ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿದ್ದ ಅಕ್ಕ ಕೆಫೆ ಪ್ರಾರಂಭವಾಗಿದ್ದು, ಸಂಜೀವಿನಿ ಮಹಿಳೆಯರು ತಯಾರಿಸಿದ ಉಟೋಪಹಾರ ದೊರೆಯಲಿದೆ. ಕರ್ನಾಟಕ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಅನುಷ್ಠಾನಕ್ಕೆ ತಂದ ಅಕ್ಕ ಕೆಫೆ ಯೋಜನೆಯು ದುಡಿಯುವ ಮಹಿಳೆಯರ ಕೈಗಳಿಗೆ ಕೆಲಸ ನೀಡುವುದರ ಜೊತೆಗೆ ಕಡಿಮೆ ದರದಲ್ಲಿ ಶುಚಿ, ರುಚಿಯಾದ ಊಟ ಉಪಾಹಾರ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಪ್ರಸ್ತುತ ಕಲ್ಯಾಣಪುರ ಗ್ರಾಮ ಪಂಚಾಯತ್ನ ಬ್ರಹ್ಮಶ್ರೀ ಸಂಜೀವಿನಿ ಒಕ್ಕೂಟದ ಮಹಿಳೆಯರು ಅಕ್ಕ ಕೆಫೆಯನ್ನು ನಿರ್ವಹಿಸಲಿದ್ದು, ಈಗಾಗಲೇ ಕ್ಯಾಟರಿಂಗ್ ಉದ್ಯಮದಲ್ಲಿ ಅನುಭವ ಹೊಂದಿರುವ ಇವರು ಆಹಾರ ತಯಾರಿಕೆಯಲ್ಲಿ ಪರಿಣಿತಿ ಹೊಂದಿದ್ದಾರೆ. ಈ ಅಕ್ಕ ಕೆಫೆಯನ್ನು ಸಂಪೂರ್ಣ ಸಂಜೀವಿನಿ ಮಹಿಳೆಯರೇ ನಿರ್ವಹಿಸುವುದು ವಿಷೇಶವಾಗಿದೆ.