1942 ರ ‘ಭಾರತ ಬಿಟ್ಟು ತೊಲಗಿ’ ಚಳವಳಿಯ 83 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಸ್ಕೆಎಂ ಹಾಗೂ ಕೇಂದ್ರೀಯ ಕಾರ್ಮಿಕ ಸಂಘಗಳು ಜಂಟಿ ಕರೆಯ ಮೇರೆಗೆ ನೀಡಿರುವ ಪ್ರಯುಕ್ತ ಎಲ್ಲಾ ಜಿಲ್ಲಾ ಕೇಂದ್ರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಂಯುಕ್ತ ಹೋರಾಟ ಕರ್ನಾಟಕ ಕಲಬುರಗಿ ನೇತೃತ್ವದಲ್ಲಿ ‘ಬಹುರಾಷ್ಟ್ರೀಯ ಕಂಪನಿಗಳೇ ದೇಶ ಬಿಟ್ಟು ತೊಲಗಿ”, “ಕಾರ್ಪೊರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ” ಘೋಷಣೆಯಡಿಯಲ್ಲಿ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ, ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ಚಿತ್ರವನ್ನು ಸುಟ್ಟು ಪ್ರತಿಭಟಿಸಲಾಯಿತು.
ನಂತರ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಕಲಬುರಗಿ ಜಿಲ್ಲಾಧಿಕಾರಿ ರವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, “ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕಾರ್ಪೊರೇಟ್-ಕೋಮುವಾದಿ ಧೋರಣೆಗಳಿಂದಾಗಿ ದೇಶದ ದುಡಿಯುವ ಜನತೆ ಆಪಾರ ಪ್ರಮಾಣದ ಸಂಕಟವನ್ನು ಅನುಭವಿಸುವಂತಾಗಿದೆ. ನಮ್ಮ ಬದುಕಿನ ಪ್ರತಿಯೊಂದು ವಲಯದಲ್ಲೂ ದೇಶ ಹಾಗೂ ವಿದೇಶದ ಬಹುರಾಷ್ಟ್ರೀಯ ಹಾಗೂ ಗುತ್ತಿಗೆ ಕಂಪನಿಗಳ ಹಿಡಿತ ಬಲಗೊಳ್ಳುತ್ತಿದೆ. ಸಂವಿಧಾನ ಖಾತರಿ ಪಡಿಸಿರುವ ಪ್ರತಿಯೊಂದು ಹಕ್ಕಿಗೂ ಗಂಭೀರ ತೊಂದರೆ ಉಂಟು ಮಾಡುತ್ತಿದೆ. ದಿವಾಳಿಕೋರ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿಗಳು ರೈತರ, ಕಾರ್ಮಿಕರ, ದಲಿತರ, ಮಹಿಳೆಯರ, ವಿದ್ಯಾರ್ಥಿ ಯುವಜನರ ಬದುಕಿಗೆ ಎಷ್ಟೊಂದು ವಿನಾಶಕಾರಿಯಾಗಿವೆ ಎಂಬುದು ಈ ನೀತಿಗಳ ಮೂವತ್ತು ವರ್ಷಗಳ ಆಳ್ವಿಕೆಯಲ್ಲಿ ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಗಿದೆ” ಎಂದರು.
“ಪರಿಸ್ಥಿತಿ ಹೀಗಿದ್ದರೂ ದೇಶದ ಕೃಷಿ ವಲಯವನ್ನು ಹಾಗೂ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ವಿದೇಶಿ ದೈತ್ಯ ಬಹುರಾಷ್ಟ್ರೀಯ ಕಂಪನಿಗಳಿಗೆ ಸುಂಕ ರಹಿತವಾಗಿ ತೆರೆಯಲಾಗುತ್ತಿದೆ. ಸಂಸತ್ತಿನಲ್ಲಾಗಲಿ ಹಾಗೂ ರೈತರ, ಕಾರ್ಮಿಕರ ಜೊತೆಯಲ್ಲಾಗಲಿ ಯಾವುದೇ ರೀತಿ ಚರ್ಚೆ ನಡೆಸದೇ ದೇಶದ ಸ್ವಾವಲಂಬಿ ಹಾಗೂ ಸಾರ್ವಭೌಮಕ್ಕೆ ತೊಂದರೆ ಉಂಟು ಮಾಡುವ ಅಸಮಾನ ಸಮಗ್ರ ಆರ್ಥಿಕ ಹಾಗೂ ವಾಣಿಜ್ಯ ಒಪ್ಪಂದಕ್ಕೆ ಬ್ರಿಟನ್ ಜೊತೆ ಭಾರತ ಸಹಿ ಮಾಡಿದೆ. ಇದೇ ರೀತಿಯ ಒಪ್ಪಂದಕ್ಕೆ ಅಮೇರಿಕಾ ಸಹಿ ಹಾಕುವಂತೆ ಭಾರತ ಒಂದು ಸಾರ್ವಭೌಮ ಹಾಗೂ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂಬುದನ್ನು ಮರೆತು ಬೆದರಿಕೆ ಹಾಗೂ ಒತ್ತಡ ಹಾಕುತ್ತಿದೆ’ ಎಂದು ಆರೋಪಿಸಿದರು.

“ಕೆಲವೇ ಕೆಲವು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ ಲಾಭದ ಹಿತರಕ್ಷಣೆಗಾಗಿ ಕೋಟ್ಯಾಂತರ ಭಾರತೀಯರ ಹಿತವನ್ನು ಬಲಿಗೊಡುವುದನ್ನು ಕೂಡಲೇ ಭಾರತ ಸರ್ಕಾರ ನಿಲ್ಲಿಸಬೇಕು. ಭಾರತದ ಒಟ್ಟಾರೆ ಹಿತಕ್ಕೆ ವಿರುದ್ಧವಾಗಿರುವ ಬ್ರೀಟನ್ ಜೊತೆಗಿನ ಒಪ್ಪಂದವನ್ನು ಅಮಾನುತು ಮಾಡಬೇಕು ಹಾಗೂ ಸಾಮ್ರಾಜ್ಯಶಾಹಿ ಆಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರವರ ಸುಂಕ ಹೇರಿಕೆ ಹಾಗೂ ದಂಡದ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಿ ಭಾರತದ ಸಾರ್ವಭೌಮತ್ವವನ್ನು ಕಾಪಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ, ಮಹಾನ್ ಸ್ವಾತಂತ್ರ್ಯ ಚಳವಳಿಯ ಐತಿಹಾಸಿಕ ‘ಭಾರತ ಬಿಟ್ಟು ತೊಲಗಿ’ ವಾರ್ಷಿಕ ಆಚರಣೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಬೃಹತ್ ಪ್ರತಿಭಟನೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಕರೆ ನೀಡವೆ ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡುವುದರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಐಕೆಎಸ್ ಜಿಲ್ಲಾಧ್ಯಕ್ಷ ಭೀಮಾಶಂಕರ್ ಮಾಡ್ಯಾಳ್, ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಗಣಪತರಾವ್ ಕೆ. ಮಾನೆ, ಕೆಆರ್ಆರ್ಎಸ್ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ಥಂಬೆ, ಕೆಆರ್ಆರ್ಎಸ್ ಗೌರವಾಧ್ಯಕ್ಷೆ ಉಮಾಪತಿ ಮಾಲೀಪಾಟೀಲ್, ಡಿಎಸ್ಎಸ್ ಮುಖಂಡ ಅರ್ಜುನ್ ಗೊಟ್ಟೂರ್, ಎಐಟಿಯುಟಿಐ, ಮಹೇಶ್ ಎಸ್. ಬಿ., ಮಲ್ಲಣ್ಣ ದಂಡಬಾ, ನೀಲಕಂಠ ಎಂ. ಹುಲಿ, ಶಂಕರ ಜಾಧವ್, ಮಲ್ಲಯ್ಯ ಗುತ್ತೇದಾರ್, ಅಮೃತ ಚವಾಣ್, ದಿಲೀಪ್ ನಾಗುರೆ, ಮಹೇಶ್ ಎಸ್ ಬಿ ಭಾಗವಹಿಸಿದ್ದರು.