ಬೀದಿಬದಿ ವ್ಯಾಪಾರಿಗಳ ಸ್ವಾವಲಂಬಿ ಬದುಕಿಗಾಗಿ ಜಾರಿ ಮಾಡಿದ್ದ ಪಿಎಂ ಸ್ವನಿಧಿ ಸಾಲ ಯೋಜನೆಯನ್ನು ತಡೆಹಿಡಿದಿರುವ ಕ್ರಮವನ್ನು ವಿರೋಧಿಸಿ, ಕೂಡಲೇ ಸ್ವನಿಧಿ ಸಾಲ ಯೋಜನೆ ಪುನಾರಂಭಿಸಲು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು.
ಬೀದಿಬದಿ ವ್ಯಾಪಾರಿಗಳ ಮೇಲಿನ ದಾಳಿ ದಬ್ಬಾಳಿಕೆ ಖಂಡಿಸಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಬೀದಿಬದಿ ವ್ಯಾಪಾರಿಗಳು ಭಾಗವಹಿಸಿದ್ದರು. ಪ್ರತಿಭಟನೆಗೂ ಮುನ್ನ ಬಲ್ಲಾಳ್ ಭಾಗ್ ನಿಂದ ಪಾಲಿಕೆ ಕಚೇರಿವರೆಗೆ ಮೆರವಣಿಗೆ ನಡೆಯಿತು. ಪಾಲಿಕೆಯ ಉಪ ಆಯುಕ್ತ ಸ್ವಾಮಿ ಅವರಿರು ಮನವಿ ಸ್ವೀಕರಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಮಾತನಾಡಿ, “ಬೀದಿಬದಿ ವ್ಯಾಪಾರಿಗಳು ಸ್ವಾಭಿಮಾನದಿಂದ ಬದುಕು ಸಾಗಿಸುವ ಶ್ರಮ ಜೀವಿಗಳು. ಅವರ ಬದುಕಿಗೆ ಆಸರೆ ಆಗಿದ್ದ ಸಾಲ ಯೋಜನೆಯನ್ನು ಸ್ಥಗಿತಗೊಳಿಸಿ ಬೀದಿ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ತಳ್ಳಲಾಗಿದೆ, ಬೀದಿ ವ್ಯಾಪಾರಿಗಳು ಬ್ಯಾಂಕಿನಿಂದ ಪಡೆದ ಸಾಲವನ್ನು ನಿಗದಿತ ಅವಧಿ ಒಳಗೆ ಮರುಪಾವತಿ ಮಾಡುತ್ತಿದ್ದರೂ ಪಿಎಂ ಸ್ವನಿಧಿ ಸಾಲ ಯೋಜನೆ ತಡೆಹಿಡಿದಿರುವುದು ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತಿದೆ. ಕೂಡಲೇ ಸಾಲ ಯೋಜನೆಯನ್ನು ಪುನಾರಂಭಿಸಬೇಕು” ಎಂದು ಒತ್ತಾಯಿಸಿದರು.
ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ, “ಜೂನ್ 2020 ಕೋವಿಡ್ ಸಂಕಷ್ಟ ಎದುರಿಸಲು ಕೇಂದ್ರ ಸರಕಾರ ಜಾರಿಗೆ ತಂದಿದ್ದ ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಬೀದಿ ವ್ಯಾಪಾರಿಗಳಿಗಾಗಿ ಕೇಂದ್ರ ಸರಕಾರ ಬ್ಯಾಂಕುಗಳ ಮೂಲಕ ಜಾರಿಗೊಳಿಸಿದ್ದ ಪಿಎಂ ಸ್ವನಿಧಿ ಕಿರು ಸಾಲ ಯೋಜನೆ ಅಡಿಯಲ್ಲಿ ದೇಶದಲ್ಲಿ ಬೀದಿ ವ್ಯಾಪಾರಿಗಳಿಗೆ ಮೂರು ಹಂತಗಳಲ್ಲಿ 9600 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಸರಕಾರದ ಅಧಿಕೃತ ವರದಿಯಂತೆ 70% ಸಾಲ ಮರುಪಾವತಿ ಆಗಿದ್ದು ಇನ್ನುಳಿದ ಸಾಲ ಮರುಪಾವತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಿರುಸಾಲ ಯೋಜನೆಗಳಲ್ಲಿ ಅತಿ ಹೆಚ್ಚು ಮರು ಪಾವತಿ ಆಗಿರುವ ಸಾಲ ಯೋಜನೆ ಇದಾಗಿದೆ. ಆದರೂ ಕೇಂದ್ರ ಸರಕಾರ 7% ಸಬ್ಸಿಡಿ ಹಣ ನೀಡಲು ಸರಕಾರದ ಬಳಿ ಆರ್ಥಿಕತೆಯ ಕೊರತೆಯ ಕಾರಣಕ್ಕಾಗಿ ಪಿಎಂ ಸಾಲ ಯೋಜನೆಯನ್ನು ತಡೆ ಹಿಡಿದಿದೆ. ಮಂಗಳೂರು ನಗರದಲ್ಲಿ ಅತೀ ಹೆಚ್ಚು 8000ಕ್ಕೂ ಹೆಚ್ಚು ಮಂದಿಗೆ ಸಾಲ ನೀಡಲಾಗಿದೆ ಗರಿಷ್ಟ ಮಟ್ಟದಲ್ಲಿ ಮರು ಪಾವತಿಯು ಆಗಿದೆ. ಆದರೆ ಎರಡು ಮತ್ತು ಮೂರನೇ ಹಂತದ ಸಾಲ ನೀಡುವಾಗ ಬ್ಯಾಂಕ್ ಅಧಿಕಾರಿಗಳು ಅನಗತ್ಯ ದಾಖಲೆ ಕೇಳುವುದು,ಸಿಬಿಲ್ ಅಂಕಗಳನ್ನು ಮಾನದಂಡ ಮಾಡಿಕೊಂಡು ಬಡ ಬೀದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡಲಾಗಿದೆ. ಇದೀಗ 50000 ಸಾಲ ಮರುಪಾವತಿ ಮಾಡಿದವರಿಗೆ ಒಂದು ಲಕ್ಷ ಕೊಡಲು ಅವಕಾಶ ಇದ್ದರೂ ಬ್ಯಾಂಕುಗಳಿಗೆ ಮುಕ್ತ ಅವಕಾಶ ನೀಡದೆ ಡೇನಲ್ಮ್ ಯೋಜನೆ ಅಡ್ಡಿಯಾಗುತ್ತಿದೆ. ಬ್ಯಾಂಕುಗಳಿಗೆ ಮುಕ್ತ ಅವಕಾಶ ನೀಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಮಂಗಳೂರು | ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನ ಆರಂಭ
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್ ಎಸ್, ಸಂಘದ ಅಧ್ಯಕ್ಷ ಮುಜಾಫರ್ ಅಹ್ಮದ್, ಪ್ರಮುಖರಾದ ಹಂಝ ಮೊಹಮ್ಮದ್, ಸಿಕಂದರ್ ಬೇಗ್, ಎಂ. ಎನ್ ಶಿವಪ್ಪ, ಹಸನ್ ಕುದ್ರೋಳಿ, ಅಬ್ದುಲ್ ಖಾದರ್,ವಿಜಯ್ ಜೈನ್, ಸ್ಟ್ಯಾನಿ ಡಿಸೋಜ, ಚೆರಿಯೋನು ಸುರತ್ಕಲ್, ಎಂ.ಎಸ್ ಮೊಯಿದಿನ್, ಮುತ್ತುರಾಜ್, ಗುಡ್ಡಪ್ಪ, ಶಾಲಿನಿ ಬೋಂದೆಲ್, ಸಿದ್ದಮ್ಮ, ಗೀತಾ ಬಾಯಿ,ವಿನಾಯಕ ಶೆಣೈ, ಗಂಗಮ್ಮ,ಖಾಜ ಮೊಯಿದಿನ್,ರಫೀಕ್ ಪಾಂಡೇಶ್ವರ, ನೌಶಾದ್ ಕಣ್ಣೂರು, ರಿಯಾಜ್ ಮದಕ,ಸಲಾಂ ಸುರತ್ಕಲ್, ಸ್ವಾಮಿ ಲೇಡಿ ಹಿಲ್, ಮಲ್ಲೇಶ್, ಅಬ್ದುಲ್ ಕಾದರ್ ವಾಮಂಜೂರು, ರಫೀಕ್ ಸ್ಟೇಟ್ ಬ್ಯಾಂಕ್, ಹಮೀದ್ ಮುಕ್ಕ ಮತ್ತಿತರರು ಉಪಸ್ಥಿತರಿದ್ದರು.