ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಆಯವ್ಯಯದಲ್ಲಿ 5,000 ಕೋಟಿ ರೂ. ಅನುದಾನ ನೀಡಿದ್ದಾರೆ. ಆಧ್ಯತೆಯ ಮೇಲೆ ಅನುದಾನ ವೆಚ್ಚ ಮಾಡಬೇಕು ಎಂದು ಕೆಕೆಆರ್ಡಿಬಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಸಕ ಡಾ. ಅಜಯ ಸಿಂಗ್ ಅವರಿಗೆ ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಮನವಿ ಮಾಡಿದ್ದಾರೆ.
ಅಜಯ್ ಸಿಂಗ್ ಅವರಿಗೆ ಪತ್ರ ಬರೆದಿರುವ ಮಲ್ಲಿಕಾರ್ಜುನ ಕಡಕೋಳ, “ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರ ಹುದ್ದೆ ತಮಗೆ ದೊರಕಿದೆ. ಹೆಸರಲ್ಲಷ್ಟೇ ಕಲ್ಯಾಣ ಕರ್ನಾಟಕ. ಅದರ ಉಸಿರ ತುಂಬಾ ಮತ್ತದೇ ಹಳೆಯ ಹೈದ್ರಾಬಾದ್ ಕರ್ನಾಟಕದ ಹಳವಂಡಗಳೇ ತಾಂಡವವಾಡುತ್ತಲಿವೆ. ಏಳು ಜಿಲ್ಲೆಗಳ ಆಡಳಿತವನ್ನು ತಾವು ಚುರುಕುಗೊಳಿ ಅಭಿವೃದ್ಧಿಗೊಳಿಸಬೇಕು” ಎಂದು ಒತ್ತಾಯಿಸಿದರು.
“ಯಾವುದೇ ಸಮಾಜದಲ್ಲಿ ಸುಸ್ಥಿರವಾದ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ನಿರ್ಮಾಣಗೊಂಡರೆ ಎಲ್ಲ ನಾಗರಿಕರ ಬದುಕು ಹಸನಾಗಿರಬಲ್ಲದು. ಸುದೈವಕ್ಕೆ ಕೆಕೆಆರ್ಡಿಬಿ ಅಧ್ಯಕ್ಷರಾಗಿ ನೇಮಕಗೊಂಡಿರುವ ತಾವು ವೈದ್ಯರೇ ಆಗಿದ್ದೀರಿ. ನಿಮಗೆ ಪಬ್ಲಿಕ್ ಹೆಲ್ತ್ ಸುಧಾರಣೆಯ ದಟ್ಟವಾದ ಪರಿಚಯ ಇದ್ದೇ ಇರುತ್ತದೆ. ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟ್ಯಾಂಡರ್ಡ್ ಮಾನದಂಡಗಳ ಅನುಷ್ಠಾನದ ವಿಷಯದಲ್ಲಿ ಕಲ್ಯಾಣ ಕರ್ನಾಟಕ ಬಹಳ ಕೆಳಮಟ್ಟದ್ದಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅನಾರೋಗ್ಯದ ಕೇಂದ್ರಗಳಾಗಿವೆ. ಹಳ್ಳಿಗಳ ಆರೋಗ್ಯ ಉಪಕೇಂದ್ರಗಳು ರೋಗಪೀಡಿತವಾಗಿವೆ. ಗ್ರಾಮದ ಮನೆ ಬಾಗಿಲಿಗೆ ಹೋಗಿ ಮೂಲಭೂತ ಆರೋಗ್ಯ ಸೇವೆ ನೀಡುವ ಆರೋಗ್ಯ ಸಹಾಯಕರು ಉಪಕೇಂದ್ರಗಳಲ್ಲಿ ಕಡ್ಡಾಯವಾಗಿ ವಾಸಿಸಬೇಕು. ವಾಸಯೋಗ್ಯ ಸುಸಜ್ಜಿತ ಆರೋಗ್ಯ ಉಪಕೇಂದ್ರಗಳು ಸಜ್ಜಾಗಬೇಕು” ಎಂದು ಆಗ್ರಹಿಸಿದರು.
“ಉಪಕೇಂದ್ರಗಳು ಕೇವಲ ಗುತ್ತಿಗೆದಾರರ ಹಣದಾಹಕ್ಕಾಗಿ ನಿರ್ಮಾಣಗೊಂಡ ನಿರ್ಜೀವ ಕಟ್ಟಡಗಳಾಗಬಾರದು. ಉದಾಹರಣೆಗೆ ಜೇವರ್ಗಿ ಕ್ಷೇತ್ರದ ಬಹುಪಾಲು ಉಪಕೇಂದ್ರಗಳೇ ತಾಜಾ ಉದಾಹರಣೆ. ಉಪಕೇಂದ್ರಗಳು ಅಭಿವೃದ್ಧಿಯಾದರೆ ಗ್ರಾಮೀಣ ಆರೋಗ್ಯ ಸೇವೆಗಳು ಸದೃಢಗೊಳ್ಳುತ್ತವೆ. ಜನಾರೋಗ್ಯ ಕೇಂದ್ರಿತ ಭಾರತ ಸರ್ಕಾರದ ಪಬ್ಲಿಕ್ ಹೆಲ್ತ್ ಪರಿಕಲ್ಪನೆ ಅನುಷ್ಠಾನಕ್ಕೆ ಬರಬಲ್ಲದು. ಜನರು ಆರೋಗ್ಯಪೂರ್ಣ ಸಮಾಜ ನಿರ್ಮಿಸಬಲ್ಲರು. ಇನ್ನು ಕಲ್ಯಾಣ ಕರ್ನಾಟಕದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಹದಗೆಟ್ಟ ಹೈದ್ರಾಬಾದ್ ಕರ್ನಾಟಕದ ಕತೆಗಳೇ ಆಗಿವೆ. ಅದನ್ನೆಲ್ಲ ದುರಸ್ತಿ ಮಾಡಬಲ್ಲ ಅಧಿಕಾರ ಮತ್ತು ಅವಕಾಶ ತಮಗೆ ದೊರಕಿದೆ. ವೈದ್ಯರಾದ ತಾವು ಆರೋಗ್ಯ ಇಲಾಖೆಗಳನ್ನು ಸುಧಾರಿಸುತ್ತೀರೆಂಬ ಭರವಸೆ ಇದೆ” ಎಂದರು.
“ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣದ ಕ್ಷೇತ್ರಗಳು ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಕೆ ಮಾಡದಷ್ಟು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಹಿಂದುಳಿದಿವೆ. ಅವುಗಳ ಅಂಕಿಅಂಶಗಳು, ಮಾನವ ಅಭಿವೃದ್ಧಿ ಸೂಚ್ಯಂಕಗಳು ಅಕ್ಷರಶಃ ಅಚ್ಚರಿ ಹುಟ್ಟಿಸುವಂತಿವೆ. ಒಣಕಲು ಅಂಕಿಅಂಶಗಳನ್ನು ಸಾದರ ಪಡಿಸುವ ಪಾಂಡಿತ್ಯವನ್ನು ಪ್ರದರ್ಶನ ಮಾಡಲಾರೆ. ನಮ್ಮ ಬಹುಪಾಲು ಸಾಮಾಜಿಕ ಮತ್ತು ಆರ್ಥಿಕ ತಜ್ಞರು ಅವುಗಳನ್ನು ಜ್ಞಾನದ ಬಂಡವಾಳದಂತೆ ಬಳಸಿಕೊಳ್ಳುವುದು ಬಹಳಷ್ಟು ಬಾರಿ ಜಿಗುಪ್ಸೆ ತರಿಸುತ್ತದೆ” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ. ಧ್ಯಾನೇಶ್ವರ ನೀರಗುಡೆ ಅಧಿಕಾರ ಸ್ವೀಕಾರ
“ಶರಣರು, ಸೂಫಿ ಸಂತರು, ತತ್ವಪದಕಾರರ ಆಡುಂಬೊಲವೇ ಆಗಿರುವ ಕಲ್ಯಾಣ ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಮಹತ್ವ ದೊರಕಬೇಕಿದೆ. ಸಂಸ್ಕೃತಿಗೆ ಸಂಬಂಧಿಸಿದಂತೆ ಇಡೀ ಕಲ್ಯಾಣ ಕರ್ನಾಟಕದಲ್ಲಿ ಅಕಾಡೆಮಿಗಳು ಒತ್ತಟ್ಟಿಗಿರಲಿ, ಇದುವರೆಗೆ ಒಂದೇ ಒಂದು ಸಾಂಸ್ಕೃತಿಕ ಪ್ರತಿಷ್ಠಾನ ಸ್ಥಾಪನೆಯಾಗಿಲ್ಲ. ವೈದ್ಯರಾದ ತಮಗೆ ಆರೋಗ್ಯ ಇಲಾಖೆ ಹೆಚ್ಚು ಹತ್ತಿರದ ಕಾರಣ ಇತರೆ ಇಲಾಖೆಗಳ ಕುರಿತು ಪ್ರಸ್ತಾಪಿಸಲಿಲ್ಲ. ಇತರೆ ಎಲ್ಲ ಇಲಾಖೆಗಳ ಅವ್ಯವಸ್ಥೆಗಳನ್ನು ಸರಿಪಡಿಸುವ ಮತ್ತು ಸೂಕ್ತ ಪರಿಹಾರದ ದೃಢಸಂಕಲ್ಪ ಹಾಗೂ ತಾಯ್ತನದ ಇಚ್ಛಾಶಕ್ತಿಯ ಅಗತ್ಯವಿದೆ” ಎಂದು ಕೋರಿದ್ದಾರೆ.
ತಮ್ಮ ಈ ಪತ್ರದಲ್ಲಿ ಈ ಭಾಗದ ಬಗ್ಗೆ ತಮಗಿರುವ ಕಾಳಜಿ ಎದ್ದು ಕಾಣುತ್ತದೆ ಸರ್. ಜನರ ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ ಆರೋಗ್ಯ ಇವುಗಳು ಬಗ್ಗೆ ಹೆಚ್ಚಿನ ಆದ್ಯತೆ ನೀಡಿ ಎಂಬ ತಮ್ಮ ಸಲಹೆಗಳು ತುಂಬಾ ಮಹತ್ವಪೂರ್ಣವಾಗಿವೆ. ಮಾನ್ಯ ಶಾಸಕರು ಇವುಗಳನ್ನು ಗಂಭೀರವಾಗಿ ಪರಿಗಣಿಸಿದರೆ ಇಡೀ ಕಲ್ಯಾಣ ಕರ್ನಾಟಕ ಭಾಗಕ್ಕೆ ಉಪಯುಕ್ತವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಧನ್ಯವಾದಗಳು ಸರ್ 🙏🙏💐💐💐
Good suggestion to respected MLA sir.