ವಿಜಯಪುರ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ವಸತಿ ನಿಲಯಗಳ ನಿರ್ವಹಣೆ, ವಿದ್ಯಾರ್ಥಿಗಳ ಕಲ್ಯಾಣ, ಮೂಲಸೌಕರ್ಯಗಳ ಸುಧಾರಣೆ ಹಾಗೂ ಇತರೆ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ʼಹಾಸ್ಟೆಲ್ ಮೆಂಟರ್ಶಿಪ್ʼ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದ್ದು, ಇದಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಡಾ. ಆನಂದ ಕೆ ನೇಮಕ ಮಾಡಿದ್ದಾರೆ.
ಹಾಸ್ಟೆಲ್ ಮೆಂಟರ್ಶಿಪ್ ಎಂಬ ವಿನೂತನ ಕಾರ್ಯಕ್ರಮಕ್ಕೆ ನೇಮಕವಾದ ಹಾಸ್ಟೆಲ್ ಮೆಂಟರ್ಗಳು ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ, ವೈಯಕ್ತಿಕ ಹಾಗೂ ವೃತ್ತಿ ಜೀವನದ ಬೆಳವಣಿಗೆಗೆ ಮಾರ್ಗದರ್ಶನ ನೀಡಲು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವುದು, ಪ್ರತಿ ವಾರ ಕನಿಷ್ಠ ಒಂದು ಬಾರಿ ವಸತಿ ನಿಲಯಗಳಿಗೆ ಭೇಟಿ ನೀಡುವುದು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಪರೀಕ್ಷಾ ಸಿದ್ಧತೆಗೆ ಮನೋಸ್ಥೈರ್ಯ ತುಂಬುವುದು ಮಾಡುತ್ತಾರೆ.
ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವಸತಿ ನೆಲೆಯದಲ್ಲಿ ಪ್ರತಿ ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ಏರ್ಪಡಿಸುವುದು, ಗುಣಮಟ್ಟದ ಆಹಾರ ಪೂರೈಕೆ, ಶುದ್ಧ ಕುಡಿಯುವ ನೀರು ಪೂರೈಸುವುದು, ನೀರು ಸುದ್ದಿಕರಣ ವ್ಯವಸ್ಥೆ, ಪಠ್ಯ ಸಾಮಗ್ರಿಗಳ ವ್ಯವಸ್ಥೆಗೆ ಬಗ್ಗೆ ಕ್ರಮವಹಿಸುವುದು, ಒಟ್ಟಾರೆ ವಿದ್ಯಾರ್ಥಿಗಳ ನಿಲಯಗಳ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ಸೂಕ್ತ ಮಾರ್ಗದರ್ಶನ ಪ್ರೋತ್ಸಾಹ ದೊಂದಿಗೆ ವಿನೂತನ ಕಾರ್ಯಕ್ರಮಗಳು – ಸೌಲಭ್ಯಗಳ ಮೇಲ್ವಿಚಾರಣೆ ವಹಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ವಿಜಯಪುರ | ವಿವಿಧ ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ವಿನೂತನ ಕಾರ್ಯಕ್ರಮಕ್ಕೆ ನೇಮಕವಾದ ಹಾಸ್ಟೆಲ್ ಮೆಂಟರ್ ಗಳು ಪ್ರತಿವಾರ ತಪ್ಪದೇ ವಹಿಸಿಕೊಟ್ಟ ವಸತಿ ನಿಲಯಕ್ಕೆ ಭೇಟಿ ನೀಡಿ ಎಲ್ಲಾ ಅಗತ್ಯ ಸೌಲಭ್ಯ ಕಲ್ಪಿಸಿರುವ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ವೈಯಕ್ತಿಕವಾಗಿ ಗಮನಹರಿಸಿ, ಆ ಕುರಿತು ವಿಡಿಯೋ ಚಿತ್ರೀಕರಣ ಮತ್ತು ಛಾಯಾಚಿತ್ರದೊಂದಿಗೆ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.