ನ್ಯಾ.ನಾಗಮೋಹನ ದಾಸ್ ಆಯೋಗದ ಒಳಮೀಸಲಾತಿ ವರದಿಯು ವೈಜ್ಞಾನಿಕವಾಗಿದ್ದು, ಪ್ರಸ್ತುತ ಅಧಿವೇಶನದಲ್ಲಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟ ಹಾಗೂ ದಲಿತ ಸಂಘಟನೆಗಳ ಮಹಾ ಒಕ್ಕೂಟ ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸೋಮವಾರ ನಗರದ ದಾವಣಗೆರೆ ನಗರದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿ, ‘ಒಳಮೀಸಲಾತಿಯನ್ನು ಅಧಿವೇಶನದಲ್ಲಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.
ದಲಿತ ಮುಖಂಡರಾದ ಆಲೂರು ನಿಂಗರಾಜ್ ಮಾತನಾಡಿ, “ನಾಳೆ ನಡೆಯುವ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸದಿದ್ದರೆ ದಾವಣಗೆರೆ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಬೀಗ ಜಡಿಯ ಪ್ರತಿಭಟಿಸಲಾಗುವುದು. ಮುಂದಿನ ಹೋರಾಟಗಳಿಂದ ಆಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ನೇರ ಕಾರಣವಾಗಬೇಕಾಗುತ್ತದೆ. ಶೋಷಿತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೂಡಲೆ ಒಳಮೀಸಲಾತಿ ಜಾರಿಗೊಳಿಸಬೇಕು” ಎಂದು ಎಚ್ಚರಿಕೆ ನೀಡಿದರು.

ಕಳೆದ 40 ವರ್ಷಗಳಿಂದ ಸಮುದಾಯ ಮೀಸಲಾತಿ ಅನುಷ್ಠಾನಕ್ಕೆ ಹೋರಾಟ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರವೂ ಸಮುದಾಯದ ಜೊತೆಯಲ್ಲಿ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಹಾಗೂ ಈ ಸಮುದಾಯದ ಕಣ್ಣಿಗೆ ಮಣ್ಣೆರಚಿರುವ ಕೆಲಸ ಹಾಗೂ ದಾರಿ ತಪ್ಪಿಸುವಂತೆ ಕೆಲಸ ಮಾಡುತ್ತಿರುವುದು ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ಎಚ್. ಮಲ್ಲೇಶ್, ನಿ. ಡಿವೈಎಸ್ಪಿ ರವಿ ನಾರಾಯಣ್. ಬಿ. ಹೆಚ್.ವೀರಭದ್ರಪ್ಪ. ನೀಲಗಿರಿಯಪ್ಪ ಹೆಚ್. ಸಿ ಗುಡ್ಡಪ್ಪ ಹೆಗ್ಗೆರೆ ರಂಗಪ್ಪ ಮಾತನಾಡಿ, “ನ್ಯಾ.ನಾಗಮೋಹನ್ದಾಸ್ ರವರ ಆಯೋಗದ ವರದಿ, ನಡೆದಿರುವ ಸಮೀಕ್ಷೆಯು ವೈಜ್ಞಾನಿಕವಾಗಿದೆ. ಕೂಡಲೇ ಒಳಮೀಸಲಾತಿ ವರ್ಗೀಕರಣ ಜಾರಿಗೊಳಿಸಬೇಕು” ಎಂದು ಆಗ್ರಹಿಸಿದರು

“ವರದಿ ವೈಜ್ಞಾನಿಕವಾಗಿದ್ದರೂ ಸಹ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮುದಾಯದಲ್ಲಿ ಮತ್ತು ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಮೂರು ದಶಕಗಳಿಂದ ಮಾದಿಗ ಹಾಗೂ ಮಾದಿಗ ಸಂಬಂಧಿತ ಉಪಜಾತಿಗಳು ಅತೀ ಹೆಚ್ಚು ತುಳಿತಕ್ಕೆ ಒಳಗಾಗಿದೆ. ಅದ್ದರಿಂದ ರಾಜ್ಯ ಸರಕಾರ ಆಗಸ್ಟ್ 19, 2025 ರಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಪ್ರಸಕ್ತ ಉಭಯ ಸದನಗಳ ಅಧಿವೇಶನದಲ್ಲಿ ಮಂಡಿಸಿ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗದಲ್ಲಿ ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ: ಕುರಿಗಾಹಿಯಿಂದ ಧ್ವಜಾರೋಹಣ
ಪ್ರತಿಭಟನೆಯಲ್ಲಿ ಎಂ.ಹಾಲೇಶ್, ಸಿ.ಬಸವರಾಜ್., ಕೆ. ಎಸ್. ಗೋವಿಂದ ರಾಜ್., ಎಲ್ ಡಿ ಗೋಣೆಪ್ಪ, ಮಂಜುನಾಥ್ ಕುಂದುವಾಡ, ದತ್ತ, ದುಗ್ಗಪ್ಪ, ರಾಘವೇಂದ್ರ ಕಡೆಮನೆ, ಶಾಮನೂರ್ ಅರ್ಜುನ್, ಚಿಕ್ಕನಹಳ್ಳಿ ನಿಂಗರಾಜ್, ಮಂಜು ಪೈಲ್ವಾನ್, ಮಲ್ಲಪ್ಪ, ರಂಗಣ್ಣ ಸಿರಿಗೆರೆ, ಎಸ್.ಮಲ್ಲಿಕಾರ್ಜುನ್, ಹನುಮಂತಪ್ಪ, ಆಟೋರವಿ. ನಿರಂಜನ ಮೂರ್ತಿ, ಮಲ್ಲಿಕಾರ್ಜುನ ವಾಲಿ. ಅಶೋಕ, ಲಿಂಗರಾಜು ಗಾಂಧಿನಗರ, ಮಂಜುನಾಥ್ ಶಾಂತಿನಗರ, ದೊಡ್ಡಪ್ಪ , ರಾಜು ಶಾಮನೂರು, ಅಂಜಿನಪ್ಪ ಶಾಮನೂರು ನರಗನಹಳ್ಳಿ ರಾಮಚಂದ್ರ ಚಿದಾನಂದ ಸೇರಿದಂತೆ ನೂರಾರು ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.