ವಿಧಾನಸಭೆಯಲ್ಲಿ ಬುಧವಾರ ಕರ್ನಾಟಕ ಭೂ ಸುಧಾರಣೆಗಳು ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕ 2025ಕ್ಕೆ ಅಂಗೀಕಾರ ದೊರೆಯಿತು. ಈ ವಿಧೇಯಕದಲ್ಲಿ ಕೃಷಿ ಭೂಮಿ ಖರೀದಿ ಸಂಬಂಧ ಕೆಲವು ಕಾನೂನುಗಳನ್ನು ಸರಳೀಕರಣ ಮಾಡಲಾಗಿದೆ.
ಕರ್ನಾಟಕದಲ್ಲಿ ಎಲ್ಲೇ ಆಗಲಿ 2 ಎಕರೆ ವರೆಗೆ ಕೈಗಾರಿಗೆ ಮಾಡಲು ಪರಿವರ್ತನೆಗೆ ವಿನಾಯಿತಿ ನೀಡಲಾಗುತ್ತದೆ. ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ತಿದ್ದುಪಡಿಯನ್ನು ತರಲಾಗಿದೆ.
ಖಾಸಗಿ ವ್ಯಕ್ತಿಗಳ ಕೃಷಿ ಜಮೀನನ್ನು ಶಿಕ್ಷಣ ಸಂಸ್ಥೆಗಳು ಅಥವಾ ಸಣ್ಣ ಉದ್ದಿಮೆ/ಕೈಗಾರಿಕೆಗಳಿಗೆ ಖರೀದಿಸಲು ಸೆಕ್ಷನ್ 109ರ ಅಡಿಯಲ್ಲಿ ಈ ಹಿಂದೆಯೇ ಅನುಮತಿ ನೀಡಲಾಗಿದೆ. ಆದರೆ, ಆ ಅನುಮತಿಗಾಗಿ ಅವರು ಸರ್ಕಾರ ಮುಖ್ಯ ಕಾರ್ಯದರ್ಶಿ ವರೆಗೆ ಬರುವಂತಿದೆ. ಈಗಿನ ನೂತನ ತಿದ್ದುಪಡಿಯಲ್ಲಿ ಆ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೇ ನೀಡಲಾಗಿದೆ.
ಸಣ್ಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳೇ 4 ಹೆಕ್ಟೇರ್ ವರೆಗಿನ ಭೂಮಿ ಖರೀದಿಗೆ ಅನುಮತಿ ನೀಡಬಹುದು. ಹೀಗೆ ನೀಡುವ ಅನುಮತಿ ಆಟೋಮ್ಯಾಟಿಕ್ ಭೂ-ಪರಿವರ್ತನೆಯಾಗಿರುತ್ತದೆ.ಇದಲ್ಲದೆ, ಈ ಹಿಂದೆ ಸಣ್ಣ ಉದ್ದಿಮೆದಾರರು/ಶಿಕ್ಷಣ ಸಂಸ್ಥೆಗಳು ಭೂಮಿಯನ್ನು ಏನೋ ಉದ್ದೇಶಕ್ಕೆ ತಗೊಂಡು ಇನ್ನೇನೋ ಉದ್ದೇಶಕ್ಕೆ ಬಳಸಲೂ ಸಹ ನಮ್ಮ ಬಳಿ ಅನುಮತಿ ಕೇಳುತ್ತಾರೆ. ಆದರೆ, ಅದಕ್ಕೆ ಅನುಮತಿ ನೀಡುವುದು ಅವಕಾಶ ಇರಲಿಲ್ಲ. ಪ್ರಸ್ತುತ ಅದಕ್ಕೂ ಅವಕಾಶ ನೀಡಲಾಗಿದೆ.
“ನವೀಕರಿಸಬಹುದಾದ ಇಂಧನ ಕ್ಷೇತ್ರ ಪ್ರಸ್ತುತ ಉದಯೋನ್ಮುಖ ವಲಯ. ದೇಶದ ಆದ್ಯತೆ ಕಲ್ಲಿದ್ದಲಿಂದ ನವೀಕರಿಸಬಹುದಾದ ಇಂಧನ ಕ್ಷೇತ್ರದ ಕಡೆ ಬದಲಾಗಬೇಕು ಎಂಬುದು ಸರ್ಕಾರದ ಹಾಗೂ ಜನ ಸಾಮಾನ್ಯರ ಆದ್ಯತೆ. ಸೋಲಾರ್, ಪವನ ಶಕ್ತಿ ಘಟಕ ಸ್ಥಾಪಿಸಲು ಅನುಮತಿ ಕೊಡಿಸುವ ನೆಪದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಣ್ಣ ಉದ್ದಿಮೆದಾರರು ಮಧ್ಯವರ್ತಿಗಳ ಕಾಟಕ್ಕೆ ಬೇಸತ್ತಿದ್ದರೆ, ಸೋಲಾರ್ ಹಾಗೂ ಪವನ ಶಕ್ತಿ ವಿಂಡ್ ಮಿಲ್ ಸ್ಥಾಪಿಸುವ ಉದ್ದಿಮೆದಾರರ ಬಂಡವಾಳ ಹೂಡಿಕೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ಮಧ್ಯವರ್ತಿಗಳ ಉಪಟಳ ತಪ್ಪಿಸಿ ಬಂಡವಾಳ ಹೆಚ್ಚಿಸುವ ಸಲುವಾಗಿ ಆಟೋ ಕನ್ವರ್ಷನ್ಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಒತ್ತಾಯವೂ ಇತ್ತು. ಹೀಗಾಗಿ ಬಹಳ ದಿನಗಳ ಚರ್ಚೆಯ ನಂತರ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.
ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಪ್ರಾಧಿಕಾರಕ್ಕೆ ಸಂಬಂಧಿಸಿದ ತಿದ್ದುಪಡಿ ವಿಧೇಯಕಗಳ ಮಾಹಿತಿ
1) ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ – 2025
2) ನಾಡಪ್ರಭು ಕೆಂಪೆಗೌಡ ಪಾರಂಪರಿಕ ತಾಣ ಅಭಿವೃದ್ಧಿ ತಿದ್ದುಪಡಿ ವಿಧೇಯಕ – 2025
3) ಕಿತ್ತೂರು ಅಭಿವೃದ್ದಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ – 2025
4) ಕೂಡಲಸಂಗಮ ಅಭಿವೃದ್ದಿ ಮಂಡಳಿ ತಿದ್ದುಪಡಿ ವಿಧೇಯಕ – 2025
5) ಬನವಾಸಿ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ – 2025
6) ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ – 2025
“ರಾಜ್ಯದ ಎಲ್ಲಾ ಪ್ರಾಧಿಕಾರಗಳ ಅಭಿವೃದ್ಧಿ ಕೆಲಸ ಸಕ್ರೀಯವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಬೇಕು ಎಂಬ ಉದ್ದೇಶದಿಂದ ಈ ಎಲ್ಲಾ ತಿದ್ದುಪಡಿ ವಿಧೇಯಕಗಳನ್ನೂ ಮಂಡಿಸಲಾಗಿದೆ. ಈ ಹಿಂದೆ ಒಂದೆರಡು ಅಭಿವೃದ್ಧಿ ಪ್ರಾಧಿಕಾರಗಳು ಇದ್ದವು, ಹೀಗಾಗಿ ಪ್ರಾಧಿಕಾರಗಳಿಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರಬೇಕು ಎಂಬ ನಿಯಮ ಇತ್ತು. ಆದರೆ, ಇಂದು ಪ್ರಾಧಿಕಾರಗಳ ಸಂಖ್ಯೆ ಅಧಿಕವಾಗಿದೆ. ಅಲ್ಲದೆ, ಮುಖ್ಯಮಂತ್ರಿಗಳಿಗೂ ಕೆಲಸದ ಒತ್ತಡ ಅಧಿಕವಾಗಿದ್ದು, ಈ ನಡುವೆ ಪ್ರಾಧಿಕಾರಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳಿಂದ ಗಮನ ನೀಡುವುದು ಕಷ್ಟದ ವಿಚಾರ. ಹೀಗಾಗಿ ಎಲ್ಲಾ ಪ್ರಾಧಿಕಾರಗಳ ಅಭಿವೃದ್ಧಿ ಕೆಲಸ ಸಕ್ರೀಯವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಬೇಕು ಎಂಬ ಉದ್ದೇಶದಿಂದ ಪ್ರಾಧಿಕಾರಗಳಿಗೆ ಮುಖ್ಯಮಂತ್ರಿ ಅಥವಾ ಇಲಾಖೆ ಸಚಿವರಾದ ಕಂದಾಯ ಸಚಿವರು ಅಥವಾ ಸರ್ಕಾರ ಸೂಚಿಸಿದ ಪ್ರಾಧಿಕಾರದ ಅಭಿವೃದ್ಧಿ ಬಗ್ಗೆ ಆಸಕ್ತಿ ಇರುವ ಯಾವುದೇ ಸಚಿವರನ್ನು ನೇಮಕ ಮಾಡಲು ಈ ತಿದ್ದುಪಡಿಯಲ್ಲಿ ಅವಕಾಶ ನೀಡಲು ಉದ್ದೇಶಿಸಲಾಗಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.
