ಅಕ್ಟೋಬರ್ 19ರಂದು ನಡೆಯಲಿರುವ ಬೆಳಗಾವಿ ಜಿಲ್ಲಾ ಸಹಕಾರಿ (ಬಿಡಿಸಿಸಿ) ಬ್ಯಾಂಕ್ ಚುನಾವಣೆಗೆ ನಾನಾಸಾಹೇಬ ಪಾಟೀಲ ಸ್ಪರ್ಧಿಸಲಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಭಾನುವಾರ ಘೋಷಿಸಿದರು.
ಬೆಳಗಾವಿ ಜಿಲ್ಲೆಯ ಕಿತ್ತೂರ ಪಟ್ಟಣದ ಚನ್ನಬಸಪ್ಪ ಕಲ್ಯಾಣ ಮಂಟಪದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, “32 ಸೊಸೈಟಿಗಳಲ್ಲಿ 18 ರಿಂದ 20 ಸೊಸೈಟಿಗಳ ಮತದಾರರು ನಮ್ಮ ಪರವಿದ್ದಾರೆ. ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ನಾನಾಸಾಹೇಬರ ಗೆಲುವು ಖಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅವರು ಮುಂದುವರೆದು, “ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ ಪ್ರತಿ ವರ್ಷ ₹5 ಕೋಟಿ ಅನುದಾನ ನೀಡಲಾಗುತ್ತಿದೆ. ಈ ವರ್ಷವೂ ಅದೇ ಪ್ರಮಾಣದ ಅನುದಾನ ನೀಡಲಾಗುವುದು” ಎಂದು ಹೇಳಿದರು.
ಶಾಸಕ ಬಾಬಾಸಾಹೇಬ ಪಾಟೀಲ, “ಸೊಸೈಟಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಒತ್ತಾಯದ ಮೇರೆಗೆ ಸಹೋದರ ನಾನಾಸಾಹೇಬರು ಸ್ಪರ್ಧಿಸುತ್ತಿದ್ದಾರೆ. 20 ಕ್ಕೂ ಹೆಚ್ಚು ಸೊಸೈಟಿ ಮತದಾರರ ಬೆಂಬಲವಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾನಾಸಾಹೇಬ ಪಾಟೀಲ, ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಶಿವನಗೌಡ ಪಾಟೀಲ, ದೇವೇಂದ್ರ ಪಾಟೀಲ ಅವರು ಮಾತನಾಡಿದರು.
ಈ ಸುದ್ದಿ ನೋಡಿದ್ದಿರಾ ? ಹೆಸರು ಕಾಳು ಬೆಳೆದ ರೈತರು ಸಂಕಷ್ಟದಲ್ಲಿ, ರೈತರ ನೆರವಿಗೆ ಸರ್ಕಾರ ಬರಬೇಕಿದೆ
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಫ್. ಜಕಾತಿ, ಶಂಕರ ಹೊಳಿ, ಶೇಕಪ್ಪ ಯರಗೊಪ್ಪ, ರಾಜೇಂದ್ರ ಇನಾಮದಾರ, ಸಾವಂತ ಕಿರಬನವರ, ಬಸವರಾಜ ಹಳೆಮನಿ, ಸುನೀಲ ಘಿವಾರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಅನಿಲ ಎಮ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.