ಸ್ವತಂತ್ರ ಭಾರತದಲ್ಲಿ ಇಂದು ನಾವು ಬದುಕಿದ್ದೇವೆ ಎಂದರೆ ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ವಸಾಹತುಶಾಹಿಯ ಕಪಿಮುಷ್ಠಿಯಿಂದ ನಲುಗಿ ನರಳಿದಂತಹ ಸಹಸ್ರಾರು ಹಿರಿಯ ಜೀವಗಳ ಹಾಗೂ ಸ್ವಾತಂತ್ರ ಹೋರಾಟಗಾರರ ಬಲಿದಾನವೇ ಕಾರಣ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ತಹಶೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.
ಕೊರಟಗೆರೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾದ 79ನೇ ಭಾರತ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಧ್ವಜರೋಹಣ ನೆರವೇರಿಸಿ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,
ಸ್ವಾತಂತ್ರ್ಯದ ನೆರಳಿನಲ್ಲಿ ಬದುಕುತ್ತಿರುವ ನಾವು ನೀವೆಲ್ಲರೂ ಸ್ವಚ್ಛಂದದ ಸ್ವಾತಂತ್ರ್ಯದ ಹಕ್ಕಿಗಳು. ಸ್ವಾತಂತ್ರ್ಯ ಕೇವಲ ಬದುಕುವುದಕೋಸ್ಕರ ಅಲ್ಲ. ಸಂವಿಧಾನದ ಆಶಯದಲ್ಲಿ ದೇಶದ ಘನತೆ, ಗೌರವ, ಸಂಸ್ಕಾರ, ಸಂಪ್ರದಾಯ, ಜಲ, ನೆಲವನ್ನು ರಕ್ಷಿಸುವುದಲ್ಲದೇ ನಾಡಿನ ಪ್ರಗತಿ-ಅಭಿವೃದ್ಧಿಗೆ ಶ್ರಮಿಸುವುದು ನಮ್ಮ ನಿಮ್ಮೇಲ್ಲರಾ ಆಧ್ಯ ಕರ್ತವ್ಯ. ಪ್ರಜಾಪ್ರಭುತ್ವದ ಸ್ಥಿರ ಪ್ರಗತಿಯು ಸಾಮಾಜಿಕ ಪ್ರಜಾಪ್ರಭುತ್ವದ ಬಲವರ್ತನೆಯ ಕಡೆಗೆ ಸಾಧಿಸಿದ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಸಿಕ್ಕಿ 79 ವರ್ಷ ಪೂರೈಸಿದರೂ ದೇಶದಲ್ಲಿ ಜಾತಿ ವ್ಯವಸ್ಥೆಯ ಆಧಾರದಲ್ಲಿ ಅಪರಾಧಗಳು ನಡೆಯುತ್ತಿರುವುದು ವಿಷಾಧನೀಯ. 19ನೇ ಶತಮಾನದಲ್ಲಿ ಮಹಿಳೆಯರ ಕುರಿತಾಗಿ ಇದ್ದಂತಹ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಹಾಕಿರುವುದೇ ವಿಶ್ವದ ಅತಿದೊಡ್ಡ ಭಾರತದ ಸಂವಿಧಾನ.
2023-24ನೇ ಸಾಲಿನಿಂದ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಈ ಮೂಲಕ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದರೆ ಕರ್ನಾಟಕ ಭಾರತದಲ್ಲೇ ಅತಿ ಹೆಚ್ಚು ತಲಾದಾಯ ಹೊಂದಿರುವ ದೇಶದ ಎರಡನೇ ರಾಜ್ಯವಾಗಿದೆ ಎಂದರು.

ಹಲವು ಕ್ಷೇತ್ರದ ಸಾಧಕರಿಗೆ ಗೌರವ
79 ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಭಾರತದ ಸೇನೆಯಲ್ಲಿ, ಪೋಲಿಸ್ ಇಲಾಖೆಯಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ ಹಾಗೂ ನಗರದ ಸ್ವಚ್ಛತೆಯಲ್ಲಿ ನಿಷ್ಠೆಯಿಂದ ಪ್ರಮಾಣಿಕ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕ ಮಹಿಳೆಗೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಮೆರಗು
79ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಥ ಸಂಚಲನ ಮೂಲಕ ಹೆಜ್ಜೆ ಹಾಕಿ ಗಣ್ಯರಿಗೆ ಗೌರವ ಸೂಚಿಸಿದರು. ಶಾಲಾ ಮಕ್ಕಳು ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಅಂಶವನ್ನು ನೃತ್ಯದಲ್ಲಿ ಅಳವಡಿಸಿಕೊಂಡು ದೇಶದ ಇತಿಹಾಸದ ಬಗ್ಗೆ ಪ್ರತಿಯೊಬ್ಬರಿಗೂ ಅರ್ಥೈಸಿದ್ದು ಕಾರ್ಯಕ್ರಮದಲ್ಲಿ ಮರೆಗು ತಂದು ವಿಶೇಷವಾಗಿತ್ತು.
ವಾಸವಿ ಯುವಜನ ಸಂಘದ ಅಧ್ಯಕ್ಷ ಬಾಲಾಜಿ ದರ್ಶನ್, ಉಪಾಧ್ಯಕ್ಷ ಸಾಗರ್ ಹೆಚ್.ಪಿ, ಕಾರ್ಯದರ್ಶಿ ಹೇಮಂತ್, ಸಹ ಕಾರ್ಯದರ್ಶಿ ವರುಣ್, ಖಚಾಂಚಿ ಸುಭಾಷ್ ಹಾಗೂ ನಿರ್ದೇಶಕರು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸುಮಾರು 2000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದ್ದು, ಸಮಾಜ ಸೇವಕ ಮಂಜುನಾಥ್ ಸ್ನೇಹಿತರಿಂದ ಮಕ್ಕಳಿಗೆ ಉಚಿತ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಿ ಈ ಸುದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪ.ಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಉಸ್ನಾಫಾರಿಯಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ, ತಾ.ಪಂ ಇಓ ಅಪೂರ್ವ, ಸಿಪಿಐ ಅನಿಲ್, ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷ ಕೆ.ಆರ್ ಓಬಳರಾಜು, ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶ್ಮೂರ್ತಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಕಸಾಪ ಅಧ್ಯಕ್ಷ ಈರಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ್ ನಾರಾಯಣ್, ಅರಕೆರೆ ಶಂಕರ್, ಪ.ಪಂ ಮುಖ್ಯಾಧಿಕಾರಿ ಉಮೇಶ್, ಸದಸ್ಯರಾದ ಲಕ್ಷ್ಮೀನಾರಾಯಣ್, ಮಂಜುಳ ಗೋವಿಂದರಾಜು, ಮಾಜಿ ಅಧ್ಯಕ್ಷ ನಯಾಜ್ ಅಹಮದ್ ಸೇರಿದಂತೆ ಇತರರು ಇದ್ದರು.