ಒಳಮೀಸಲಾತಿ ಸಂಬಂಧ ರಾಜ್ಯದ ಕಾಂಗ್ರೆಸ್ ಸರಕಾರವು ಕೇವಲ ರಾಜಕೀಯ ತೀರ್ಮಾನ ವ್ಯಕ್ತಪಡಿಸಿದೆ. ಇಂತಹ ತೀರ್ಮಾನವನ್ನು ಸರಕಾರವು ಯಾವತ್ತೋ ಕೊಡಬಹುದಾಗಿತ್ತು. ಇಷ್ಟು ಕಾಯಬೇಕಿರಲಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಸರಕಾರ ಸಾಮಾಜಿಕ ನ್ಯಾಯದ ಪರವಾಗಿ ಇದೆಯೇ ಎಂಬುದು ರಾಜ್ಯದ ಜನರಿಗೆ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ರಾಜ್ಯದ ಕಾಂಗ್ರೆಸ್ ಸರಕಾರವು ಒಳ ಮೀಸಲಾತಿ ವಿಷಯದಲ್ಲಿ ಒಂದು ತೀರ್ಮಾನಕ್ಕೆ ಬಂದ ವಿಚಾರ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈ ತೀರ್ಮಾನವು ಸುಪ್ರೀಂ ಕೋರ್ಟ್ ಆದೇಶದ ಪರವಾಗಿ ಅಥವಾ ಸದಾಶಿವ ಆಯೋಗದ ಪರವಾಗಿಯೂ ಇಲ್ಲ. ನಾಗಮೋಹನ್ ದಾಸ್ ಆಯೋಗದ ವಿಚಾರಗಳೂ ಇದರಲ್ಲಿ ಇಲ್ಲ” ಎಂದು ಆಕ್ಷೇಪಿಸಿದರು.
“ನ್ಯಾ.ನಾಗಮೋಹನ್ ದಾಸ್ ಅವರು 5 ಗುಂಪುಗಳಾಗಿ ವಿಂಗಡಿಸಿದ್ದರು. ನೀವು ಅದನ್ನು ತಿರಸ್ಕಾರ ಮಾಡಿ, 3 ಗುಂಪಾಗಿ ಸೀಮಿತಗೊಳಿಸಿದ್ದೀರಿ. ಎಡ, ಬಲ ಮತ್ತು ಸ್ಪೃಶ್ಯ ಸಮುದಾಯವಾಗಿ ಮಾಡಿದ ಮಾಹಿತಿ ಇದೆ. ಹಾಗಾದಲ್ಲಿ ಅಲೆಮಾರಿ ಸಮುದಾಯಗಳು, ಮೂಲ ಜಾತಿಗಳೇ ಇಲ್ಲದವರಿಗೆ ಯಾವ ನ್ಯಾಯವನ್ನು ನೀವು ಕೊಡುತ್ತೀರಿ” ಎಂದು ಪ್ರಶ್ನಿಸಿದರು.
“ಸರಕಾರವು ಸಮಸ್ಯೆಗೆ ಇತಿಶ್ರೀ ಹಾಕಿಲ್ಲ; ಮತ್ತೆ ಗೊಂದಲ ಸೃಷ್ಟಿಸಿದೆ ಅಂದು ಅನೇಕರ ಅಭಿಪ್ರಾಯ ಎಂದು ಹೇಳಿದರು. ನಮ್ಮ ಸರಕಾರವು ಮೀಸಲಾತಿ ಪ್ರಮಾಣ ಹೆಚ್ಚಿಸಿ 4 ಗುಂಪಾಗಿ ವಿಂಗಡಿಸಿ ಕೊಟ್ಟ ಒಳ ಮೀಸಲಾತಿಯನ್ನು ನೀವು ಲೇವಡಿ ಮಾಡಿದ್ದೀರಿ. ಜೊತೆಗೆ ಗೊಂದಲ ಸೃಷ್ಟಿ ಮಾಡಿದ್ದೀರಿ. ಆಗ ಮತಬ್ಯಾಂಕಿಗಾಗಿ ಜಾತಿ ಜಾತಿಗಳನ್ನು ವಿಂಗಡಿಸಿ ನೀವು ಪ್ರಯೋಜನ ಪಡೆದುಕೊಂಡಿದ್ದೀರಿ” ಎಂದು ಆಕ್ಷೇಪಿಸಿದರು.
“ನೀವು ನಾವು ಕೊಟ್ಟ ಅದೇ ಶೇ 17 ಪ್ರಮಾಣದಲ್ಲೇ ಮೀಸಲಾತಿ ಕೊಟ್ಟಿದ್ದೀರಿ. ನಿಮ್ಮ ಇಬ್ಬಗೆಯ ನೀತಿಗೆ ನೀವು ರಾಜ್ಯದ ಜನರ ಕ್ಷಮೆ ಕೇಳಿ ಮುಂದಡಿ ಇಡಬೇಕಿದೆ” ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕಕುಮಾರ್, ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಕೆ. ಪ್ರತಾಪಸಿಂಹ ನಾಯಕ್ ಅವರು ಉಪಸ್ಥಿತರಿದ್ದರು.