ಶಿಕಾರಿಪುರ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೀಲು ಮೂಳೆ ತಜ್ಞ ವೈದ್ಯರ ಕೊರತೆಯಿಂದಾಗಿ ಸಾರ್ವಜನಿಕರು ರೋಗಿಗಳು ಸುಮಾರು ಎರಡು ವರ್ಷಗಳಿಂದ ಹೊರ ಜಿಲ್ಲೆಗಳಿಗೆ ಮತ್ತು ಶಿವಮೊಗ್ಗಕ್ಕೆ ತೆರಳಬೇಕಾದ ಪರಿಸ್ಥಿತಿ ಒದಗಿ ಬಂದಿತ್ತು.
ಈ ವಿಚಾರವಾಗಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಕೀಲು ಮೂಳೆ ತಜ್ಞ ವೈದ್ಯರ ನೇಮಕವಾಗುವಂತೆ ಒತ್ತಾಯಿಸಿ ಅನೇಕ ಬಾರಿ ಪ್ರತಿಭಟನೆ ಹಾಗೂ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಜಿಲ್ಲಾಧಿಕಾರಿಗಳಿಗೆ ಹಾಗೂ ಆರೋಗ್ಯ ಸಚಿವರು ಸೇರಿದಂತೆ ತಾಲೂಕಿನ ಜನ ಪ್ರತಿನಿಧಿಗಳ ಗಮನ ಕೂಡ ಸೆಳೆಯಲಾಗಿತ್ತು.
ಕೊನೆಗೆ ಸಂಘಟನೆ ಪತ್ರಿಕಾಗೋಷ್ಠಿ ನಡೆಸಿ ಉಪಾಸ ಸತ್ಯಾಗ್ರಹ ನಡೆಸುವ ಸಿದ್ಧತೆ ಕೈಗೊಂಡ ಬೆನ್ನಲ್ಲೇ ಶಿವಮೊಗ್ಗ ಜಿಲ್ಲಾ ಆಡಳಿತದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರ ನೂತನವಾಗಿ ಕೀಲು ಮೂಳೆ ರೋಗ ತಜ್ಞ ವೈದ್ಯರನ್ನು ನೇಮಕ ಮಾಡಿದ್ದು ಸಾರ್ವಜನಿಕರಿಗೆ ಸಂತಸವಾಗಿದೆ ಎಂದು ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ನೂತನ ವೈದ್ಯ ರಾಕೇಶ್ ರವರಿಗೆ ಸ್ವಾಗತ ಕೋರಿ ಸನ್ಮಾನಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಮಾತನಾಡಿ ಸತತ ಹೋರಾಟದ ಪ್ರತಿಫಲವಾಗಿ ಇಂದು ತಾಲೂಕಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೀಲು ಮೂಳೆ ರೋಗ ತಜ್ಞರನ್ನು ಸರ್ಕಾರ ನೇಮಿಸಿದೆ.
ಈ ನೇಮಕಾತಿಗೆ ಸಹಕರಿಸಿದ ಜಿಲ್ಲಾಧಿಕಾರಿಗಳು ಹಾಗೂ ಶಿವಮೊಗ್ಗ ಡಿಎಚ್ಒ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ತಾಲೂಕು ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿರವರು ಮಾತನಾಡಿ ತಾಲೂಕಿನ ಜನತೆ ಸೇರಿದಂತೆ ಸುತ್ತಮುತ್ತಲಿನ ತಾಲೂಕಿನ ಹಳ್ಳಿಗಳ ಆಗಮಿಸುವ ರೋಗಿಗಳಿಗೆ ವೈದ್ಯರ ಕೊರತೆಯಿಂದಾಗಿ ಅನ್ಯ ಜಿಲ್ಲೆಗಳನ್ನು ಅವಲಂಬಿಸಬೇಕಾಗಿತ್ತು, ಆದರೆ ಸಂಘಟನೆಯ ಸತತ ಎರಡು ವರ್ಷಗಳ ಹೋರಾಟದ ಪ್ರತಿಫಲವಾಗಿ ಈಗಲಾದರೂ ಸರ್ಕಾರ ಎಚ್ಚೆತ್ತು ವೈದ್ಯರ ಕೊರತೆ ನೀಗಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹಾಗೆಯೇ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯ ಅರುಣ್ ಕುಮಾರ್ ರವರಿಗೂ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಹುಲಿಗಿ ಕೃಷ್ಣ, ತಾಲೂಕು ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿ, ಇಮ್ರಾನ್, ಮತ್ತಿಕೋಟೆ ಮಾಲತೇಶ್, ತಾಲೂಕು ಗೌರವ ಅಧ್ಯಕ್ಷ ಹುಸೇನ್ ಸಾಬ್, ಆನಂದ್, ಹೋಟೆಲ್ ಉದ್ಯಮಿ ಅಕ್ಬರ್ ಆಲಿ, ಹರೀಶ್, ರಮೇಶ್, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.