ಗುಬ್ಬಿ ತಾಲ್ಲೂಕು ಮಟ್ಟದ 6 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದಿನ ನವಂಬರ್ ಮಾಹೆಯಲ್ಲಿ ಒಂದು ದಿನದ ಕಾರ್ಯಕ್ರಮವಾಗಿ ಅದ್ದೂರಿಯಾಗಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಿರ್ಧರಿಸಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರೊಟ್ಟಿಗೆ ದಿನಾಂಕ ನಿಗದಿ ಹಾಗೂ ಈ ಸಭೆಯ ನಿರ್ಣಯ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ನಿವೃತ್ತ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಅಧ್ಯಕ್ಷತೆ ವಹಿಸಿ ಸಮ್ಮೇಳನದ ರೂಪುರೇಷೆಗಳನ್ನು ಸಾಹಿತ್ಯಾಸಕ್ತಿಗಳ ಜೊತೆ ಚರ್ಚಿಸಿ ಸಮ್ಮೇಳನವನ್ನು ಗುಬ್ಬಿ ಪಟ್ಟಣದಲ್ಲಿ ನಡೆಸಲು ಸಭೆಯ ಸಮ್ಮತಿ ಪಡೆಯಲಾಯಿತು.
ಪರಿಷತ್ತಿನ ನಿರ್ಣಯದಂತೆ ತಾಲ್ಲೂಕು ಮಟ್ಟದ ಸಮ್ಮೇಳನ ಒಂದು ದಿನಕ್ಕೆ ಸೀಮಿತ ಮಾಡಬೇಕಿದೆ. ಜಿಲ್ಲಾ ಮಟ್ಟದ ಸಮ್ಮೇಳನ ಎರಡು ದಿನ ನಡೆಸಲು ಅವಕಾಶ ಇದೆ ಎಂಬ ಚರ್ಚೆ ಆರಂಭದಲ್ಲಿ ಕಂಡು ಬಂತು. ಕೊನೆಗೆ ಒಂದು ದಿನದ ಕಾರ್ಯಕ್ರಮ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವೇದಿಕೆ ಸೃಷ್ಟಿಸಿ ಅದ್ದೂರಿಯಾಗಿ ನಡೆಸುವುದು, ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ವಿವಿಧ ಕಲಾ ತಂಡದೊಂದಿಗೆ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಮತ್ತು ಸಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ ನಡೆಸುವ ಬಗ್ಗೆ ಎಲ್ಲರ ಸಹಮತ ದೊರೆಯಿತು.
ಇಡೀ ಸಮ್ಮೇಳನದ ಅಂದಾಜು ಆಯವ್ಯಯ ಪಟ್ಟಿ ತಯಾರಿಸಲು ಸೂಚಿಸಿದ ಹಿನ್ನಲೆ 10 ಲಕ್ಷದ ಅಂದಾಜು ಪಟ್ಟಿ ಸ್ಥಳದಲ್ಲೇ ಸಿದ್ಧವಾಯಿತು. ಜನರನ್ನು ಹೆಚ್ಚು ಆಕರ್ಷಿಸುವುದು ಮೆರವಣಿಗೆ ಮತ್ತು ಊಟ ಉಪಹಾರ ವ್ಯವಸ್ಥೆ ಎಂಬ ವಿಚಾರ ಪ್ರಸ್ತಾಪವಾಗಿ ಅಚ್ಚುಕಟ್ಟಿನ ರುಚಿಕರ ಊಟದ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯಿತು. ಬೆಳಿಗ್ಗೆ ಅದ್ದೂರಿ ಮೆರವಣಿಗೆ ನಂತರ ಉದ್ಘಾಟನೆ, ಕವಿಗೋಷ್ಠಿ, ಸಂವಾದ ಕಾರ್ಯಕ್ರಮ ಕ್ರಮಬದ್ಧ ನಡೆಸಲು ತೀರ್ಮಾನಿಸಲಾಯಿತು. ಈ ಜೊತೆಗೆ ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸ್ಥಳೀಯ ಸಾಹಿತಿಗಳಲ್ಲಿ ಅವರ ಅನುಭವ, ಸಾಹಿತ್ಯ ಕೃಷಿ ಪರಾಮರ್ಶೆ ನಡೆಸಿ ಅಂತಿಮ ಮೂವರ ಹೆಸರು ಜಿಲ್ಲಾ ಘಟಕಕ್ಕೆ ಕಳುಹಿಸುವ ಬಗ್ಗೆ ಜಿಲ್ಲಾಧ್ಯಕ್ಷರು ವಿವರಿಸಿ ಪರಿಷತ್ತಿನ ನಿಯಮವನ್ನು ಸಭೆಗೆ ತಿಳಿಸಿದರು.
ಕಸಾಪ ರಾಜ್ಯ ಘಟಕದಿಂದ ಒಂದು ಲಕ್ಷ ಬರಲಿದೆ. ಆದರೆ ಸಮ್ಮೇಳನಕ್ಕೆ ಅಗತ್ಯ ಸಂಪನ್ಮೂಲ ಕ್ರೋಢೀಕರಣ ತಾಲ್ಲೂಕಿನ ದಾನಿಗಳಿಂದ ಕಲೆ ಹಾಕಬೇಕಿದೆ. ಕನ್ನಡಾಭಿಮಾನಿಗಳು ಸಾಕಷ್ಟು ಮಂದಿ ಆರ್ಥಿಕ ನೆರವು ನೀಡುತ್ತಾರೆ. ಆದರೆ ಸಮ್ಮೇಳನಕ್ಕೆ ಸಾಧ್ಯವಾಷ್ಟು ವಸ್ತು ರೂಪದಲ್ಲಿ ದಾನ ಸಂಗ್ರಹ ಮಾಡುವ ಬಗ್ಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೂಚಿಸಿದರು. ನಿವೃತ್ತ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಪ್ರತಿ ವಾರ ಸಭೆ ನಡೆಸಿ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ಎಲ್ಲರೂ ಸಮ್ಮತಿ ವ್ಯಕ್ತಪಡಿಸಿದರು. ದಿನಾಂಕ ನಿಗದಿಗೆ ಶಾಸಕರನ್ನು ಹಾಗೂ ಸಂಸದರನ್ನು ಭೇಟಿ ಮಾಡಿ ಸಮ್ಮೇಳನದ ವಿಚಾರ ತಿಳಿಸಿ ಹಲವು ಸಮಿತಿ ರಚನೆ ಹಾಗೂ ಸಂಪನ್ಮೂಲ ಕ್ರೋಢೀಕರಣ ಬಗ್ಗೆ ಚರ್ಚೆ ಮಾಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಪಪಂ ಸದಸ್ಯರಾದ ಮಹಮ್ಮದ್ ಸಾದಿಕ್, ಜಿ.ಆರ್.ಶಿವಕುಮಾರ್, ಶಶಿಕುಮಾರ್, ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್, ಗುಬ್ಬಿ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಎಚ್.ಡಿ.ಯಲ್ಲಪ್ಪ, ಸಿ.ಆರ್.ಶಂಕರ್ ಕುಮಾರ್, ಸಲೀಂ ಪಾಷ, ನಿವೃತ್ತ ಪ್ರಾಚಾರ್ಯ ಜಿ.ಬಿ.ಮಲ್ಲಪ್ಪ, ಕಸಾಪ ಮಾಜಿ ಅಧ್ಯಕ್ಷರಾದ ರಾಜೇಶ್ ಗುಬ್ಬಿ, ಶಾಂತರಾಜು, ರಾಜಕುಮಾರ್ ಅಭಿಮಾನಿಗಳ ಸಂಘದ ಗೋಪಾಲ್ ಅರಸ್, ಪತಂಜಲಿ ಯೋಗ ಸಮಿತಿ ಬಸವರಾಜ್, ಕಸಾಪ ಪದಾಧಿಕಾರಿಗಳಾದ ರಾಜಶೇಖರ್, ಬೆಳ್ಳಾವಿ ಶಿವಕುಮಾರ್, ಕೆ.ಎಂ.ರವೀಶ್, ಕುಮಾರಸ್ವಾಮಿ, ಜಯಣ್ಣ, ನಿವೃತ್ತ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರೇಣುಕಾ ಪ್ರಸಾದ್ ಇತರರು ಇದ್ದರು.