ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ವರದಕ್ಷಿಣೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಕಳೆದ ಒಂದೇ ವಾರದಲ್ಲಿ ವರದಕ್ಷಿಣೆ ಕಿರುಕುಳದಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತೋರ್ವ ಮಹಿಳೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿ 26 ವರ್ಷದ ನಿಕ್ಕಿ ಭಾಟಿಯ ಅವರನ್ನು ಮೂರು ದಿನಗಳ ಹಿಂದೆ ಆಕೆಯ ಪತಿ ಮತ್ತು ಕುಟುಂಬಸ್ಥರು ಭೀಕರವಾಗಿ ಕೊಲೆ ಮಾಡಿದ್ದರು. ಮಂಗಳವಾರ, ಅಮ್ರೋಹಾ ಜಿಲ್ಲೆಯ ಪಾರುಲ್ (32) ಎಂಬ ಮಹಿಳೆಗೆ ವರದಕ್ಷಿಣೆಯ ಕಾರಣಕ್ಕಾಗಿ ಆಕೆಯ ಪತಿ ಮತ್ತು ಕುಟುಂಬಸ್ಥರು ಬೆಂಕಿ ಹಚ್ಚಿದ್ದಾರೆ. ಗಂಭೀರ ಸುಟ್ಟ ಗಾಯಗಳಿಂದ ಬಳಲುತ್ತಿರುವ ಪಾರುಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆರೋಪಿ ಪತಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಅಮ್ರೋಹಾ ಜಿಲ್ಲೆಯ ನರಂಗ್ಪುರ ಗ್ರಾಮದ ನಿವಾಸಿಯಾದ ಪಾರುಲ್ ಅವರು ಕಾನ್ಸ್ಟೇಬಲ್ ಆಗಿರುವ ದೇವೇಂದ್ರ ಅವರನ್ನು 2016ರಲ್ಲಿ ವಿವಾಹವಾಗಿದ್ದರು. ಇಬ್ಬರು ರಾಮ್ಪುರದಲ್ಲಿ ವಾಸವಾಗಿದ್ದರು. ಇತ್ತೀಚೆಗೆ, ದೇವೇಂದ್ರ ಅವರು ಬರೇಲಿಗೆ ವರ್ಗಾವಣೆಗೊಂಡಿದ್ದರು. ರಜೆ ಮೇಲೆ ದಂಪತಿಗಳು ನರಂಗ್ಪುರ ಗ್ರಾಮಕ್ಕೆ ಬಂದಿದ್ದರು. ಈ ವೇಳೆ, ಮದುವೆ ಸಮಯದಲ್ಲಿ ನಡೆದಿದ್ದ ವರದಕ್ಷಿಣೆ ಮಾತುಕತೆಯಂತೆ ವರದಕ್ಷಿಣೆಯನ್ನು ಸಂಪೂರ್ಣವಾಗಿ ನೀಡದ ವಿಚಾರವಾಗಿ ಜಗಳ ನಡೆದಿದೆ. ಪಾರುಲ್ ಅವರನ್ನು ಜೀವಂತವಾಗಿ ಸುಟ್ಟು ಹಾಕಲು ದೇವೇಂದ್ರ ಮತ್ತು ಅವರ ಇತರ ಐವರು ಕುಟುಂಬಸ್ಥರು ಯತ್ನಿಸಿದ್ದಾರೆ. ಪಾರುಲ್ಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾರುಲ್ ಅವರ ಸಹೋದರ ದೇವೇಂದ್ರ ಸೇರಿದಂತೆ ಆರು ಮಂದಿ ವಿರುದ್ಧ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ದೇವೇಂದ್ರ, ಆತನ ತಾಯಿ ಸೋನು, ಗಜೇಶ್, ಜಿತೇಂದ್ರ ಹಾಗೂ ಸಂತೋಷ್ ಸೇರಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಅವರಿಗಾಗಿ ಹುಟುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಮಂಗಳವಾರ ಬೆಳಗ್ಗೆ ನೆರೆಹೊರೆಯವರು ನಮಗೆ ಮಾಹಿತಿ ನೀಡಿದರು. ನಾವು ಸ್ಥಳಕ್ಕೆ ಧಾವಿಸಿದಾಗ, ಪಾರುಲ್ ನೋವಿನಿಂದ ನರಳುತ್ತಿದ್ದಳು. ಆಕೆಗೆ ತೀವ್ರ ಸುಟ್ಟ ಗಾಯಗಳಾಗಿವೆ. ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು, ಪ್ರಥಮ ಚಿಕಿತ್ಸೆ ಕೊಡಿಸಿ, ದೆಹಲಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಕೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ” ಎಂದು ಪಾರುಲ್ ತಾಯಿ ಅನಿತಾ ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ, ನೋಯ್ಡಾದಲ್ಲಿ ನಿಕ್ಕಿ ಭಾಟಿ ಅವರನ್ನು ಆಕೆಯ ಪತಿ ವಿಪಿನ್ ಮತ್ತು ಅತ್ತೆ ಮಾವಂದಿರು ಬೆಂಕಿ ಹಚ್ಚಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ವಿವಾಹದ ಸಮಯದಲ್ಲಿ ನಿಕ್ಕಿ ಅವರ ಪೋಷಕರು ವಿಪಿನ್ಗೆ ವರದಕ್ಷಿಣೆಯಾಗಿ ಸ್ಕಾರ್ಪಿಯೋ ಎಸ್ಯುವಿ, ಮೋಟಾರ್ಸೈಕಲ್ ಹಾಗೂ ಆಭರಣಗಳನ್ನು ನೀಡಿದ್ದರೂ, ಹೆಚ್ಚಿನ ವರದಕ್ಷಿಣೆಗೆ ವಿಪಿನ್ ಮತ್ತು ಪೋಷಕರು ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆಯಂತೆ 36 ಲಕ್ಷ ರೂ. ಹಣವನ್ನು ನೀಡಲಾಗದ ಕಾರಣಕ್ಕೆ ನಿಕ್ಕಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಆಕೆಗೆ ಬೆಂಕಿ ಹಚ್ಚಿ, ಘಟನೆಯನ್ನು ವಿಪಿನ್ ವಿಡಿಯೋ ಮಾಡಿಕೊಂಡಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ವರದಿಯಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗಮನಿಸಿ: ವರದಕ್ಷಿಣೆ ಎಂಬುದು ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸಾಮಾಜಿಕ ಪಿಡುಗು – ಕ್ರೌರ್ಯ. ಮದುವೆಯ ಸಮಯದಲ್ಲಿ ವಧುವಿನ ಕುಟುಂಬವು ವರನಿಗೆ ವರದಕ್ಷಿಣೆ ನೀಡಬೇಕೆಂಬುದು ಸಾಮಾಜಿಕ ನಿಯಮವಾಗಿಬಿಟ್ಟಿದೆ. ವರದಕ್ಷಿಣೆ ಹೆಸರಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ ಮತ್ತು ತಾರತಮ್ಯಗಳು ನಡೆಯುತ್ತಿವೆ. ವರದಕ್ಷಿಣೆ ಪಡೆಯುವ ಮತ್ತು ಕೊಡುವುದರ ವಿರುದ್ಧ ಹಲವು ಕಾನೂನುಗಳಿದ್ದರೂ, ಈ ಪಿಡುಗನ್ನು ತೊಡೆದುಹಾಕಲಾಗಿಲ್ಲ. ವರದಕ್ಷಿಣೆ ವಿರುದ್ಧ ಅರಿವು ಬೆಳೆಸಿಕೊಳ್ಳುವುದು, ದನಿ ಎತ್ತುವುದು ಕೇವಲ ಹೆಣ್ಣು ಮಕ್ಕಳ ವಿಚಾರವಲ್ಲ. ಗಂಡು ಜಾತಿಯ ಕರ್ತವ್ಯವೂ ಆಗಿದೆ.