ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ತಾಲ್ಲೂಕು ಹ್ಯಾಂಡ್ ಪೋಸ್ಟ್ ನ ಐಸಿಎಫ್ ಸಭಾಂಗಣದಲ್ಲಿ ಸಂಭ್ರಮದ ಜನಸ್ವಾತಂತ್ರ್ಯೋತ್ಸವ ಹಾಗೂ ಸಂವಿಧಾನ ಸಂರಕ್ಷಣಾ ಪಡೆಗೆ ಪ್ರಗತಿಪರ ಸಂಘಟನೆಗಳ ಮುಖಂಡರು ಚಾಲನೆ ನೀಡಿದರು.
ಸಂವಿಧಾನ ಪೀಠಿಕೆ ಭೋದಿಸುವುದರ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಎದ್ದೇಳು ಕರ್ನಾಟಕ ರಾಜ್ಯ ಸಂಚಾಲಕರಾದ ನೂರ್ ಶ್ರೀಧರ್ ಮಾತನಾಡಿ ” ಮುಂಬರುವ ಮೂರು ವರ್ಷಗಳಲಿ ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ನಾಗರಿಕ ಶಕ್ತಿಗಳು ಮುಷ್ಟಿಗಟ್ಟಿ ಪ್ರಬಲ ಸಾಮಾಜಿಕ, ಸಾಂಸ್ಕೃತಿಕ ಸೈದ್ದಾಂತಿಕಾ ಹಾಗೂ ರಾಜಕೀಯ ಪ್ರತಿರೋಧಕ್ಕೆ ಸಜ್ಜಾಗಬೇಕು. ಇದನ್ನ ಆಗುಮಾಡುವುದರಲ್ಲಿ ಕರ್ನಾಟಕ ಬಹುಮುಖ್ಯವಾದ ಭೂಮಿಕೆಯಾಗಿ ಕಾರ್ಯನಿರ್ವಹಿಸಬೇಕಿದೆ ” ಎಂದರು.

” ದೇಶಪ್ರೇಮಿ ಮನಸ್ಸುಗಳು ದೊಡ್ಡ ಸಂಖ್ಯೆಯಲ್ಲಿ ತಳಮಟ್ಟದಿಂದ ಪಡೆಗಳನ್ನು ಗಟ್ಟಿಗೊಳಿಸಿ, ಆರ್ ಎಸ್ ಎಸ್ ಚಿಂತನೆಯನ್ನು ತಿರಸ್ಕರಿಸುವಂತೆ ಕರೆಕೊಡುತ್ತಾ, ವಿಸ್ತ್ರುತ ಸೈದ್ದಾಂತಿಕ ಸಾಂಸ್ಕೃತಿಕ ಅಭಿಯಾನ ನಡೆಸುವುದು. ಕೇಂದ್ರ ಸರ್ಕಾರದ ದುರಾಡಳಿತ ಖಂಡಿಸಿ ದೇಶವ್ಯಾಪಿ ‘ ಅಧಿಕಾರ ಬಿಟ್ಟು ತೊಲಗಿ ‘ ಜನಾಂದೋಲನ ಕೈಗೊಳ್ಳುವುದು. ಕೊಟ್ಟ ಮಾತಿನಂತೆ ನಡೆದುಕೊಳ್ಳುವಂತೆ ರಾಜ್ಯ ಸರ್ಕಾರದ ಮೇಲೆ ಸಂಘಟಿತ ಒತ್ತಡ ತರುವ ಅಭಿಯಾನ ಮಾಡುವುದು ಕಾರ್ಯಯೋಜನೆಯ ಪ್ರಮುಖ ಅಂಶವಾಗಿದೆ ” ಎಂದು ಹೇಳಿದರು.
” ಮುಂದಿನ ಮೂರು ತಿಂಗಳಿನಲ್ಲಿ ಸಂವಿಧಾನ ಸಂರಕ್ಷಣಾ ಪಡೆಯ ಸಬಲೀಕರಣ, ಪ್ರತಿ ಜಿಲ್ಲಾ ಕೇಂದ್ರಗಳಲಿ ತರಬೇತಿ ಶಿಬಿರ ನಡೆಸುವುದು, ಜನದನಿ ಸಮಾವೇಶ ಹಾಗೂ ರಾಜ್ಯ ಸರ್ಕಾರದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುವುದಾಗಿದೆ. ಇದಲ್ಲದೆ, ಸಾಂಸ್ಕೃತಿಕ ಧಾರೆಯ ಜೊತೆ ಸಂಗಮ. ಜನಮಾಧ್ಯಮಗಳ ಜೊತೆ ಬೆಸುಗೆ, ದೇಶ ಮಟ್ಟದಲ್ಲಿ ಕಾರ್ಯಕರ್ತರ ಕೊಂಡಿ ರೂಪಿಸುವುದು ಮೊದಲ ಆಧ್ಯತೆಯಾಗಿದೆ ” ಎಂದರು.

ತಾಲ್ಲೂಕು ಆರೋಗ್ಯಧಿಕಾರಿ ಡಾ. ರವಿಕುಮಾರ್ ಮಾತನಾಡಿ ” ನಾನು ಸಹ ಮಿಸಲಾತಿ ಮೂಲಕ ಸಂವಿಧಾನದಿಂದಾಗಿ ವೈದ್ಯನಾಗಿ, ತಾಲ್ಲೂಕು ಆರೋಗ್ಯಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು. ಮೂಲ ಆಶಯಗಳನ್ನು ಮರೆತಿರುವ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಉತ್ತಮವಾದದ್ದು. ಜನಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಸಂಘಟನೆಗಳ ಮುಖಂಡರೊಂದಿಗೆ ಭಾಗಿಯಾಗಿದ್ದು ಸಂತಸದ ವಿಷಯ. ಈ ಮೂಲಕ ಸಾಮಾಜಿಕವಾಗಿ ನಡೆಯುವ ಎಲ್ಲಾ ಕಾರ್ಯಗಳಿಗೂ ನಿಮ್ಮೊಟ್ಟಿಗಿರುವುದಾಗಿ ಹೇಳಿ ಸಂವಿಧಾನ ಸಂರಕ್ಷಣಾ ಪಡೆಗೆ ಶುಭಕೋರಿದರು. “

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್ ಮಾತನಾಡಿ ” ಸ್ವಾತಂತ್ರ್ಯ ಬಂದರು ಇಂದಿಗೂ ಶೋಷಣೆ ನಿಂತಿಲ್ಲ. ಹೋರಾಟ ಮಾಡುವುದನ್ನು ತಪ್ಪಿಸಲಿಲ್ಲ. ಆಳುವ ಸರ್ಕಾರಗಳು ದಾರಿ ತಪ್ಪಿವೆ. ಇಂತಹ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ರೈತ, ದಲಿತ, ಕಾರ್ಮಿಕ ವಿರೋಧಿ ಸರ್ಕಾರಗಳಿಗೆ ಬುದ್ದಿ ಕಲಿಸಬೇಕಿದೆ. ಯಾವುದೇ ಸರ್ಕಾರಗಳು ಬರಲಿ ಜನಪರವಾಗಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಂದಾಗುವುದು ಬಹು ಮುಖ್ಯವಾದ ವಿಚಾರ. ಜೊತೆಗೆ ಸ್ವಾತಂತ್ರ್ಯ ಸಂಭ್ರಮದ ಜೊತೆಗೆ ವಿಶೇಷವಾಗಿ ಜನಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಜನಗಳಿಂದಲೇ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಕೇವಲ ಸರ್ಕಾರಿ ಕಾರ್ಯಕ್ರಮವಾಗದೆ ಜನ ಸಾಮಾನ್ಯರನ್ನು ಒಳಗೊಳ್ಳುವುದು ಅತಿ ಸೂಕ್ತ. ಸಂವಿಧಾನ ಸಂರಕ್ಷಣಾ ಪಡೆಯನ್ನು ರಾಜ್ಯದಲ್ಲಿ ಗಟ್ಟಿಗೊಳಿಸುವುದರ ಮೂಲಕ ಮುಂದಿನ ಕೆಲಸಗಳಿಗೆ ಅಣಿಯಾಗೋಣ ” ಎಂದು ಕರೆನೀಡಿದರು.

ಸಂವಿಧಾನ ಪೀಠಿಕೆ ಭೋದಿಸಿದ ದಸಂಸ ಹಿರಿಯ ಮುಖಂಡರಾದ ಬೆಟ್ಟಯ್ಯ ಕೋಟೆಯವರು ಮಾತನಾಡಿ ” ಇದುವರೆಗೂ ದಲಿತರಿಗೆ, ಆದಿವಾಸಿಗಳಿಗೆ, ಶೋಷಿತರಿಗೆ ಸ್ವಾತಂತ್ರ್ಯ ಬಂದಿಲ್ಲ. ಇಂತಹ ಕಾಲಘಟ್ಟದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾಗಿದೆ. ಜನ ಸಾಮಾನ್ಯರ ಮೇಲಿನ ಶೋಷಣೆ ಹೆಚ್ಚಾಗಿದೆ. ಅತ್ಯಾಚಾರ, ಅನಾಚಾರಗಳಿಗೆ ಕೊನೆಯೇ ಇಲ್ಲದಂತಾಗಿದೆ. ಸ್ವಾತಂತ್ರ್ಯ ಬರೀ ಆಚರಣೆ ಅಲ್ಲ. ದೇಶದ ಕಟ್ಟಕಡೆಯ ವ್ಯಕ್ತಿಗೂ ಸಲ್ಲಬೇಕಾದ ನ್ಯಾಯ. ಆದರೇ, ಇವತ್ತಿನ ದಿನಮಾನಗಳಲ್ಲಿ ‘ ಸರ್ವರಿಗೂ ಸಮಪಾಲು, ಸಮಬಾಳು ‘ ಇಲ್ಲದಂತಾಗಿದೆ. ಆಡಳಿತ ವರ್ಗ, ಸರ್ಕಾರ ಕೈಕಟ್ಟಿ ಕುಳಿತಿವೆ. ಇಂತಹ ಸಂದರ್ಭದಲ್ಲಿ ನಾಗರಿಕರು ಒಟ್ಟುಗೂಡುವುದು, ಶಕ್ತಿಯಾಗಿ ಹೊರ ಹೊಮ್ಮುವುದು ಸಾಕಾಲ. ಇಂತಹ ದಾಟಿಯಲ್ಲಿ ಸಂವಿಧಾನ ಸಂರಕ್ಷಣಾ ಪಡೆ ಚಾಲನೆಯಾಗಿದ್ದು ಸೂಕ್ತವಾಗಿದೆ ” ಎಂದು ಹೇಳಿದರು.

ಸಂವಿಧಾನ ಸಂರಕ್ಷಣಾ ಪಡೆಯ ಚಾಲನ ಕಾರ್ಯಕ್ರಮದ ಮೊದಲ ಅಧ್ಯಕ್ಷತೆ ವಹಿಸಿದ ದಸರಾ ಉದ್ಘಾಟಕರಾದ ಪುಟ್ಟಯ್ಯ ಮಲಾರ ಮಾತನಾಡಿ ” ಬದಲಾವಣೆಯ ಅಗತ್ಯವಿದೆ. ದೇಶದಲ್ಲಿ, ರಾಜ್ಯದಲ್ಲಿ ಯಾರಿಗೂ ನೆಮ್ಮದಿಯ ಬದುಕು ಇಲ್ಲ. ರೈತನ ಪರವಾದ ಯಾವುದೇ ಕೆಲಸಗಳು ಆಗುತ್ತಿಲ್ಲ. ಎಲ್ಲವೂ ರೈತ ವಿರೋಧಿ ನೀತಿಗಳೇ ಆಗಿವೆ. ಆಳುವ ವರ್ಗ ಭ್ರಷ್ಟರಾಗಿ ಜನರಿಗೆ ನ್ಯಾಯ ಸಿಗುತ್ತಿಲ್ಲ. ರಾಜ್ಯದಲ್ಲಿ ನಿರಂತರ ಹೊರಾಟಗಳ ಮೂಲಕ ಪರ್ಯಾಯ ಕಂಡುಕೊಳ್ಳುವ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಇಂದು ಚಾಲನೆ ದೊರೆತಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಗಬೇಕಿರುವುದು ಬಹುಮುಖ್ಯವಾದ ಕೆಲಸ ” ಎಂದರು.
ಸ್ವಾತಂತ್ರ್ಯ ದಿನ ವಿಶೇಷ | ಕುಗ್ಗುತ್ತಿರುವ ಪ್ರಜಾಪ್ರಭುತ್ವದ ನಡುವೆ ನಾಗರಿಕ ಜಾಗೃತಿಯ ಆಶಾಕಿರಣ

ಕಾರ್ಯಕ್ರಮದಲ್ಲಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಮಹಾದೇವ ನಾಯಕ, ಜಿಲ್ಲಾ ಉಪಾಧ್ಯಕ್ಷ ಪಳನಿಸ್ವಾಮಿ, ನಂದೀಶ್, ಮಹದೇವಮ್ಮ, ಪ್ರಗತಿಪರ ಸಂಘಟನೆ ಮುಖಂಡ ಅಕ್ಬರ್ ಪಾಷ, ಜಮಾಅತೆ ಇಸ್ಲಾಮೀ ಹಿಂದ್, ಮುಖಂಡರಾದ ಅಸಾದುಲ್ಲಾ, ಅಬ್ದುಲ್ ವಾಹಿದ್, ರೆಹಮಾನ್ ಪಾಷ, ಈದಿನ. ಕಾಮ್ ವರದಿಗಾರ ಮೋಹನ್ ಮೈಸೂರು, ಒಕ್ಕೂಟ ಮಾಜಿ ರಾಜ್ಯಾಧ್ಯಕ್ಷ ಮಹದೇವ, ಮಲ್ಲಿಗಮ್ಮ, ಜೀವಿಕ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಉಮೇಶ್ ಬಿ. ನೂರಲಕುಪ್ಪೆ, ಜಿಲ್ಲಾ ಸಂಚಾಲಕ ಬಸವರಾಜ್, ತಾಲ್ಲೂಕು ಸಂಚಾಲಕರಾದ ಚಂದ್ರಶೇಖರ್ ಮೂರ್ತಿ, ಶಿವಾರಾಜ್, ಶಿವಣ್ಣ, ನಾಗರಾಜ್ ಹೆಗ್ಗನೂರು, ವಸಂತ, ಭೋಗನಂಜ, ಶ್ರೀನಿವಾಸ, ಬಸವರಾಜ್, ಗಣೇಶ, ಸವಿತಾ, ಅರಣ್ಯ ಹಕ್ಕುಗಳ ಸಮಿತಿಯಿಂದ ಶಿವು, ರಾಮಕೃಷ್ಣ, ರಾಕೇಶ್
ಸೇರಿದಂತೆ ಹಲವರು ಇದ್ದರು.