ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ಅವರ ಆಪ್ತ ರಾಜೇಶ್ ಸಿಂಗ್ ಮತ್ತು ಇತರ ಮೂವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಕೋರ್ಟ್ ಆದೇಶಿಸಿದೆ.
ಸಂಸದರ-ಶಾಸಕರ ನ್ಯಾಯಾಲಯದ ವಿಶೇಷ ನ್ಯಾಯಾಧೀಶ (ಸಿವಿಲ್ ನ್ಯಾಯಾಧೀಶ, ಹಿರಿಯ ವಿಭಾಗ) ಅಪೇಕ್ಷಾ ಸಿಂಗ್ ಅವರು ಕೀರ್ತಿ ವರ್ಧನ್ ಸಿಂಗ್, ರಾಜೇಶ್ ಸಿಂಗ್, ಪಿಂಕು ಸಿಂಗ್, ಸಹದೇವ್ ಯಾದವ್ ಮತ್ತು ಕಾಂತಿ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಂಕಾಪುರ ಪೊಲೀಸ್ ಠಾಣೆಗೆ ಸೂಚಿಸಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕದಲ್ಲಿ ವಕ್ಫ್ ವಿವಾದ: ಅಂತಿಮವಾಗಿ ಗೆದ್ದಿದ್ದು ಯಾರು?
ಮಂಕಾಪುರ ಪ್ರದೇಶದ ಭಿತೌರಾ ನಿವಾಸಿ ಅಜಯ್ ಸಿಂಗ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಮಾರಾಟಗಾರರಾದ ಬಿಟ್ಟನ್ ದೇವಿ ಅವರಿಗೆ ಆಮಿಷವೊಡ್ಡಿ ಅಜಯ್ ಸಿಂಗ್ ಅವರ ಪತ್ನಿ ಮನೀಷಾ ಸಿಂಗ್ ಅವರ ಹೆಸರಿನಲ್ಲಿ ನೋಂದಾಯಿಸಲಾದ ಭೂಮಿಯನ್ನು ಮಿಥಲೇಶ್ ರಸ್ತೋಗಿ ಮತ್ತು ಕಾಂತಿ ಸಿಂಗ್ ಅವರಿಗೆ ಮಾರಾಟ ಮಾಡಿರುವುದಾಗಿ ಬಿಂಬಿಸಲಾಗಿದೆ. ಇದಕ್ಕಾಗಿ ಮೂರು ವರ್ಷಗಳ ಹಳೆಯ ಸ್ಟಾಂಪ್ ಪೇಪರ್ ಬಳಸಲಾಗಿದೆ. ಆಸ್ತಿಯನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ದೂರಿದ್ದಾರೆ.
ದೂರು ನೀಡಿದಾಗ ಪೊಲೀಸ್ ವರಿಷ್ಠಾಧಿಕಾರಿ ತನಿಖೆಗೆ ಆದೇಶಿಸಿದ್ದರು. ಆರೋಪವೂ ದೃಢಪಟ್ಟಿತ್ತು. ಎಸ್ಪಿ ನಿರ್ದೇಶನಗಳ ಆಧಾರದ ಮೇಲೆ, 2024ರಲ್ಲಿ ಪೊಲೀಸರು ಮಾರಾಟಗಾರ ಮತ್ತು ಖರೀದಿದಾರರ ವಿರುದ್ಧ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ನಂತರ ಈ ಪ್ರಕರಣವನ್ನು ಕೈಬಿಟ್ಟು ಅಂತಿಮ ವರದಿಯನ್ನು ಸಲ್ಲಿಸಿದ್ದರು ಎಂದು ದೂರಲಾಗಿದೆ.
ಅಜಯ್ ಸಿಂಗ್ ಅವರು ಪ್ರಕರಣವನ್ನು ಕೈಬಿಡುವುದನ್ನು ವಿರೋಧಿಸಿದ್ದರು. 2025ರ ಮಾರ್ಚ್ನಲ್ಲಿ ನ್ಯಾಯಾಲಯವು ಅಂತಿಮ ವರದಿಯನ್ನು ಬದಿಗಿಟ್ಟು ಹೆಚ್ಚಿನ ತನಿಖೆಗೆ ಆದೇಶಿಸಿತ್ತು. ಈ ಮಧ್ಯೆ ಸಚಿವರ ಆಪ್ತ ರಾಜೇಶ್ ಸಿಂಗ್ ಅವರು 2024ರಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಜಯ್ ಸಿಂಗ್ ಮತ್ತು ಅವರ ಪತ್ನಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬ
ನ್ಯಾಯಾಲಯವು ಹೆಚ್ಚಿನ ತನಿಖೆಗೆ ಆದೇಶಿಸಿದ ನಂತರ, ರಾಜೇಶ್ ಸಿಂಗ್ ರಾಜಕೀಯ ಪ್ರಭಾವ ಬಳಸಿ ದಂಪತಿಗೆ ಕಿರುಕುಳ ನೀಡಿದ್ದಾರೆ. ತನ್ನ ಚಾಲಕ ರಿಂಕು ಸಿಂಗ್ ಮೂಲಕ ದಂಪತಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಇತರ ವಿಭಾಗಗಳ ಅಡಿಯಲ್ಲಿ ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಾರೆಂದು ಹೇಳಲಾಗಿದೆ. ಹಾಗೆಯೇ ಪ್ರಕರಣ ಕೈಬಿಡಲು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
