ರಾಯಚೂರಿನ ಅನ್ವರಿ – ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ ರಸ್ತೆಯ ಕಾಮಗಾರಿ ಅರ್ಧಕ್ಕೆ ಮೊಟಕುಗೊಂಡು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಮಳೆ ನೀರು ಹಾಗೂ ಕೆಸರು ತುಂಬಿ ಸಂಚಾರಕ್ಕೆ ರಸ್ತೆಯೇ ತೀವ್ರ ಅಡಚಣೆಯಾಗಿದ್ದು, ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಾಮಗಾರಿ ಶುರುವಾಗಿ ಐದಾರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದ ರಸ್ತೆ ತುಂಬಾ ತಗ್ಗು ಗುಂಡಿಗಳು ಬಾಯ್ತೆರೆದು ನಿಂತಿವೆ. ಜೀವ ಕೈಯಲ್ಲಿಡಿದು ವಾಹನ ಓಡಿಸುವ ಸವಾರರು ಇದೀಗ ಸರ್ಕಾರದಿಂದ ”ಜೀವ ಗ್ಯಾರಂಟಿ’ ನಿರೀಕ್ಷೆಯಲ್ಲಿದ್ದಾರೆ.
ವಾಹನಗಳು ಪಲ್ಟಿಯಾಗುವ ಮತ್ತು ಕೆಟ್ಟು ನಿಂತು ಹೋಗುವ ಪರಿಸ್ಥಿತಿಯನ್ನು ದಿನ ನಿತ್ಯ ಎದುರಿಸಬೇಕಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ಹಂಚಿಕೊಂಡರು. ಕೆಲವು ದಿನಗಳ ಹಿಂದೆ ಇದೇ ರಸ್ತೆಯಲ್ಲಿ ಬಸ್ ಒಂದು ಕೆಸರಿನಲ್ಲಿ ಸಿಲುಕಿಕೊಂಡ ಪರಿಣಾಮ ಸಾರ್ವಜನಿಕರು ಭಯಭೀತರಾಗಿ ಬಸ್ ನಿಂದ ಕೆಳಗಿಳಿದರು. ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ತೆರಳುವ ನೌಕರರು ಸೇರಿದಂತೆ ಸಾಮಾನ್ಯ ಜನತೆಗೆ ಅತೀ ಪೀಕಲಾಟ.
ಈ ಬಗ್ಗೆ ಹಿರೇನಗನೂರು ಗ್ರಾಮದ ನಿವಾಸಿ ಮಾತನಾಡಿ, “ಹಟ್ಟಿ ಪಟ್ಟಣದಿಂದ – ಅನ್ವರಿ ಗ್ರಾಮಕ್ಕೆ ಸುಮಾರು 10 ಕಿಮೀ ಸಂಚಾರಿಸಬೇಕಾಗಿದೆ. ಈ ರಸ್ತೆಗೆ ತಗ್ಗು ಗುಂಡಿಗಳಿಂದ ಹಿಡಿದು ಶಾಲಾ ಬಸ್ ಗಳು ಬರಲು ಹಿಂದೇಟು ಹಾಕುತ್ತವೆ. ಇದರಿಂದ ಶಾಲಾ ಮಕ್ಕಳು ಆಟೋ, ದ್ವಿಚಕ್ರ ವಾಹನಗಳ ಮೊರೆ ಹೋಗುತ್ತಾರೆ. ಕೆಸರಿನಲ್ಲಿ ಸಿಲುಕಿ ಪಲ್ಟಿಯಾಗುವ ಘಟನೆಗಳು ಸಂಭವಿಸಿವೆ. ಗ್ರಾಮದಿಂದ ನೂರಾರು ಕಾರ್ಮಿಕರು ಚಿನ್ನದ ಗಣಿಗೆ ಇದೆ ಮಾರ್ಗದ ಮೂಲಕ ತೆರಳುತ್ತಾರೆ. ನಿತ್ಯ ಅಧಿಕಾರಿಗಳಿಗೆ ಶಾಪ ಹಾಕುವುದು ತಪ್ಪಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ನಾಲ್ಕೈದು ವರ್ಷಗಳಿಂದ ಈ ಗ್ರಾಮದಲ್ಲಿರುವ ಮುಖ್ಯರಸ್ತೆ ಡಾಂಬರೀಕರಣ ಕಾಣದೆ ನಿವಾಸಿಗಳ ಮತ್ತು ಜಾನುವಾರಗಳ ಪ್ರಾಣವನ್ನು ತೆಗೆದುಕೊಳ್ಳುವ ಮಟ್ಟಕ್ಕೆ ಹದಗೆಟ್ಟು ಅನೇಕ ಅಪಘಾತಗಳಿಗೆ ಮುನ್ನುಡಿಯನ್ನು ಬರೆದಿದೆ. ಕಳೆದ ಒಂದು ತಿಂಗಳ ಕಾಲದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ರಸ್ತೆಯೂ ಸಂಪೂರ್ಣವಾಗಿ ಗುಂಡಿಗಳಿಂದ ಕೂಡಿ ವಾಹನ ಸವಾರರಿಗೆ, ಹೊಲಗಳಿಗೆ ತೆರಳುವ ರೈತರಿಗೆ ಮತ್ತು ಜಾನುವಾರಗಳಿಗೆ ಪ್ರಾಣ ಭಯದ ಸಂಕಷ್ಟವನ್ನು ತಂದೊಡ್ಡಿವೆ ಎಂದರು.
ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ್ ಅವರು ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆಂದು ಗ್ರಾಮಕ್ಕೆ ಬಂದಾಗ ಗೆಲ್ಲಿಸಿ ರಸ್ತೆ ಡಾಂಬರೀಕರಣ ಮಾಡಲಾಗುವುದು ಮತ್ತು ಗ್ರಾಮದ ಕೆಲವು ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದ್ದರು. ಆದರೆ ಚುನಾವಣೆ ಗೆದ್ದು ಮೂರು ವರ್ಷ ಕಳೆದರೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಹೀಗೆ ಗ್ರಾಮದ ರಸ್ತೆ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಹಟ್ಟಿ ಪಟ್ಟಣದಿಂದ ಅನ್ವರಿ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯ ಮೂರ್ನಾಲ್ಕು ಗ್ರಾಮದವರು ರಸ್ತೆ ತಡೆದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಟ್ಟಡ ಕಾರ್ಮಿಕ ಮುಖಂಡ ರಮೇಶ್ ವೀರಾಪುರ ಮಾತನಾಡಿ, “ಕೋವಿಡ್ ನಂತರ ಬಜೆಟ್ ಇಲ್ಲವೆಂದು ಕಾಮಗಾರಿ ಅರ್ಧಕ್ಕೆ ಮೊಟಕುಗೊಂಡಿದೆ. ಕೋಟಿಗಟ್ಟಲೆ ಅನುದಾನ ಬಿಡುಗಡೆಯಾದರೂ ಸುಮಾರು ವರ್ಷಗಳಿಂದ ರಸ್ತೆ ಪರಿಸ್ಥಿತಿ ಕೇಳುವವರಿಲ್ಲ. ಹಿಂದೆ ಬಸ್ ಕೆಸರಲ್ಲಿ ಸಿಲುಕಿ ಸ್ಥಳೀಯರ ಮೂಲಕ ಜೆಸಿಬಿಯಿಂದ ಎಳೆದೊಯ್ಯಲಾಯಿತು. ಇಂತಹ ಅನೇಕ ಘಟನೆಗಳು ಸಂಭವಿಸಿದರು ಇತ್ತ ಕಡೆ ಗಮನ ಹರಿಸುತ್ತಿಲ್ಲ.ದೊಡ್ಡ ದುರ್ಘಟನೆ ಸಂಭವಿಸಿದಾಗ ಎಲ್ಲಾ ಅಧಿಕಾರಿಗಳು ದೌಡಾಯಿಸುತ್ತಾರೆ. ಹಲವು ಬಾರಿ ಗಮನಕ್ಕೆ ತಂದರು ತಮಗೆ ಸಂಬಂಧವಿಲ್ಲದಂತೆ ಶಾಸಕರು, ಅಧಿಕಾರಿಗಳು ಇದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಂದ ಶಾಸಕರ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ರಾಯಚೂರು | ರಸಗೊಬ್ಬರ ದುಬಾರಿ ಮಾರಾಟಕ್ಕೆ ಕಾನೂನು ಕ್ರಮ : ಶರಣಪ್ರಕಾಶ ಪಾಟೀಲ್
ಒಂದೆಡೆ ಮಹಾನಗರಗಳು, ಸ್ಮಾರ್ಟ್ ಸಿಟಿಗಳು ತಲೆ ಎತ್ತುತ್ತಿವೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಗ್ರಾಮೀಣ ಭಾಗಗಳಲ್ಲಿ ಬಹುತೇಕ ಹಳ್ಳಿಗಳಲ್ಲಿ ಕನಿಷ್ಠ ಓಡಾಡಲು ರಸ್ತೆ ಕೂಡ ಸರಿಯಾಗುವುದಿಲ್ಲ. ಇದು ಸಾಮಾಜಿಕ, ಆರ್ಥಿಕ ಅಸಮಾನತೆಗಳನ್ನು ಎತ್ತಿ ತೋರಿಸುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗೆ ಉತ್ತಮ ಗುಣಮಟ್ಟದ ಡಾಂಬರೀಕರಣ ಮಾಡಿಸಬೇಕು. ಸವಾರರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಕೊನೆ ಹಾಡಬೇಕು ಎಂಬುದು ಗ್ರಾಮಸ್ಥರ ಮನವಿ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್