ಪ್ರಧಾನಿ ಮೋದಿಯವರು, ತಮ್ಮ ವೈಯಕ್ತಿಕ ಮತ್ತು ಸಾಂಸ್ಥಿಕ ಲಾಭಕ್ಕಾಗಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ರಾಜಕೀಕರಣಗೊಳಿಸಿ, ಸ್ವಾತಂತ್ರ್ಯ ಚಳವಳಿಗೆ ಕಿಂಚಿತ್ತೂ ಕೊಡುಗೆ ನೀಡದ ಆರ್ಎಸ್ಎಸ್ಅನ್ನು ಹೊಗಳಿರುವುದು ಪ್ರಜಾಪ್ರಭುತ್ವಕ್ಕೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅಪಮಾನ...
ಭಾರತವು ನಿನ್ನೆ (ಆಗಸ್ಟ್ 15) ತನ್ನ 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸುವುದಕ್ಕಿಂತ ಮಿಗಿಲಾಗಿ ತಮ್ಮ ಮಾತೃ ಸಂಘಟನೆ ಆರ್ಎಸ್ಎಸ್ಅನ್ನು ಹಾಡಿಹೊಗಳಿದ್ದಾರೆ. ಕೃತಜ್ಞತೆ ಸಲ್ಲಿಸಿದ್ದಾರೆ.
ತಮ್ಮ ಭಾಷಣದಲ್ಲಿ ಆರ್ಎಸ್ಎಸ್ಅನ್ನು ಕೊಂಡಾಡಿದ ಮೋದಿ, ”100 ವರ್ಷಗಳ ಹಿಂದೆ ಒಂದು ಸಂಘಟನೆ ಹುಟ್ಟಿತು, ಅದುವೇ ಆರ್ಎಸ್ಎಸ್. ಸಂಘದ 100 ವರ್ಷಗಳ ಸೇವೆಯು ಅದ್ಭುತವಾದುದ್ದು. ಸಂಘದ ಸ್ವಯಂಸೇವಕರು ಮಾತೃಭೂಮಿಯ ಕಲ್ಯಾಣಕ್ಕಾಗಿ ವ್ಯಕ್ತಿ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣದ ಸಂಕಲ್ಪವನ್ನು ಪೂರೈಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಸೇವೆ, ಸಮರ್ಪಣೆ, ಸಂಘಟನೆ ಮತ್ತು ಅಪ್ರತಿಮ ಶಿಸ್ತು ಆರ್ಎಸ್ಎಸ್ನ ಗುರುತು. ಒಂದು ರೀತಿಯಲ್ಲಿ ಆರ್ಎಸ್ಎಸ್ ವಿಶ್ವದ ಅತಿದೊಡ್ಡ ಸರ್ಕಾರೇತರ ಸಂಸ್ಥೆ (ಎನ್ಜಿಒ)” ಎಂದಿದ್ದಾರೆ.
ಸ್ವಾತಂತ್ರ್ಯ ದಿನದಂದು ಮೋದಿ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಹಾಡಿ ಹೊಗಳಿದ್ದು ತೀವ್ರ ವಿರೋಧಕ್ಕೆ ಗುರಿಯಾಗಿದೆ. ಮೋದಿ ಅವರು ಸ್ವಾತಂತ್ರ್ಯ ದಿನವನ್ನು ಆರ್ಎಸ್ಎಸ್ ಸಂಸ್ಥಾಪನಾ ದಿನವೆಂದು ಗೊಂದಲಕ್ಕೊಳಗಾದಂತಿದೆ ಎಂಬ ವ್ಯಂಗ್ಯಗಳೂ ಕೇಳಿಬಂದಿವೆ.
ವಿಪಕ್ಷಗಳು ಮೋದಿ ಅವರನ್ನು ಟೀಕಿಸಿದ್ದು, ”ತಮ್ಮ ಭಾಷಣದಲ್ಲಿ ಆರ್ಎಸ್ಎಸ್ಅನ್ನು ಉಲ್ಲೇಖಿಸಿದ್ದು, ಸಾಂವಿಧಾನಿಕ, ಜಾತ್ಯತೀತ ಗಣರಾಜ್ಯದ ಮನೋಭಾವದ ಸ್ಪಷ್ಟ ಉಲ್ಲಂಘನೆ. ಮುಂದಿನ ತಿಂಗಳು ಅವರು 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದು, ಅಧಿಕಾರ ಉಳಿಸಿಕೊಳ್ಳಲು ಸಂಘಟನೆಯನ್ನು ಸಮಾಧಾನಪಡಿಸುವ ಹತಾಶ ಪ್ರಯತ್ನ ಮಾಡಿದ್ದಾರೆ” ಎಂದು ಟೀಕಿಸಿವೆ.
ಅವರ ರಾಜಕೀಯ ಲಾಲಸೆ ಏನೇ ಇರಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಕಿಂಚಿತ್ತೂ ಭಾಗಿಯಾಗದ, ಚಳವಳಿಗೆ ಕೊಡುಗೆ ನೀಡದ ಆರ್ಎಸ್ಎಸ್ಅನ್ನು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ವೈಭವೀಕರಿಸುವುದು ಸ್ವಾತಂತ್ರ್ಯ ಹೋರಾಟಕ್ಕೆ, ಹೋರಾಟಗಾರರಿಗೆ ಮಾಡಿದ ಅವಮಾನ. ಆರ್ಎಸ್ಎಸ್ ಮತ್ತು ಅದರ ಬೆಂಬಲಿಗರು ಬ್ರಿಟಿಷ್ ಕಾಲಾಳುಗಳಾಗಿ ಬ್ರಿಟಿಷರ ಸೇವೆ ಸಲ್ಲಿಸಿದ್ದರು ಎಂಬುದನ್ನು ಇತಿಹಾಸ ಮತ್ತೆ ಮತ್ತೆ ನೆನಪಿಸುತ್ತಿದೆ.
ಸ್ವಾತಂತ್ರ್ಯ ಚಳವಳಿಯಲ್ಲಿ ಆರ್ಎಸ್ಎಸ್ ಮಾಡಿದ್ದಾದರೂ ಏನು? ಆರ್ಎಸ್ಎಸ್ಅನ್ನು ಡಾ. ಕೇಶವ ಬಲಿರಾಮ ಹೆಡಗೇವಾರ್ 1925ರಲ್ಲಿ ಹುಟ್ಟುಹಾಕಿದರು. ಇದೊಂದು ಬ್ರಾಹ್ಮಣ/ಮೇಲ್ಜಾತಿ ಸಂಘಟನೆ. ಬ್ರಾಹ್ಮಣರನ್ನು ರಕ್ಷಿಸುವ, ಜಾತೀಯತೆ-ಶ್ರೇಣಿವ್ಯವಸ್ಥೆಯನ್ನು ಪ್ರತಿಪಾದಿಸುವ, ಮಹಿಳೆಯರನ್ನು 2ನೇ ದರ್ಜೆಯ ಪ್ರಜೆಗಳಂತೆ ನೋಡುವ ಮನುವಾದಿ ಸಿದ್ಧಾಂತವೇ ಇದರ ಜೀವಾಳ.
ಈವರೆಗೆ ಆರ್ಎಸ್ಎಸ್ಗೆ 7 ಮಂದಿ ಸರಸಂಘಚಾಲಕರು (ಅಧ್ಯಕ್ಷರು) ಆಗಿದ್ದಾರೆ. ಅವರಲ್ಲಿ, ಆರು ಮಂದಿ ಬ್ರಾಹ್ಮಣರು ಮತ್ತು ಓರ್ವ ಠಾಕೂರ್, ಈವರೆಗೆ ಆರ್ಎಸ್ಎಸ್ನಲ್ಲಿ ಒಬಿಸಿ, ದಲಿತ, ಎಸ್ಟಿ ಸಮುದಾಯದವರು ಅಧ್ಯಕ್ಷರಾಗಿಲ್ಲ. ಗಮನಾರ್ಹವಾಗಿ, ಮಹಿಳೆಯರಿಗೂ ಮುಖ್ಯಸ್ಥರ ಸ್ಥಾನ ದೊರೆತಿಲ್ಲ.
ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಹೋರಾಟದಿಂದ ದೂರ ಉಳಿದಿದ್ದ ಆರ್ಎಸ್ಎಸ್, ಹಿಂದುತ್ವವಾದ, ರಾಷ್ಟ್ರೀಯವಾದವನ್ನು ಬಿತ್ತುವುದರಲ್ಲಿ, ಸ್ವಾತಂತ್ರ್ಯ ಹೋರಾಟವನ್ನು ಹಿಂದು-ಮುಸ್ಲಿಂ ಆಧಾರದಲ್ಲಿ ಒಡೆಯುವ, ಕೋಮುವಾದವನ್ನು ಪ್ರಚೋದಿಸುವ ಕುತಂತ್ರದಲ್ಲಿ ತೊಡಗಿತ್ತು. ಆರ್ಎಸ್ಎಸ್ ಪೂಜಿಸುವ ಸಾವರ್ಕರ್, ಬ್ರಿಟಿಷರಿಗೆ ಕ್ಷಮೆಯಾಚಿಸಿ, ಜೈಲಿನಿಂದ ಹೊರಬಂದವರು. ಆತ, ಹಿಂದು ರಾಷ್ಟ್ರದ ಪರಿಕಲ್ಪನೆಯೊಂದಿಗೆ, 2 ರಾಷ್ಟ್ರ ಸಿದ್ಧಾಂತವನ್ನು ರೂಪಿಸಿದ್ದರು. ಭಾರತವನ್ನು ಹಿಂದು-ಮುಸ್ಲಿಂ ರಾಷ್ಟ್ರಗಳಾಗಿ ವಿಭಜಿಸಬೇಕೆಂದು 1923ರಲ್ಲಿ ಮೊದಲ ಬಾರಿಗೆ ಪ್ರತಿಪಾದಿಸಿದ್ದರು.
ಭಾರತದ ಸ್ವಾತಂತ್ರ್ಯ ಹೋರಾಟದ ಮೈಲುಗಲ್ಲುಗಳಾದ ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿಯನ್ನು ಆರ್ಎಸ್ಎಸ್ ತೀವ್ರವಾಗಿ ವಿರೋಧಿಸಿತ್ತು. ಬದಲಾಗಿ, ಮುಸ್ಲಿಮರು ಬ್ರಿಟಿಷರಿಗಿಂತ ದೊಡ್ಡ ಶತ್ರುಗಳು ಎಂಬ ಕೋಮುದ್ವೇಷವನ್ನು ಹರಡುವಲ್ಲಿ ನಿರತವಾಗಿತ್ತು. ಬಾಂಬೆಯಲ್ಲಿ ಬ್ರಿಟಿಷರು ತೊಂದರೆಯಲ್ಲಿದ್ದಾಗ, ನೆರವು ನೀಡಿದ್ದಕ್ಕಾಗಿ ಆರ್ಎಸ್ಎಸ್ಅನ್ನು ಬ್ರಿಟಿಷ್ ಸೈನ್ಯವು ಹೊಗಳಿತ್ತು.
ಸ್ವಾತಂತ್ರ್ಯಾನಂತರ, 1949ರ ಜನವರಿಯಲ್ಲಿ ಸಂವಿಧಾನ ಸಭೆ ನಡೆದಾಗ, ‘ಭಾರತೀಯ ಸಂವಿಧಾನ’ವನ್ನು ವಿರೋಧಿಸಿದ್ದ ಆರ್ಎಸ್ಎಸ್, ‘ಮನುಸ್ಮೃತಿ’ಯೇ ತಮ್ಮ ಸಂವಿಧಾನ ಎಂದು ಪ್ರತಿಪಾದಿಸಿತ್ತು. ”ಭಾರತದ ಹೊಸ ಸಂವಿಧಾನದಲ್ಲಿನ ಕೆಟ್ಟ ಅಂಶವೆಂದರೆ, ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ಮನುಸ್ಮೃತಿ ಪ್ರಪಂಚದ ಮೆಚ್ಚುಗೆಯನ್ನು ಪಡೆದಿದೆ” ಎಂದು ಹೇಳಿಕೊಂಡಿತ್ತು.
ಭಾರತದ ಸಂವಿಧಾನ ಮತ್ತು ರಾಷ್ಟ್ರಧ್ವಜವನ್ನು ಇಂದಿಗೂ ಆರ್ಎಸ್ಎಸ್ ಒಪ್ಪಿಕೊಂಡಿಲ್ಲ. ನಿರಂತರವಾಗಿ ಸಂವಿಧಾನವನ್ನು ಬದಲಿಸುವ ಮಾತನಾಡುತ್ತಲೇ ಇದೆ. ರಾಷ್ಟ್ರಧ್ವಜದ ಮೇಲೆ ದ್ವೇಷ ಕಾರುತ್ತಿದೆ. ಭಾರತವು ಸ್ವಾತಂತ್ರ್ಯಗೊಂಡು 50 ವರ್ಷಗಳ ಕಾಲ ಆರ್ಎಸ್ಎಸ್ ತನ್ನ ಕಚೇರಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ. ಬಿಜೆಪಿ ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ – 2002ರಲ್ಲಿ ಸಂಘವು ರಾಷ್ಟ್ರಧ್ವಜವನ್ನು ಹಾರಿಸಿತ್ತು.
ಸ್ವತಂತ್ರ ಭಾರತವು ಹಿಂದು, ಮುಸ್ಲಿಂ, ದಲಿತರು/ಅಸ್ಪೃಶ್ಯರು, ಮಹಿಳೆಯರು– ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಬೇಕೆಂದು ಬಯಸಿದ್ದ ಗಾಂಧಿ ಅವರನ್ನು ಕೊಂದ ಗೋಡ್ಸೆ ಆರ್ಎಸ್ಎಸ್ನಲ್ಲಿದ್ದವನು. ಸ್ವಾತಂತ್ರ್ಯ ಚಳವಳಿಯ ನೇತಾರನನ್ನು ಕೊಂದ ಗೋಡ್ಸೆಯನ್ನು ಸಂಘ ಪೂಜಿಸುತ್ತದೆ. ಗಾಂಧಿ ಅವರ ಹತ್ಯೆಯ ಕಾರಣಕ್ಕಾಗಿ ಆರ್ಎಸ್ಎಸ್ಅನ್ನು ನಿಷೇಧಿಸಲಾಗಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ.
ಈ ಲೇಖನ ಓದಿದ್ದೀರಾ?: ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್ಎಸ್ಎಸ್ ಕಗ್ಗಂಟು?
ಭಾರತದ ಸಂವಿಧಾನ ವಿರೋಧಿ, ಸಮಾನತೆ ವಿರೋಧಿ, ಸಾವರ್ಕರ್-ಗೋಡ್ಸೆಯನ್ನು ಪೂಜಿಸುವ, ಸ್ವಾತಂತ್ರ್ಯ ಚಳವಳಿಯಲ್ಲಿ ಕವಡೆ ಕಾಸಿನ ಪಾತ್ರವನ್ನೂ ನಿರ್ವಹಿಸದ ಆರ್ಎಸ್ಎಸ್ಅನ್ನು ಮೋದಿ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೊಗಳಿರುವುದು ಅಕ್ಷಮ್ಯ. ಇದು, ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನಗಳನ್ನು ಮಾಡಿದ ಭಗತ್ ಸಿಂಗ್ ಮತ್ತು ಸಂಗಾತಿಗಳು, ಚಂದ್ರಶೇಖರ್ ಆಜಾದ್, ಸುಭಾಷ್ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ, ಮಂಗಲ್ ಪಾಂಡೆ, ಉದ್ದಮ್ ಸಿಂಗ್, ಬಿರ್ಸಾ ಮುಂಡ, ಅಲ್ಲೂರಿ ಸೀತಾರಾಮ ರಾಜು, ಲಕ್ಷ್ಮಿ ಪಾಂಡಾ, ಮೌಲ್ವಿ ಅಹ್ಮದುಲ್ಲಾ ಶಾ, ಖಾನ್ ಅಬ್ದುಲ್ ಗಫಾರ್ ಖಾನ್, ಗಾಂಧಿ ಸೇರಿದಂತೆ ಮಹಾನ್ ವ್ಯಕ್ತಿಗಳಿಗೆ ಮಾಡಿದ ಅಪಮಾನ.
ಬಿಜೆಪಿಯಲ್ಲಿ ನಿವೃತ್ತಿ ವಯಸ್ಸು 75 ವರ್ಷ ಎಂಬ ನಿಯಮವನ್ನು ಮೋದಿ-ಶಾ ಜೋಡಿಯೇ ತಂದಿತ್ತು. ಇದೇ ನಿಯಮದಡಿ ಎಲ್.ಕೆ ಅಡ್ವಾಣಿ, ಜಸ್ವಂತ್ ಸಿಂಗ್, ಮುರಳಿ ಮನೋಹರ್ ಜೋಶಿ ಸೇರಿದಂತೆ ಹಲವರನ್ನು ಮೂಲೆ ಗುಂಪು ಮಾಡಿದರು. ಈಗ, ಸೆಪ್ಟೆಂಬರ್ 17ರಂದು ಮೋದಿ ಅವರೂ 75 ವರ್ಷ ಪೂರೈಸಲಿದ್ದಾರೆ. ತಾವೇ ತಂದ ನಿಯಮದಂತೆ ಅವರು ಮುಂದಿನ ತಿಂಗಳು ನಿವೃತ್ತರಾಗಬೇಕು. ಆರ್ಎಸ್ಎಸ್ ಕೂಡ ಮೋದಿ ನಿವೃತ್ತಿಯನ್ನು ಎದುರು ನೋಡುತ್ತಿದೆ ಎಂಬ ಅಭಿಪ್ರಾಯಗಳಿವೆ. ಆದ್ದರಿಂದ, ಅಧಿಕಾರ ಉಳಿಸಿಕೊಳ್ಳಲು ಆರ್ಎಸ್ಎಸ್ಅನ್ನು ಓಲೈಕೆ ಮಾಡಲು ಮೋದಿ ಮುಂದಾಗಿದ್ದಾರೆ. ತಮ್ಮ ವೈಯಕ್ತಿಕ ಮತ್ತು ಸಾಂಸ್ಥಿಕ ಲಾಭಕ್ಕಾಗಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ರಾಜಕೀಕರಣಗೊಳಿಸಿ, ಸ್ವಾತಂತ್ರ್ಯ ಚಳವಳಿಗೆ ಕಿಂಚಿತ್ತೂ ಕೊಡುಗೆ ನೀಡದ ಸಂಸ್ಥೆಯನ್ನು ಹೊಗಳಿರುವುದು ಪ್ರಜಾಪ್ರಭುತ್ವ ನೀತಿಯ ಉಲ್ಲಂಘನೆ ಮತ್ತು ಅಪಮಾನ. ಮೋದಿ ಅವರು ದೇಶವಾಸಿಗಳಲ್ಲಿ ಕ್ಷಮೆ ಕೇಳುವುದು ಒಳಿತು.