ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗದ ಘಟಕಗಳ ಆಶ್ರಯದಲ್ಲಿ ನಡೆದ ದಿವಗಂತ ರಾಜೀವ್ ಗಾಂಧಿಯವರ 81 ನೇ ಹಾಗೂ ದಿವಂಗತ ದೇವರಾಜ್ ಅರಸು ರವರ 110 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾಜಿ ಪ್ರಧಾನಿ, ಭಾರತ ರತ್ನ ರಾಜೀವ್ ಗಾಂಧಿಯವರು ‘ಆಧುನಿಕ ಭವ್ಯ ಭಾರತದ ಶಿಲ್ಪಿ’ ಎಂದು ಬಣ್ಣಿಸಿದರು.
ದೇಶದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯಾದ ರಾಜೀವ್ ಗಾಂಧಿಯವರು ತಮ್ಮ ದೂರದೃಷ್ಟಿಯ ಚಿಂತನೆಗಳನ್ನು ಸಾಕಾರಗೊಳಿಸಿ ಭಾರತ ದೇಶವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ದರು. ರಾಜೀವ್ ಗಾಂಧಿಯವರು ಪ್ರಧಾನಿಯಾಗಿ ನಿರ್ವಹಿಸಿದ ಕೆಲಸ ಕಾರ್ಯಗಳನ್ನು ದೇಶ ಮರೆಯುವಂತಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಕರ್ನಾಟಕ ರಾಜ್ಯದ ಸುಧೀರ್ಘ ಅವಧಿಯ ಮುಖ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದ ದೇವರಾಜ್ ಅರಸು ರವರು ಸಮಾನತೆಯ ಹರಿಕಾರರಾಗಿ ತಮ್ಮ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾರೆ. ಉಳುವವನೆ ಭೂಮಿ ಒಡೆಯ ಎಂದ ಅರಸುರವರು ಎಂದಿಗೂ ಚಿರಸ್ಮರಣಿಯರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ. ಪಿ. ಸುರೇಶ್ ಕಾಂಗ್ರೆಸ್ ಪಕ್ಷದ ಮಹಾನ್ ನಾಯಕರುಗಳಾದ ರಾಜೀವ್ ಗಾಂಧಿ ಮತ್ತು ದೇವರಾಜ್ ಅರಸುರವರ ಸಾಧನೆಗಳನ್ನು ಪ್ರತಿಯೊಬ್ಬರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು.
ಮಡಿಕೇರಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ನೆರವಂಡ ಉಮೇಶ್ ಮಾತನಾಡಿ ದೇವರಾಜ್ ಅರಸುರವರಿಗೆ ಸಮಾನವಾದ ಮತ್ತೊಬ್ಬ ಮುಖ್ಯಮಂತ್ರಿಯನ್ನು ಈ ರಾಜ್ಯ ಮತ್ತು ದೇಶದಲ್ಲಿ ಕಾಣಲು ಸಾಧ್ಯವಿಲ್ಲ. ಅವರ ಸಮಾಜವಾದಿ ಚಿಂತನೆಗಳು ಬಡವರು, ದುರ್ಬಲರಿಗೆ ವರದಾನವಾಯಿತು ಎಂದು ತಿಳಿಸಿದರು. ರಾಗದ್ವೇಷಗಳನ್ನು ಹೊಂದಿರದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಅಟಲ್ ಬಿಹಾರಿ ವಾಜಪೇಯಿರವರ ಚಿಕಿತ್ಸೆಗೆ ನೆರವಾಗಿದ್ದ ಘಟನೆಯನ್ನು ಸ್ಮರಿಸಿದರು.
ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ ಮಾತನಾಡಿ ಕಾಂಗ್ರೆಸ್ ಪಕ್ಷದ ನೇತಾರರ ಬಗ್ಗೆ ಹೆಚ್ಚು ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು. ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷ ಜಿ. ಸಿ. ಜಗದೀಶ್ ಮಾತನಾಡಿ ತಾವು ನಿರುದ್ಯೋಗಿಯಾಗಿದ್ದಾಗ ತಮ್ಮ ನೆರವಿಗೆ ರಾಜೀವ್ ಗಾಂಧಿಯವರು ಜಾರಿಗೊಳಿಸಿದ ರೋಜ್ ಗಾರ್ ಯೋಜನೆಯ ಫಲಾನುಭವಿಯಾಗಿದ್ದನ್ನು ವಿವರಿಸಿದರು. ಸೇವಾ ದಳದ ಜಿಲ್ಲಾಧ್ಯಕ್ಷ ಕಾನೆ ಹಿತ್ಲು ಮೊಣ್ಣಪ್ಪ ಕಾರ್ಯಕ್ರಮದ ಕುರಿತು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವಿಕಲಚೇತನರ ಮನೆ ಬಾಗಿಲಿಗೆ ಯುಡಿಐಡಿ ಕಾರ್ಡ್ : ಡಾ ರವಿಕುಮಾರ್
ಕಾರ್ಯಕ್ರಮದಲ್ಲಿ ಕೆಡಿಪಿ ಸದಸ್ಯರು , ನಗರ ಸಭಾ ಸದಸ್ಯರು ,ಅನುಷ್ಠಾನ ಸಮಿತಿ ಸದಸ್ಯರು, ಸೇರಿದಂತೆ ಕಾರ್ಯಕರ್ತರು, ಪ್ರಮುಖರು ಇದ್ದರು.