“ಗದಗ ಪರಿಸರದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಚಳುವಳಿಯ ಇತಿಹಾಸ ರೋಚಕವಾಗಿದ್ದು, ಜಿಲ್ಲೆಯ ಮಹನೀಯರ ಪಾತ್ರ ಅಪಾರವಾಗಿದೆ. ಎಂದು ಜಿಲ್ಲಾ ಉಸ್ತುವಾರಿ ಸಚಿವರು ಡಾ.ಎಚ್.ಕೆ.ಪಾಟೀಲ ಹೇಳಿದರು.
ಗದಗ ಪಟ್ಟಣದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾಡಳಿತ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
“ಶತಮಾನಗಳ ದಾಸ್ಯತ್ವವನ್ನು ಕಳಚಿ ಸ್ವತಂತ್ರವಾದ ಭಾರತ, ತನ್ನ 78 ವರ್ಷಗಳನ್ನು ಪೂರ್ಣಗೊಳಿಸಿ, ಇಂದು 79ರಲ್ಲಿ ಪಾದಾರ್ಪಣೆ ಮಾಡುತ್ತಿದೆ. ಇಂದು ಮಹಾತ್ಮ ಗಾಂಧೀಜಿಯವರು ತೋರಿದ ವಿನೂತನವಾದ ಸತ್ಯ ಅಹಿಂಸೆ ಎಂಬ ಅಸ್ತ್ರಗಳನ್ನು ಹಿಡಿದು ಸತ್ಯಾಗ್ರಹ ಮಾರ್ಗದಿಂದ ಬ್ರಿಟೀಷ್ ಆಡಳಿತದ ವಿರುದ್ಧ ನಮ್ಮ ಹಿರಿಯರು ಹೋರಾಡಿದರು. ಅಸಂಖ್ಯಾತ ಭಾರತೀಯರು ಮಾಡಿದ ತ್ಯಾಗ ಬಲಿದಾನದಿಂದಾಗಿ ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದರು. ನಮ್ಮ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನ, ಶ್ರಮ, ಸಮರ್ಪಣಭಾವ, ದೇಶಪ್ರೇಮದ ಫಲವಾಗಿ ಇಂದು ಸ್ವತಂತ್ರ್ಯದ ಸುಖ ಅನುಭವಿಸುತ್ತಿದ್ದೇವೆ. ಸತ್ಯಾಗ್ರಹವು ಸ್ವಾತಂತ್ರ್ಯ ಸಂಗ್ರಾಮ ಮತ್ತು ತದನಂತರ ಸ್ವಾತಂತ್ರೋತ್ತರ ಭಾರತದಲ್ಲಿ ಪ್ರಭಲ ಅಸ್ತ್ರವಾಗಿ ಪರಿಣಮಿಸಿ ಅನೇಕ ಆಂದೋಲನ ಮತ್ತು ಚಳವಳಿಗಳಿಗೆ ಯಶ ತಂದುಕೊಡುವಲ್ಲಿ ಪರಿಣಾಮಕಾರಿಯಾದ ಪಾತ್ರ ನಿಭಾಯಿಸುತ್ತಿದೆ” ಎಂದು ತಿಳಿಸಿದರು.
“ನಮ್ಮ ದೇಶಕ್ಕೆ ನಮ್ಮದೇ ಆಡಳಿತ ಮತ್ತು ಸಂಪೂರ್ಣ ಸ್ವತಂತ್ರ್ಯಕ್ಕಾಗಿ ಭಾರತದ ರಾಷ್ಟೀಯ ಕಾಂಗ್ರೆಸ್ಸು ಹುಟ್ಟಿಕೊಂಡಿತು. ಲೋಕಮಾನ್ಯ ತಿಲಕ, ಮಹಾತ್ಮಾ ಗಾಂಧೀಜಿ, ನೆಹರೂ, ಸುಭಾಷಚಂದ್ರ ಬೋಸ್, ವಲ್ಲಭಭಾಯಿ ಪಟೇಲ, ಮೌಲಾನಾ ಅಬ್ದುಲ್ಲಾಂ ಆಝಾದ, ದಾದಾಬಾಯಿ ನವರೋಜಿ ಅವರಂಥ ನೂರಾರು ನಾಯಕರು ಹಾಗೂ ಹೋರಾಟಗಾರರ ಹೋರಾಟದ ಪರಿಣಾಮವಾಗಿ, ಸತ್ಯ, ಶಾಂತಿ ಹಾಗೂ ಅಹಿಂಸಾತ್ಮಕ ಹೋರಾಟದ ಮೂಲಕ ಭಾರತ 1947 ರ ಆಗಸ್ಟ್ 15 ರಂದು ಸ್ವತಂತ್ರವಾಯಿತು” ಎಂದು ಹೇಳಿದರು.
“ಈ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧೀಜಿಯವರು, ನನಗೆ ಸ್ವಾತಂತ್ರದ ದಾಹವಿದೆಯೇ ವಿನಃ ಅಧಿಕಾರದ ದಾಹವಿಲ್ಲ. ನಾನು ಪರಿಶುದ್ಧವಾದ ಅಹಿಂಸೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ನಮ್ಮ ವಿರೋಧ ಇರುವುದು ಬ್ರಿಟಿಷರ ಪ್ರಭುತ್ವದೊಂದಿಗೆ, ನಾವು ನಮ್ಮ ದೇಶವನ್ನು ನೋಡಿಕೊಳ್ಳಲು ಸಮರ್ಥರಾಗಿದ್ದೇವೆ. ‘ಬ್ರಿಟಿಷರೇ ನೀವು ಕೂಡಲೇ ಭಾರತ ಬಿಟ್ಟು ತೊಲಗಿ’ ಎಂದು ಕರೆ ನೀಡಿದರು. ಇದಲ್ಲದೆ, ಭಾರತೀಯರು ದೇಶದ ಸ್ವತಂತ್ರ್ಯಕ್ಕಾಗಿ ಸರ್ವ ತ್ಯಾಗಕ್ಕೂ ಸಿದ್ಧರಾಗಬೇಕೆಂದು ತಿಳಿಸಿ, ‘ಮಾಡು ಇಲ್ಲವೆ ಮಡಿ’ ಎಂದು 1942 ರ ಆಗಸ್ಟ್ 8 ರಂದು ಮುಂಬೈಯಲ್ಲಿ ಈ ಕರೆ ನೀಡಿದ ಮಹಾತ್ಮಾ ಗಾಂಧಿ, ಆಗಷ್ಟ 9 ಕ್ಕೆ ಬಂಧನಕ್ಕೊಳಗಾದರು. ಈ ಘಟನೆ, ಇಡೀ ದೇಶದಲ್ಲಿ ಸಂಚಲನ ಮಾಡಿತು, ಸ್ವಾತಂತ್ರ್ಯ ಹೋರಾಟ ಮತ್ತಷ್ಟು ತೀವ್ರಗೊಂಡಿತು” ಎಂದರು.
ಗದಗ ಪರಿಸರದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಚಳುವಳಿಯ ಇತಿಹಾಸ ರೋಚಕವಾಗಿದೆ. ಗದಗ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ 1857 ರಿಂದಲೇ ಆರಂಭಗೊಳ್ಳುತ್ತದೆ. ನರಗುಂದದ ಬಾಬಾಸಾಹೇಬ, ಮುಂಡರಗಿಯ ಭೀಮರಾವ್, ಡಂಬಳದ ಕೆಂಚನಗೌಡ, ಅನಂತರಾವ್ ಜಾಲಿಹಾಳ, ಡಾ. ವಾಸುದೇವರಾವ್ ಉಮಚಗಿ, ಬೆಟಗೇರಿಯ ತ್ರಿಮಲ್ಲೇ, ಮಳೇಕರ, ಜಯರಾಮಾಚಾರ್ಯ ಮಳಗಿ, ಡಂಬಳದ ಶ್ರೀನಿವಾಸರಾವ್ ಕಳ್ಳಿ, ತಿಪ್ಪಣ್ಣ ಶಾಸ್ತ್ರಿ, ಅಂದಾನಪ್ಪ ದೊಡ್ಡಮೇಟಿ, ಕೌತಾಳ ವೀರಪ್ಪ, ಕೆ.ಎಚ್.ಪಾಟೀಲರು ಸೇರಿ ಅಸಂಖ್ಯ ಸ್ವಾತಂತ್ರ್ಯ ಸೇನಾನಿಗಳ ಹೋರಾಟ ಅವಿಸ್ಮರಣೀಯ. ಡಾ.ಬಿ.ಜಿ.ಹುಲಗಿ, ಶಂಕ್ರಪ್ಪ ಗುಡ್ಡದ, ಇಸ್ಮಾಯಿಲ ಸಾಹೇಬ, ಕಲ್ಲೂರ ರಾಮಚಾರಿ, ವೆಂಕಟೇಶ ಮಾಗಡಿ, ಕೋಗನೂರ ನಿಂಗಪ್ಪ ಮೊದಲಾದವರು ಬ್ರಿಟೀಷರನ್ನು ಎದುರಿಸಿ ಕಠಿಣಶಿಕ್ಷೆ ಅನುಭವಿಸಿದರು” ಎಂದರು.
“1916 ರಲ್ಲಿ ಬಾಲಗಂಗಾಧರ ತಿಲಕರು ಗದಗಿಗೆ ಭೇಟಿ ನೀಡಿದಾಗ ಆಗ ಆರಂಭಿಕ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಅನಂತರಾವ ಜಾಲಿಹಾಳ, ಡಾ.ವೆಂಕಟರಾವ ಹುಯಿಲಗೋಳ, ಡಾ.ವಾಸುದೇವ ಉಮಚಗಿ ಮುಂತಾದವರು ಈ ಭಾಗದಲ್ಲಿ ರಾಷ್ಟೀಯ ಚಳುವಳಿಯ ನೇತೃತ್ವ ವಹಿಸಿದರು. 1920 ರಲ್ಲಿ ಮಹಾತ್ಮಾ ಗಾಂಧೀಜಿಯವರು ಗದುಗಿಗೆ ಭೇಟಿ ನೀಡಿದಾಗ ಜನರಲ್ಲಿ ರಾಷ್ಟಿçÃಯ ಮನೋಭಾವನೆ ಮತ್ತು ಹೋರಾಟದ ಕಿಚ್ಚು ಇನ್ನಷ್ಟು ತೀವ್ರಗೊಂಡಿತು. ಈ ಎಲ್ಲ ಮಹಾನ ನಾಯಕರಿಗೆ ಸಹಸ್ರ ನಮನಗಳನ್ನು ಸಲ್ಲಿಸೋಣ” ಎಂದು ತಿಳಿಸಿದರು.
“ಸ್ವಾತಂತ್ರ್ಯದ ನಂತರ, ಭಾರತಕ್ಕೆ ಕೃಷಿ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಮೂಲ ಸೌಕರ್ಯ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಸಾಧಿಸುವ ಸವಾಲನ್ನು ಎದುರಿಸಿ, ಭಾರತವನ್ನು ಕಟ್ಟುತ್ತಾ ಕಟ್ಟುತ್ತಾ ಸಾಗಿ ಜಗತ್ತಿನಲ್ಲಿ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಬಲಿಷ್ಠ ಮತ್ತು ಶ್ರೀಮಂತ ರಾಷ್ಟೀಯ ಪೈಪೋಟಿಯನ್ನು ಎದುರಿಸಿ ಪ್ರಪಂಚವೇ ಭಾರತವನ್ನು ಗುರುತಿಸುವಂತೆ ಸಾಧನೆಯನ್ನು ಮಾಡಲಾಗಿದೆ. ಅದರಲ್ಲಿ ಮೊದಲ ಪರಮಾಣು ರಿಯಾಕ್ಟರ್ ರಚನೆ ಮತ್ತು ಚಂದ್ರಯಾನದಂತಹ ಯಶಸ್ಸು ನಾವು ಅಭಿಮಾನ ಪಡುವಂತಾಗಿದೆ” ಎಂದರು.
“ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭನೆಯನ್ನು ಸಾಧಿಸಿ, ಹಸಿರು ಕ್ರಾಂತಿಯನ್ನು ಮಾಡಿ ಆಹಾರ ಭದ್ರತೆಯ ಸವಾಲುಗಳನ್ನು ಮೆಟ್ಟಿ ನಿಂತಿದೆ. ಭಾರತ ಇಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ಸಾವಿರ ಸಾವಿರ ಶಾಲಾ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಭಾರತೀಯರನ್ನು ವಿದ್ಯಾವಂತರನ್ನಾಗಿ, ಪರಿಣಿತರನ್ನಾಗಿ ರೂಪಿಸಲು ಮಹತ್ವದ ಹೆಜ್ಜೆಯನ್ನು ಇರಿಸಿದೆ” ಎಂದರು.
“ಸಿವಿಲ್ ಪ್ರಕರಣಗಳಲ್ಲಿ ರಾಜಿಸಂಧಾನ ಕಡ್ಡಾಯಗೊಳಿಸಿ , ಶೀಘ್ರ ನ್ಯಾಯದಾನಕ್ಕೆ ದಿಟ್ಟ ಹೆಜ್ಜೆಯನ್ನಿಟ್ಟು , ಕರ್ನಾಟಕದಲ್ಲಿ ನ್ಯಾಯಕ್ಕಾಗಿ ಕಕ್ಷಿದಾರರು ದಶಕಗಟ್ಟಲೆ ಕಾಯುವುದಕ್ಕೆ ಮುಕ್ತಿ ನೀಡಲಾಗಿದೆ. ಈ ತಿದ್ದುಪಡಿಯು ತಕ್ಷಣದಿಂದ ಕರ್ನಾಟಕದಲ್ಲಿ ಜಾರಿಗೆ ಬಂದಿದೆ. ಕೋರ್ಟಿಗೆ ದಾಖಲಾದ ಪ್ರಕರಣವು ಕೇವಲ 24 ತಿಂಗಳುಗಳಲ್ಲಿ ತಾರ್ಕಿಕ ಅಂತ್ಯವನ್ನು ಕಂಡು ಶೀಘ್ರವಾಗಿ ನ್ಯಾಯ ತಿರ್ಮಾನವಾಗುವ ವ್ಯವಸ್ಥೆ ಜಾರಿಯಿಂದ ಒಂದು ಕ್ರಾಂತಿಕಾರಕ ಬದಲಾವಣೆಯನ್ನು ಕಾಣಲಿದೆ” ಎಂದರು
“ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ಅಭಿವೃದ್ಧಿಯ ಹರಿಕಾರ ಹಸಿವು ಮುಕ್ತ ಕರ್ನಾಟಕ ಮಾಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದು 15-12-2024 ರಂದು ಗದಗ ಜಿಲ್ಲೆಯ ರೋಣ ಪಟ್ಟಣಕ್ಕೆ ಆಗಮಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಲಕ್ಕುಂಡಿಗೆ 03-06-2025 ರಂದು ಆಗಮಿಸಿ ನಮ್ಮ ಹೆಮ್ಮೆಯ ಇತಿಹಾಸ, ಸಂಸ್ಕೃತಿ ಪ್ರತೀಕವಾದ ಲಕ್ಕುಂಡಿಯಲ್ಲಿ ಉತ್ಪನನಕ್ಕೆ ಚಾಲನೆ ನೀಡಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪಾತ್ರ ದೊಡ್ಡದಿದೆ: ಸಚಿವ ಎನ್ ಚಲುವರಾಯಸ್ವಾಮಿ
ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಾದ ಬಿ.ಬಿ.ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ, ಅರಣ್ಯ ವಸತಿ ವಿಹಾರ ಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಕಿಮಠ, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.