲಾಗಿದೆ. ಜತೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 10 ಎಕರೆ ನಿವೇಶನ ಮಂಜೂರಾಗಿದ್ದು, ಎಲ್ಲಾ ಅರ್ಹ ನಿವೇಶನ ರಹಿತರಿಗೆ ನಿವೇಶನ ನೀಡಲಿದ್ದೇವೆ” ಎಂದರು.
ಪಿಡಿಒ ಶಿವಕುಮಾರ್ ಮಾತನಾಡಿ, “2022-23ರಲ್ಲಿದ್ದ 13.5 ಲಕ್ಷ ರೂಗಳ ಆದಾಯದ ಬೇಡಿಕೆಯನ್ನು 2024-25 ಸಾಲಿಗೆ ಸುಮಾರು 50 ಲಕ್ಷ ರೂಗಳಿಗೆ ಏರಿಕೆ ಮಾಡಿದ್ದು, ಸರ್ಕಾರಿ ನಿಯಮದಂತೆ ತೆರಿಗೆ ಪರಿಷ್ಕರಣೆ ಹಾಗೂ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿರುವ ಪರಿಣಾಮ ಗ್ರಾಮ ಪಂಚಾಯತ್ ಆದಾಯ ಏರಿಕೆಯಾಗಿದೆ. ಇದರಿಂದಾಗಿ ಈ ವರ್ಷ ಗ್ರಾಪಂ ಸ್ವಂತ ಹಣಕಾಸಿನ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿದೆ. ಎಸ್ ಸಿ/ ಎಸ್ ಟಿ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಹಣ ಮೀಸಲಿರಿಸಿದ್ದು, ಶಿಕ್ಷಣ, ವೈದ್ಯಕೀಯ ನೆರವು, ಹಳೆಮನೆ ರಿಪೇರಿಗೆ 15 ಲಕ್ಷ ಹಣ ಮೀಸಲು ಇರಿಸಿದ್ದೇವೆ. ಆಗಸ್ಟ್ 15ರಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 10 ಮತ್ತು 12ನನೇ ತರಗತಿಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲಾ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಾತಿ ಧರ್ಮದ ಮಾನದಂಡವನ್ನು ಪರಿಗಣಿಸದೆ ಪ್ರತಿಭಾ ಪುರಸ್ಕಾರ ಮಾಡುವ ತೀರ್ಮಾನವನ್ನು ಮಾಡಲಾಗಿದೆ. ನಗರದಲ್ಲಿ ಪ್ರತಿದಿನ ಒಣ ಕಸದ ಸಂಗ್ರಹ ಮತ್ತು ವಿಲೇವಾರಿ ಮಾಡಲಾಗುತ್ತಿದ್ದು, ತಿಂಗಳಿಗೆ 80 ಸಾವಿರ ವೆಚ್ಚ ಮಾಡಲಾಗುತ್ತಿದೆ. ಕಸ ವಿಲೇವಾರಿ ಘಟಕ ಜಾಗದ ವಿವಾದ ನ್ಯಾಯಾಲಯದಲ್ಲಿರುವ ಕಾರಣ, ಹಸಿಕಸ ವಿಲೇವಾರಿಗೆ ಸಮಸ್ಯೆಯಾಗಿದ್ದು, ಅದಕ್ಕಾಗಿ ಖಾಸಗಿ ಜಾಗವನ್ನು ಪಡೆದು ಕಸವಿಲೇವಾರಿಗೆ ಕ್ರಮ ವಹಿಸಲಾಗುತ್ತದೆ. ಗ್ರಾಪಂ ವ್ಯಾಪ್ತಿಯ 800 ಮನೆಗಳಿಗೆ ಕುಡಿಯುವ ನೀರು ನೀಡುವ ಸಲುವಾಗಿ ಸಿಬ್ಬಂದಿಗಳು ಮತ್ತು ವಿದ್ಯುತ್ ಬಿಲ್ ಗಾಗಿ ಸುಮಾರು 1.40 ಲಕ್ಷ ಹಣ ಖರ್ಚು ಮಾಡಲಾಗುತ್ತಿದೆ. ಬಿಡಾಡಿ ದನಗಳ ಸಮಸ್ಯೆ ಜಾಸ್ತಿಯಾಗಿರುವುದು ಗಮನಕ್ಕೆ ಬಂದಿದ್ದು, ಅವುಗಳನ್ನು ಹಿಡಿದು ಗೋಶಾಲೆಗೆ ಬಿಡುವ ವ್ಯವಸ್ಥೆ ಮಾಡುವ ತೀರ್ಮಾನವಾಗಿದ್ದು, ಅವುಗಳನ್ನು ಸಾಕುವ ಗೋಶಾಲೆಗಳ ಕೊರತೆ ಇದೆ” ಎಂದರು.
ಸದಸ್ಯ ಪ್ರವೀಣ್ ಕುಮಾರ್ ಮಾತನಾಡಿ, “ಜಯಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಜಲದುರ್ಗ ಭಾಗವೊಂದರಲ್ಲೇ ಸುಮಾರು 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಕೆಲಸವಾಗಿದೆ. ಕೆಲವರು ರಾಜಕೀಯ ದುರುದ್ದೇಶದಿಂದ ಕೆಲಸವಾಗಿಲ್ಲ ಎಂಬ ಆರೋಪ ಮಾಡುತ್ತಿದ್ದು ಇದು ಸರಿಯಲ್ಲ. ಕಾಮಗರಿಗಳ ನೈಜ ವರದಿ ಪಡೆದು ಮಾತಾಡಬೇಕು “ಎಂದರು.
ಸಾಮಾಜಿಕ ಕಾರ್ಯಕರ್ತ ಕೌಳಿ ರಾಮು ಮಾತನಾಡಿ, ಹೊಸ ಆಸ್ಪತ್ರೆಯ ಕಟ್ಟಡದ ಮುಖ್ಯ ದ್ವಾರದ ಸಮೀಪ ಶವಾಗಾರದ ಕೊಠಡಿ ಮಾಡಿದ್ದು, ಇದು ಅವೈಜ್ಞಾನಿಕ ಎಂದರು. ಸ್ಥಳಾವಕಾಶದ ಕೊರತೆಯಿಂದ ಅಲ್ಲಿ ಮಾಡಲಾಗಿದೆ ಎಂದು ವೈದ್ಯಧಿಕಾರಿ ಡಾ ಸುಧೀಂದ್ರ ತಿಳಿಸಿದರು.
ಇದನ್ನೂ ಓದಿ: ಚಿಕ್ಕಮಗಳೂರು | ಸರ್ಕಾರಿ ಜಾಗಕ್ಕೆ ಶೆಡ್ ನಿರ್ಮಾಣ; ದಲಿತ ಕಾರ್ಮಿಕರ ಹೋರಾಟಕ್ಕೆ ಅಶೋಕ್ ಬೆಂಬಲ
ಗ್ರಾಮಸ್ಥ ಕುಮಾರ್ ಮಾತನಾಡಿ, ಜಯಪುರ ಸರ್ಕಾರಿ ಶಾಲೆಯ 5 ಎಕರೆ ಜಾಗವನ್ನು ಕಬಳಿಸಲಾಗಿದೆ. ಅದನ್ನು ಶಾಲೆಗೆ ಬಿಡಿಸಿಕೊಡುವಂತೆ ಮನವಿ ಮಾಡಿದರು. ಗ್ರಾಮಸ್ಥ ಅಳಗು ಮಾತನಾಡಿ ಅಲಗೇಶ್ವರ ರಸ್ತೆಯಲ್ಲಿ ರಸ್ತೆ ಬದಿಗೆ ಕೆಲವರು ಬೇಲಿ ಮಾಡಿದ್ದು, ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಬಿಡಾಡಿ ದನಗಳು ಬೀದಿ ನಾಯಿಗಳ ಉಪಟಳ ಜಾಸ್ತಿಯಾಗಿದ್ದು ಕ್ರಮಕ್ಕೆ ಜನತೆ ಅಗ್ರಹಿಸಿದರು.
ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು, ಸಮಾಜಕಲ್ಯಾಣ, ಕೃಷಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾ ಪಂ ಉಪಾಧ್ಯಕ್ಷೆ ಜಯ ಮುರುಗೇಶ್, ಸದಸ್ಯರುಗಳಾದ ಪಣಿರಾಜ್, ಶ್ರೀನಿವಾಸ್, ಸಂಪತ್, ಪಳನಿ ನಳಿನಿ, ರಮ್ಯಾ ವೆಂಕಟೇಶ್, ಶಕುಂತಲಾ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.