ಸ್ತ್ರೀಯರನ್ನು ದೇವಿಯೆಂದು ಪೂಜಿಸುವ ನಾಡಿನಲ್ಲಿ ಮಹಿಳೆಯರ ಮೇಲೆ ಪ್ರತಿದಿನವೂ ದೌರ್ಜನ್ಯ ನಡೆಯುತ್ತಿರುವುದು ದುರಂತ ಮತ್ತು ವಿಪರ್ಯಾಸ. ಕಾನೂನು ದೌರ್ಜನ್ಯವನ್ನು ಅಪರಾಧವೆಂದು ಘೋಷಿಸಿದರೂ, ಸಮಾಜದಲ್ಲಿ ಮಹಿಳೆಯ ಸುರಕ್ಷತೆ ಇನ್ನೂ ದೊಡ್ಡ ಪ್ರಶ್ನೆಯಾಗಿದೆ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯಾ ಬಿ ಕೋರಿಶೆಟ್ಟಿ ವಿಷಾದ ವ್ಯಕ್ತಪಡಿಸಿದರು.
ಮಹಿಳೆಯರ ಮೇಲಿನ ಹೆಚ್ಚುತ್ತಿರುವ ದೌರ್ಜನ್ಯವನ್ನು ಖಂಡಿಸಿ ವಿಜಯಪುರ ನಗರದ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದಿಂದ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
“ವಿದ್ಯಾರ್ಥಿನಿಯರು ತಮ್ಮ ರಕ್ಷಣೆಗೆ ರಕ್ಷಣಾ ಸಾಮಗ್ರಿಗಳನ್ನು ಹೊಂದಿರಬೇಕು. ಸ್ವರಕ್ಷಣಾ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು ಹಾಗೂ ಯಾವುದೇ ಸಂದರ್ಭದಲ್ಲಿಯೂ ಎದೆಗುಂದದೆ ಪ್ರತಿರೋಧಿಸಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ರಸ್ತೆ ಗುಂಡಿಗಳನ್ನು ಮುಚ್ಚಿದ ದಲಿತ ಮುಖಂಡರು
ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಯನ ವಿಭಾಗ ಮತ್ತು ಕೇಂದ್ರದ ನಿರ್ದೇಶಕಿ ಪ್ರೊ. ಲಕ್ಷ್ಮಿದೇವಿ ವೈ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಭಟನೆಯ ವೇಳೆ ಮೌಲ್ಯಮಾಪನ ಕುಲಸಚಿವ ಪ್ರೊ.ಬಸವರಾಜ ಲಕ್ಕಣ್ಣವರ, ಪ್ರಾಧ್ಯಾಪಕರಾದ ಪ್ರೊ. ಪಿ ಜಿ ತಡಸದ, ಪ್ರೊ.ಸಕ್ಸಾಲ್ ಹೂವಣ್ಣ, ಡಾ.ರೋಹಿಣೆ ಭೂಸನೂರಮಠ, ಡಾ.ಅಕ್ಷಯ ಯಾರ್ಡಿ, ಡಾ.ಪ್ರಜಾಪತಿ, ಡಾ.ಭಾಗ್ಯಶ್ರೀ ದೊಡ್ಡಮನಿ, ಡಾ.ಸರೋಜಾ ಸಂತಿ, ಡಾ.ಶಶಿಕಲಾ ರಾಠೋಡ, ಡಾ. ರಜಿಯಾ ನದಾಫ, ಡಾ. ಜಕ್ಕವ್ವಾ ವಠಾರ ಸೇರಿದಂತೆ ಇತರರು ಇದ್ದರು.