ಕೋಲಾರ ತಾಲೂಕಿನ ನರಸಾಪುರ ಗ್ರಾಮದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಅವ್ಯವಸ್ಥೆಯಿಂದ ಗ್ರಾಮದ ಮುಖ್ಯರಸ್ತೆ ಕೆಸರುಗದ್ದೆಯಂತಾಗಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಮತ್ತು ಸಾರ್ವಜನಿಕರು ಆರೋಪಿಸಿದ್ದಾರೆ.
“ನರಸಾಪುರ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾರ್ಯದಲ್ಲಿ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ಕಾರ್ಯ ನಿರ್ವಹಣೆಯಿಂದ ತೀವ್ರ ತೊಂದರೆಯಾಗುತ್ತಿದೆ. ನಿರಂತರವಾಗಿ ಸುರಿದ ಭಾರೀ ಮಳೆಗೆ ಮುಖ್ಯ ರಸ್ತೆಗಳೆಲ್ಲ ಹದಗೆಟ್ಟಿದ್ದು, ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ರಸ್ತೆಗಳಲ್ಲಿ ವಾಹನಗಳು ಸುರಕ್ಷಿತವಾಗಿ ಓಡಾಡಲು ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ” ಎಂದು ದೂರಿದರು.
ನರಸಾಪುರ ಗ್ರಾಮದ ಮುಖಂಡ ಎನ್ ಲೊಕೇಶ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಗ್ರಾಮದ ಮುಖ್ಯರಸ್ತೆಯ ಅಗಲೀಕರಣದ ಕಾಮಗಾರಿಯ ಗುತ್ತಿಗೆ ಪಡೆದಂತಹ ಗುತ್ತಿಗೆದಾರನ ವಿಳಂಬ ಕಾಮಗಾರಿಯಿಂದ ನರಸಾಪುರ ಗ್ರಾಮದ ಒಳಗಿನ ಮುಖ್ಯ ರಸ್ತೆಯು ತೀರಾ ಕೆಸರು ಗದ್ದೆಯಂತಾಗಿದ್ದು, ವಾಹನಗಳು ಸುರಕ್ಷಿತವಾಗಿ ಸಂಚರಿಸುವುದಕ್ಕಂತೂ ತುಂಬಾ ಕಷ್ಟವಾಗಿದೆ. ಇದಕ್ಕೆ ಗುತ್ತಿಗೆದಾರನು ಅನುಸರಿಸುತ್ತಿರುವ ಮಂದಗತಿಯೇ ಕಾರಣವಾಗಿದೆ” ಎಂದರು.
“ರಸ್ತೆಯ ಅಗಲೀಕರಣದ ಕಾಮಗಾರಿಯ ಕೆಲಸದ ಮಧ್ಯೆ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣ ಎಲಕ್ಕಿಂತ ಹಳ್ಳ ಕೊಳ್ಳಗಳೇ ಜಾಸ್ತಿಯಾಗಿದ್ದು, ಮಳೆ ನೀರು ತುಂಬಿ ರಸ್ತೆಗಳು ಸಾರ್ವಜನಿಕರು ಓಡಾಡಲು ಕಷ್ಟವಾಗಿದೆ. ಕಾಮಗಾರಿಯನ್ನು ಇತ್ತೀಚೆಗೆ ಪ್ರಾರಂಭ ಮಾಡಿದ್ದು, ಕಾಮಗಾರಿ ವಿಳಂಬ ರೀತಿಯಲ್ಲಿ ಸಾಗುತ್ತಿದೆ. ಇದಕ್ಕೆ ಸಾರ್ವಜನಿಕರು ತುಂಬಾ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸುವ ಕ್ರಮವಹಿಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸರ್ಕಾರಿ ಸೌಲಭ್ಯದಿಂದ ವಂಚಿತರಾದ ಅಂಗವಿಕಲ ಸಹೋದರಿಯರಿಗೆ ಬೇಕಿದೆ ಸಹಾಯಹಸ್ತ!
ಗ್ರಾಮದ ಮುಖಂಡ ಅವಿನಾಶ್ ಮಾತನಾಡಿ, “ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾರ್ಯದಲ್ಲಿ ಬಸ್ ನಿಲ್ದಾಣವನ್ನು ನೆಲಸಮ ಮಾಡಿ ಪ್ರಯಾಣಿಕರಿಗೆ ತಂಗುದಾಣವಿಲ್ಲದೆ ಕೆಸರು ಗದ್ದೆಯಂತಾಗಿರುವ ರಸ್ತೆಯ ಮಧ್ಯೆ ನಿಂತು ಬಸ್ಗಳಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಪ್ರಯಾಣಿಕರು, ವೃದ್ಧರು ಮತ್ತು ವಿಶೇಷ ಚೇತನರಿಗೆ ಬಸ್ ನಿಲ್ದಾಣವಿಲ್ಲದೆ ಮಳೆ ಬಿಸಿಲು ಗಾಳಿ ಎನ್ನದೆ ರಸ್ತೆಯ ಮಧ್ಯೆ ನಿಲ್ಲಲು ಪ್ರಯಾಣಿಕರು ಹರಸಾಹಸ ಪಡುತ್ತಿದ್ದಾರೆ” ಎಂದು ಆರೋಪಿಸಿದರು.