ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಸಂಭವಿಸಿರುವ ಬಾಣಂತಿಯರು ಮತ್ತು ಶಿಶುಗಳ ಸಾವು ವಿಚಾರದ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ.
ವಿಧಾನಪರಿಷತ್ನ ಸೋಮವಾರದ ಕಲಾಪದಲ್ಲಿ ಸದಸ್ಯರಾದ ಎನ್.ನಾಗರಾಜ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿರುವ ಸಚಿವರು, ಬೆಳಗಾವಿ ಪ್ರಕರಣದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಸಮಗ್ರ ವರದಿ ಸಲ್ಲಿಸಲು ತಿಳಿಸಿದ್ದೇನೆ ಎಂದರು.
ನಮ್ಮ ರಾಜ್ಯದಲ್ಲಿ ಬಾಣಂತಿಯರು/ಶಿಶುಗಳ ಮರಣ ಪ್ರಮಾಣ 7.97 ಆವರೇಜ್ ಇದೆ. ಬೆಳಗಾವಿಯಲ್ಲಿ 7.72 ರಷ್ಟು ಇದೆ. ಇದನ್ನು ನಾನು ಸಮರ್ಥನೆ ಮಾಡುತ್ತಿಲ್ಲ. ಈ ಕುರಿತು ಮಾಹಿತಿ ನೀಡುತ್ತೇನೆ ಎಂದರು.
ವಿವಿಧ ಕಾರಣಗಳ ಬಗ್ಗೆ ತನಿಖೆ
ಬೆಳಗಾವಿ ಬಿಮ್ಸ್ ಗೆ ತುಂಬಾ ದೂರದ ಊರು, ಗ್ರಾಮಗಳಿಂದ ಜನರು ಬರುತ್ತಾರೆ. ಹೈ ರಿಸ್ಕ್ ಪ್ರೆಗ್ನೆನ್ಸಿಸ್ ಕೂಡ ಇರುತ್ತದೆ. ಈ ಮರಣಗಳಿಗೆ ಸಾಕಷ್ಟು ಕಾರಣ ಇವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ತಿಳಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಕೂಡ ಎಲ್ಲಾ ಆಸ್ಪತ್ರೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ಆಸ್ಪತ್ರೆಗೆ ಪ್ಲಾಟಿನಮ್ ಅವಾರ್ಡ್ ಕೂಡ ಬಂದಿದೆ. ಇಲ್ಲಿ ಸಿಬ್ಬಂದಿ ಕೊರತೆ ಅಥವಾ ವೈದ್ಯರ ಸಮಸ್ಯೆ ಇಲ್ಲ ಎಂದು ಡಾ. ಪಾಟೀಲ್ ತಿಳಿಸಿದರು.
ಈ ಹಿಂದಿನ ಅವಧಿಯಲ್ಲಿ ನಾನು ಸಚಿವನಾದ ಸಂದರ್ಭದಲ್ಲಿ ಈ ಕಟ್ಟಡ ಪೂರ್ಣ ಆಗಿರಲಿಲ್ಲ. ಈಗ ನಾನು ಮತ್ತೆ ಇದೇ ಖಾತೆ ವಹಿಸಿಕೊಂಡ ನಂತರ ಆ ಕಟ್ಟಡ ಪೂರ್ಣಗೊಳಿಸಿ ಅಗತ್ಯ ಹಾಗೂ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಿದ್ದೇನೆ ಎಂದು ತಿಳಿಸಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯ ಪ್ರಗತಿಯಲ್ಲಿ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆ ಆರಂಭವಾಗಿದೆ. ಆದರೆ ಇನ್ನೂ ಲೋಕಾರ್ಪಣೆ ಆಗಿಲ್ಲ. ಯಾರಿಗೂ ತೊಂದರೆ ಆಗಬಾರದು. ಎಲ್ಲರಿಗೂ ಸೂಕ್ತ ಆರೋಗ್ಯ ಸೇವೆ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಎಂಟು ಜನ ಸೂಪರ್ ಸ್ಪೆಷಾಲಿಸ್ಟ್ಗಳು ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಟ್ಟಡ ಸೋರುತ್ತಿರೋ ಬಗ್ಗೆ ನಾನು ಖುದ್ದಾಗಿ ಪರಿಶೀಲನೆ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.
ದಿನಾಂಕ ಮುಗಿದ ಔಷಧ ಬಳಸುತ್ತಿಲ್ಲ
ದಿನಾಂಕ ಮುಗಿದ ಔಷಧ ವಿತರಣೆ ಆಗುತ್ತಿರುವ ಬಗ್ಗೆ ಲೋಕಾಯುಕ್ತದಿಂದ ಯಾವುದೇ ವರದಿ ಬಂದಿಲ್ಲ. ಔಷಧ ದಿನಾಂಕ ಮುಗಿದಿರೋದು ಇದ್ದರೆ ಅದನ್ನ ಬಳಕೆ ಮಾಡುತ್ತಿಲ್ಲ. ಈ ಕುರಿತು ಲೋಕಾಯುಕ್ತಕ್ಕೂ ಕೂಡ ಮಾಹಿತಿ ಕೊಟ್ಟಿದ್ದೇವೆ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ವಿವರಿಸಿದರು.