ಸಾಕ್ಷಿ ದೂರುದಾರ ತಾನು ಉಜಿರೆಯಲ್ಲಿರುವ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಆಶ್ರಯ ಪಡೆದಿದ್ದೆ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ತಿಮರೋಡಿ ನಿವಾಸಕ್ಕೆ ವಿಶೇಷ ತನಿಖಾ ತಂಡ(ಎಸ್ಐಟಿ) ತಂಡ ತೆರಳಿದ್ದು ಶೋಧ ನಡೆಸಿದೆ. ಸಾಕ್ಷಿ ದೂರುದಾರನ ಸಮೇತವಾಗಿ ತಿಮರೋಡಿ ನಿವಾಸಕ್ಕೆ ಎಸ್ಐಟಿ ತಂಡ ಬಂದಿದೆ ಎಂದು ಹೇಳಲಾಗಿದೆ.
ಬೆಳ್ತಂಗಡಿ ನ್ಯಾಯಾಧೀಶರಿಂದ ಆ.25ರಂದು ಸರ್ಚ್ ವಾರಂಟ್ ಪಡೆದ ಎಸ್ಐಟಿ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಆಗಸ್ಟ್ 26ರ ಬೆಳಗ್ಗೆ 9.30ಕ್ಕೆ ಆರೋಪಿ ದೂರುದಾರರನ ಜೊತೆಯಲ್ಲಿ ಬಂದು ತಿಮರೋಡಿ ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಹೈಕೋರ್ಟ್ ಆದೇಶ ವದಂತಿ; ‘ಮಾಹಿತಿ ಇಲ್ಲ’ ಎಂದ ದ.ಕ. ಎಸ್ಪಿ
ಆರೋಪಿ ದೂರುದಾರನಿಗೆ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಕಳೆದ ಎರಡು ತಿಂಗಳಿಂದ ಆಶ್ರಯ ನೀಡಲಾಗಿತ್ತು. ದೂರುದಾರನಿಗೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲು ಎಸ್ಐಟಿ ತಂಡ ತಿಮರೋಡಿ ನಿವಾಸಕ್ಕೆ ತೆರಳಿದೆ ಎನ್ನಲಾಗಿದೆ.
ತಿಮರೋಡಿ ಮನೆ ಮಾತ್ರವಲ್ಲದೆ ಅವರ ಸಹೋದರ ಮೋಹನ್ ಶೆಟ್ಟಿಯವರ ಮನೆಯಲ್ಲಿಯೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.
