ಸಿಂಧನೂರು ನಗರದ ಬೀದಿಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಮುಖ್ಯ ರಸ್ತೆ ಮೇಲೆ ವಾಸ್ತವ್ಯ ಹೂಡುವ ಬಿಡಾಡಿ ದನಗಳಿಂದ ವಾಹನ ಸವಾರರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಈ ಬಗ್ಗೆ ನಗರಸಭೆ ಗಮನಕ್ಕೆ ತಂದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ದನಗಳ ಹಾವಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
“ವಿವಿಧ ಕೆಲಸಗಳಿಗಾಗಿ ತಾಲೂಕಿನ ಜನರು ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದರಿಂದ ವಾಹನಗಳ ಸಂಚಾರ ಕೂಡ ಹೆಚ್ಚಾಗಿದೆ. ಈ ಮಧ್ಯೆ ಬಿಡಾಡಿ ದನಗಳ ಕಾಟವೂ ಮಿತಿ ಮೀರಿದೆ. ನಗರಸಭೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ” ಎಂದು ಅಧಿಕಾರಿಗಳ ವಿರುದ್ಧ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಹೋರಾಟಗಾರ ಬಸವರಾಜ್ ಬಾದರ್ಲಿ ಈದಿನ.ಕಾಮ್ ಜೊತೆ ಮಾತನಾಡಿ, “ಸಂಜೆ ವೇಳೆ ಜನದಟ್ಟಣೆ ಹೆಚ್ಚಾಗುತ್ತದೆ. ಇದೇ ಸಂದರ್ಭದಲ್ಲಿ ರಸ್ತೆ ತುಂಬಾ ಬಿಡಾಡಿ ದನಗಳದ್ದೇ ಕಾರುಬಾರು. ದಿನವಿಡೀ ಬೀದಿ, ಬೀದಿ ಸುತ್ತಾಡಿ, ಸಂಜೆ ರಸ್ತೆ ಮಧ್ಯೆದಲ್ಲಿಯೇ ಮಲಗುವ ಬಿಡಾಡಿ ದನಗಳಿಂದ ವಾಹನ ಸಂಚಾರ ಸ್ಥಗಿತವಾಗುತ್ತಿದೆ. ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಗಮನಕ್ಕೆ ಬಂದಿದೆ. ಅವರು ಕೂಡ ಆಟೋ ಮೈಕ್ ಮೂಲಕ ಜನರಿಗೆ ಮಾಹಿತಿ ನೀಡಿದರು .ಆದರೂ ದನಗಳ ಮಾಲೀಕರು ಕ್ಯಾರೇ ಎನ್ನುತ್ತಿದ್ದಾರೆ . ಮಾರುಕಟ್ಟೆಯಲ್ಲಿ ಬೀಡು ಬಿಟ್ಟಿ ಬಿಡಾಡಿ ದನಗಳು ತರಕಾರಿ, ಹಣ್ಣು ತಿಂದು ಹಾಳುಮಾಡುತ್ತಿವೆ. ಇನ್ನು ಬುಟ್ಟಿ ವ್ಯಾಪಾರಿಗಳಂತೂ ಬೀಡಾಡಿ ದಿನಗಳಿಂದ ರೋಸಿ ಹೋಗಿದ್ದಾರೆ. ವ್ಯಾಪಾರಿಗಳು ಅನುಭವಿಸುವ ನಷ್ಟದ ಬಗ್ಗೆ ಯಾರೊಬ್ಬ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೂಡಲೇ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀಡಾಡಿ ದನಗಳ ತಿರುಗಾಟಕ್ಕೆ ಕಡಿವಾಣ ಹಾಕಬೇಕು” ಎಂದು ವ್ಯಾಪಾರಸ್ತರು ಆಗ್ರಹಿಸಿದರು.
ಸಿಂಧನೂರು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಈದಿನ.ಕಾಮ್ ಜೊತೆ ಮಾತನಾಡಿ, “ನಗರದಲ್ಲಿ ಬೀಡಾಡಿ ದನಗಳ ಹಾವಳಿ ಕುರಿತು ಗಮನಕ್ಕೆ ಬಂದಿದೆ, ಬೀಡಾಡಿ ದನ ಅಥವಾ ಬೇರೆ ಯಾವುದೇ ದನಗಳು ಇರಲಿ ಅವುಗಳನ್ನು ವಿಲೇವಾರಿ ಮಾಡಿ ಗೋಶಾಲೆಗೆ ಸೇರಿಸಲು ಹೊಸ ಉಪ ಕಾಯ್ದೆ ತರಲಾಗುತ್ತಿದೆ. ಎರಡು ವಾರದೊಳಗೆ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು