“ಜನರ ನ್ಯಾಯಬದ್ಧ ಹಕ್ಕುಗಳನ್ನು ಅಧಿಕಾರಿಗಳು ಮೊಟಕುಗೊಳಿಸಲು ಸಾಧ್ಯವಿಲ್ಲ. ಹಾಗೆಂದು ಎಲ್ಲ ಪ್ರಕರಣಗಳನ್ನೂ ಮನಸೋ ಇಚ್ಚೆ ಸ್ವೀಕರಿಸುವುದೂ ಸರಿಯಲ್ಲ” ಎಂದು ಉಪ ವಿಭಾಗಾಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕಿವಿಮಾತು ಹೇಳಿದರು.
ಶನಿವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉಪ ವಿಭಾಗಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ಕೆಲ ಅಧಿಕಾರಿಗಳು ಕಾನೂನು ಮೀರಿ ತಮ್ಮ ವ್ಯಾಪ್ತಿಗೆ ಬರದ ಸಿವಿಲ್ ಮೊಕದ್ದಮೆಗಳನ್ನೂ ದಾಖಲಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇದು ಸರಿಯಲ್ಲ. ಸಾರ್ವಜನಿಕರಿಗೆ ತಮ್ಮ ಸಿವಿಲ್ ಮೊಕದ್ದಮೆಗಳು ಎಸಿ ನ್ಯಾಯಾಲಯದಲ್ಲೇ ಮುಕ್ತಾಯವಾಗಲಿ ಎಂಬ ಅಭಿಲಾಷೆ ಇರುತ್ತದೆ. ನಾಗರಿಕರಿಗೆ ಕಾನೂನು ರೀತಿ ನೀಡಲಾದ ಹಕ್ಕನ್ನು ಯಾರೂ ಮೊಟಕುಗೊಳಿಸುವುದು ಸಾಧ್ಯವಿಲ್ಲ. ಆದರೆ ಸಿವಿಲ್ ನ್ಯಾಯಾಲಯಗಳಲ್ಲಿ ವಿಚಾರಣೆಗೊಳಪಡಬೇಕಾದ ಪ್ರಕರಣಗಳನ್ನು ನಿಯಮ ಮೀರಿ ದಾಖಲಿಸಿಕೊಳ್ಳಲು ನಿಮಗೆ ಅಧಿಕಾರ ಕೊಟ್ಟವರು ಯಾರು” ಎಂದು ಕಿಡಿಕಾರಿದರು.
“ಬಹುತೇಕ ಎಲ್ಲಾ ಅಧಿಕಾರಿಗಳೂ ತುಂಬಾ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲಿಗೇ ಹೋದ್ರೂ ಜನ ಇಲಾಖೆಯಲ್ಲಿ ಆಗುತ್ತಿರುವ ಒಳ್ಳೆಯ ಜನಸ್ನೇಹಿ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆದರೆ, ಯಾರೋ ಕೆಲ ಅಧಿಕಾರಿಗಳಿಂದ ಉತ್ತಮ ಕೆಲಸ ಮಾಡುತ್ತಿರುವವರಿಗೂ ಕೆಟ್ಟ ಹೆಸರು ಕೂಡ ಬರುತ್ತಿದೆ. ಅಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ಸರಿ ದಾರಿಗೆ ತರುವುದು ಹೇಗೆ ಎಂಬುದು ಕೂಡ ನಮಗೆ ಗೊತ್ತಿದೆ” ಎಂದೂ ಸಚಿವರು ಎಚ್ಚರಿಕೆ ನೀಡಿದರು.
ಕೆಲವು ಉಪ ವಿಭಾಗಾಧಿಕಾರಿಗಳು ತಮ್ಮ ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿ ಕಾನೂನು ಮೀರಿ ಆದೇಶ ಹೊರಡಿಸಿರುವುದು ಕಂಡುಬಂದಿದೆ ಎಂದು ಸಭೆಯಲ್ಲಿ ಅಸಮಾಧಾನ ಹೊರಹಾಕಿದ ಸಚಿವರು, “ಎಸಿಗಳು ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶಗಳು ನ್ಯಾಯ ಸಮ್ಮತವಾಗಿಲ್ಲ. ರಾಜ್ಯದ ಐದು ಜಿಲ್ಲೆಗಳ ಎಸಿಗಳು ಅಧಿಕಾರ ಮೀರಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವಿಚಾರಣೆಗೆ ಸೂಚಿಸಲಾಗಿದ್ದು, ವರದಿ ಕೈಸೇರಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಕಾನೂನು ಮೀರಿ ವರ್ತಿಸಿದರೆ ನಾವೂ ಸಹ ಏನೂ ಮಾಡಲಾಗುವುದಿಲ್ಲ. ನಾಳೆ ನೀವುಗಳು ಕೋರ್ಟ್ ಮೊರೆ ಹೋದರೆ ನಾವೂ ಕೂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಲೂ ಸಿದ್ದರಿದ್ದೇವೆ” ಎಂದು ಎಚ್ಚರಿಸಿದರು.
“ಮುಂದಿನ ದಿನಗಳಲ್ಲಿ ಉಪ ವಿಭಾಗಾಧಿಕಾರಿಗಳು ತಮ್ಮ ಆದೇಶ ಪ್ರತಿಯಲ್ಲಿ ಎಲ್ಲಾ ಪ್ರಕರಣಗಳನ್ನೂ ಯಾವ ಕಾಯ್ದೆ ಮತ್ತು ಸೆಕ್ಷನ್ ಅಡಿಯಲ್ಲಿ ಆರ್ಡರ್ ಮಾಡಲಾಗಿದೆ? ಅದನ್ನು ಮಾಡೋಕೆ ಕಾನೂನಲ್ಲಿ ತಮಗೆ ಅಧಿಕಾರ ಇದೆಯಾ? ಎಂಬ ಮಾಹಿತಿಯನ್ನೂ ಸ್ಪಷ್ಟವಾಗಿ ನಮೂದಿಸಬೇಕು” ಎಂದು ಸೂಚಿಸಿದರು.
ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಎರಡು ತಿಂಗಳಲ್ಲಿ ಮುಗಿಸಬೇಕು ಎಂದು ಗುರಿ ನಿಗದಿಪಡಿಸಿದರೆ, ಆರು ತಿಂಗಳಾದರೂ ಗುರಿ ಮುಟ್ಟಲು ಸಾಧ್ಯವಾಗದೆ ಇರುವುದು ಸರಿಯಲ್ಲ. ಹೀಗಾಗಿ ಶೀಘ್ರ ಎಲ್ಲಾ ಬಾಕಿ ಪ್ರಕರಣಗಳನ್ನೂ ಇತ್ಯರ್ಥಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎಸಿ ನ್ಯಾಯಾಲಯಗಳಲ್ಲಿ ಆರು ತಿಂಗಳ ಅವಧಿ ಮೀರಿದ 18,000 ಪ್ರಕರಣಗಳು ಬಾಕಿ ಇವೆ. ಒಂದು ವರ್ಷ ಮೀರಿದ 14,000 ಹಾಗೂ ಐದು ವರ್ಷಕ್ಕೂ ಮೇಲ್ಪಟ್ಟ 4,000 ಪ್ರಕರಣಗಳು ಬಾಕಿ ಇವೆ. ಈ ಪ್ರಕರಣಗಳನ್ನು ಏನಾದರೂ ಮಾಡಿ ನ್ಯಾಯಬದ್ಧ ಇತ್ಯರ್ಥಕ್ಕೆ ಒಳಪಡಿಸಲೇಬೇಕು. ಅಲ್ಲದೆ, ನಾಲ್ಕು ತಿಂಗಳಿಗಿಂತ ಅಧಿಕ ಅವಧಿಗೆ ಎಸಿ ನ್ಯಾಯಾಲಯದಲ್ಲಿ ಯಾವ ಪ್ರಕರಣಗಳನ್ನೂ ಉಳಿಸಿಕೊಳ್ಳಬಾರದು ಎಂದು ಅವರು ತಾಕೀತು ಮಾಡಿದರು.
ಮೊಬೈಲ್ನಲ್ಲಿ ತಲ್ಲೀನರಾಗಿದ್ದ ಚಿಕ್ಕಮಗಳೂರು ಎಸಿ: ತರಾಟೆಗೆ ತೆಗೆದುಕೊಂಡ ಸಚಿವರು
ಸಭೆ ಆರಂಭವಾಗುತ್ತಿದ್ದಂತೆ ಚಿಕ್ಕಮಗಳೂರು ಎಸಿ ಸುದರ್ಶನ ಅವರನ್ನು ಸಚಿವ ಕೃಷ್ಣ ಬೈರೇಗೌಡ ಅವರು ತರಾಟೆಗೆ ತೆಗೆದುಕೊಂಡರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಆರಂಭಿಸುತ್ತಿದ್ದಂತೆ ಉಪ ವಿಭಾಗಾಧಿಕಾರಿಗಳಾದ ಸುದರ್ಶನ್ ಮೊಬೈಲ್ನಲ್ಲಿ ಮಾತನಾಡುತ್ತಾ ತಲ್ಲೀನರಾಗಿದ್ದರು. ಈ ವೇಳೆ ಅಧಿಕಾರಿ ವರ್ತನೆ ವಿರುದ್ಧ ಬೇಸರ ಹೊರಹಾಕಿದ ಸಚಿವರು, “ಸ್ವಾಮಿ, ನೀವು ನನಗೆ ಗೌರವ ನೀಡುವ ಅವಶ್ಯಕತೆ ಇಲ್ಲ. ಕನಿಷ್ಠ ನನ್ನ ಕುರ್ಚಿಗಾದರೂ ಗೌರವ ನೀಡಿ. ನಾನು ನನ್ನ ಸ್ವಂತ ಕೆಲಸಕ್ಕಾಗಿ ಸಭೆ ನಡೆಸುತ್ತಿಲ್ಲ. ಇಲಾಖೆಯನ್ನು ಜನಸ್ನೇಹಿಗೊಳಿಸುವ ಸಂಬಂಧ ಈ ಸಭೆ ನಡೆಸಲಾಗುತ್ತಿದ್ದು ಅದಕ್ಕಾದರೂ ಚೂರು ಗೌರವ ಇರಲಿ” ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ಮನೆಗಳ್ಳತನ : ಓರ್ವ ಮಹಿಳೆ ಸಹಿತ ಆರು ಮಂದಿ ಆರೋಪಿಗಳ ಬಂಧನ
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಹಾಗೂ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.
