ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ ಯಶವಂತರಾಯ ಗೌಡ ಪಾಟೀಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಿಗೆ ಪುರಸಭೆ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ್ ಮೂವಿ ಹೇಳಿದರು.
ಹಿಂದಿ ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೇರಿರುವುದನ್ನು ಸ್ವಾಗತಿಸಿ ಕಾಂಗ್ರೆಸ್ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂಡಿ ಇತಿಹಾಸದಲ್ಲೇ ಸುವರ್ಣ ಅಕ್ಷರಗಳಲ್ಲಿ ಬರೆದಿಡಬಹುದಾದ ಈ ದಿನ. ಶಾಸಕರ ಸತತ ಪರಿಶ್ರಮ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದಿಂದ ಇದು ಸಾಧ್ಯವಾಗಿದೆ. ಇದುವರೆಗೂ ಪಟ್ಟಣ ಎಂದು ಕರೆಸಿಕೊಳ್ಳುತ್ತಿದ್ದ ಹಿಂಡಿ ಇಂದಿನಿಂದ ನಗರವಾಗಿದೆ ಎಂದರು.
ಇಂಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಶಾಂತ್ ಕಾಳೆ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಶಾಸಕರ ಅಭಿವೃದ್ಧಿಯನ್ನು ಪ್ರಶ್ನಿಸಿರುವ ವಿರೋಧ ಪಕ್ಷದವರಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದರು.
ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಶಾಸಕರು ಎರಡು ಮೂರು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಪುರಸಭೆ ಸಾಮಾನ್ಯ ಸಭೆಗಳಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಶಾಸಕರಾದ ಯಶವಂತರಾಯ ಗೌಡ ಪಾಟೀಲ್ ಅವರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷ ಲಿಂಬಾಜಿ ರಾಥೋಡ್ ಮಾತನಾಡಿ, 2011ರ ಜನಸಂಖ್ಯೆಯಂತೆ ಪಟ್ಟಣದಲ್ಲಿ 38217 ಜನಸಂಖ್ಯೆ ಇತ್ತು. ಈಗ 59,32 ದಾಟಿದೆ. 27.38 ಚದರ ಕಿಲೋಮೀಟರ್ ಪ್ರದೇಶ ಹೊಂದಿದ್ದು, ವರಮಾನ, ಜನಸಂಖ್ಯೆ ಸೇರಿ ಹಲವು ಅಂಶಗಳನ್ನು ಪರಿಗಣಿಸಿ ಸರ್ಕಾರ ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ. ಇದಕ್ಕೆ ಪ್ರಯತ್ನಿಸಿದ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರಿಗೆ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಇದನ್ನು ಓದಿದ್ದೀರಾ? ಬೆಳಗಾವಿ | ಧರ್ಮಾಂದತೆಯ ‘ದ್ವೇಷ’ದ ವಿಷವನ್ನು ಸೋಲಿಸಿದ ಮುಸ್ಲಿಮ್ ಶಿಕ್ಷಕನ ‘ಪ್ರೀತಿ’
ಸಂಭ್ರಮಾಚರಣೆಯಲ್ಲಿ ಪುರಸಭೆ ಉಪಾಧ್ಯಕ್ಷ ಜಹಂಗೀರ್ ಸೌದಾಗಾರ, ಭೀಮಾಶಂಕರ ಮೊರಮನ, ಜಟ್ಟಪ್ಪ ರವಳಿ, ಭೀಮಣ್ಣ ಕವಲಗಿ,ಸದಾಶಿವ ಪ್ಯಾಟಿ,ಶಬ್ಬೀರ್ ಕಾಜಿ, ಅಸ್ಲಾಮ ಕಾಲೋನಿ,ಶ್ರೀಕಾಂತ ಗುಡಿಗನೂರು,ಅನಿಲ ಗೌಡ ಬಿರಾದಾರ, ಸಂತೋಷ ಪರಸನವರ,ಶ್ರೀಶೈಲ ಪೂಜಾರಿ ಸುಧೀರ್ ಕರೆಕಟ್ಟಿ, ಆಯುಬ್ ಭಾಗವಾನ, ಲಕ್ಕಪ್ಪ ಪೂಜಾರಿ, ಗಣೇಶ ಕುಂಬಾರ, ಮಹೇಶ ಕುಂಬಾರ,ಸುಭಾಷ್ ಪಾಲ್ಗೊಂಡಿದ್ದರು.
