ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಅಂಗವಾಗಿ ಎರಡು ದಿವಸ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿಳಿಸಿದರು.
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ʼಗಡಿಭಾಗವನ್ನು ಡಾ.ಬಸವಲಿಂಗ ಪಟ್ಟದ್ದೇವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಮತ್ತು ಅಧ್ಯಾತ್ಮಿಕವಾಗಿ ಬೆಳಗಿಸುವ ಕೆಲಸ ಮಾಡಿದ್ದಾರೆ. ಅವರ ಅಮೃತ ಮಹೋತ್ಸವ ಸವಿನೆನಪಿನಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಿದ್ದು ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜ್ಯರಿಗೆ ಕೃತಜ್ಞತೆ ಸಲ್ಲಿಸಬೇಕುʼ ಎಂದು ಹೇಳಿದರು.
ʼಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಿತಿಯಿಂದ ಆ.23, 24ರಂದು ಎರಡು ದಿನ ʼಪೂಜ್ಯರು ನಡೆದು ಬಂದ ದಾರಿʼ ವಿಷಯದ ಮೇಲೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ವಿವಿಧ ಗೋಷ್ಠಿಯಲ್ಲಿ ನಾಡಿನ ಸಾಹಿತಿ, ಚಿಂತಕರು, ಬುದ್ದಿಜೀವಿಗಳು, ಉಪನ್ಯಾಸಕರು ಭಾಗವಹಿಸಿ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಲ್ಲಿದ್ದಾರೆ ಎಂದರು.

ಶನಿವಾರ (ಆ.23) ಬೆಳಿಗ್ಗೆ 10 ಗಂಟೆಗೆ ಪೂಜ್ಯರು ನಡೆದು ಬಂದ ದಾರಿ ರಾಷ್ಟ್ರೀಯ ವಿಚಾರ ಸಂಕಿರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದಾರೆ. ತೆಲಂಗಾಣ ರಾಜ್ಯದ ಪಂಚಮಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ನಿಲಂಗಾ ವಿರಕ್ತ ಮಠದ ಸಂಗನ ಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸೂರ್ಯ ಫೌಂಡೇಶನ್ ಅಧ್ಯಕ್ಷ ಅನಂತ ಬಿರಾದಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12ಗಂಟೆಗೆ ನಡೆಯುವ ʼಶ್ರೀಗಳ ಜೀವನ ಸಾಧನೆʼ ಕುರಿತು ಕಲಬುರಗಿ ಕೇಂದ್ರ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಶಿವಗಂಗಾ ರುಮ್ಮಾ ಮಾತನಾಡಲಿದ್ದಾರೆ. ಹಿರಿಯ ಸಾಹಿತಿ ಸೋಮನಾಥ ಯಾಳವಾರ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 3 ಗಂಟೆಗೆ ನಡೆಯುವ ʼಬಸವತತ್ವ ಸಾರ್ವಕಾಲಿಕತೆಗೊಳಿಸುವಲ್ಲಿ ಶ್ರೀಗಳ ಕೊಡುಗೆʼ ಗೋಷ್ಠಿಯಲ್ಲಿ ಧಾರವಾಡ ಪ್ರಗತಿಪರ ಚಿಂತಕ ಡಾ.ಸಿದ್ದನಗೌಡ ಪಾಟೀಲ್ ಉಪನ್ಯಾಸ ನೀಡಲಿದ್ದಾರೆ. ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲಿಂಗಣ್ಣ ಗೊನಾಳ ಅಧ್ಯಕ್ಷತೆ ವಹಿಸುವರು. ಸಂಜೆ 5 ಗಂಟೆಗೆ ನಡೆಯುವ ʼಶ್ರೀಗಳ ಪ್ರಯತ್ನದ ಫಲಗಳು ಮತ್ತು ಬಸವ ಕನಸುಗಳುʼ ಗೋಷ್ಠಿಯಲ್ಲಿ ಕಲಬುರಗಿ ಪ್ರಗತಿಪರ ಚಿಂತಕ ಆರ್.ಕೆ.ಹುಡುಗಿ ಉಪನ್ಯಾಸ ನೀಡುವರು. ನಿವೃತ್ತ ಪ್ರಾಚಾರ್ಯ ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್ ಅಧ್ಯಕ್ಷತೆ ವಹಿಸುವರು.
ಆ.24 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ʼಅಕ್ಷರ ಸಂತ ಡಾ.ಬಸವಲಿಂಗ ಪಟ್ಟದ್ದೇವರುʼ ಗೋಷ್ಠಿಯಲ್ಲಿ ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಕಿರಣ ಗಾಜನೂರು ಉಪನ್ಯಾಸ ನೀಡಲಿದ್ದಾರೆ. ಸಹಾಯಕ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12ಗಂಟೆಗೆ ನಡೆಯುವ ʼಹಿರೇಮಠವನ್ನು ಬಸವ ಮಠವನ್ನಾಗಿಸಿದ ಪೂಜ್ಯರುʼ ವಿಷಯದ ಮೇಲೆ ಬೆಂಗಳೂರಿನ ಚಿಂತಕ ಡಾ.ವಾಸು ಎಚ್.ವಿ. ಮಾತನಾಡಲಿದ್ದಾರೆ. ಡಾ.ಗುರುಲಿಂಗಪ್ಪ ಧಬಾಲೆ ಅಧ್ಯಕ್ಷತೆ ವಹಿಸುವರು.
ಇದನ್ನೂ ಓದಿ : ಬೀದರ್ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ
ʼಅಂದು ಮಧ್ಯಾಹ್ನ 3 ಗಂಟೆಗೆ ʼಅನಾಥ ಬಡಮಕ್ಕಳ ಬಾಳಿಗೆ ಬೆಳಕಾದ ಶ್ರೀಗಳುʼ ಗೋಷ್ಠಿಯಲ್ಲಿ ಕಲಬುರಗಿ ಸಾಹಿತಿ ಪ್ರಕಾಶ ಗಿರಿಮಲ್ಲನವರ ಉಪನ್ಯಾಸ ನೀಡುವರು. ಸಾಹಿತಿ ಡಾ.ಕಲ್ಯಾಣರಾವ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಯಂಕಾಲ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಬೀದರ್ ಬಸವಸೇವಾ ಪ್ರತಿಷ್ಠಾನದ ಡಾ.ಗಂಗಾಬಿಕಾ ಅಕ್ಕ ಸಾನ್ನಿಧ್ಯ ವಹಿಸುವರು. ಬೀದರ್ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಎಸ್.ಬಿರಾದಾರ್ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ದಿನೇಶ ಅಮೀನಮಟ್ಟು ಸಮಾರೋಪ ನುಡಿ ನುಡಿಯಲ್ಲಿದ್ದಾರೆʼ ಎಂದು ಶ್ರೀಗಳು ವಿವರಿಸಿದರು.